ದೇವನಹಳ್ಳಿ: ಡಿ.31ಕ್ಕೆ ಗೃಹ ಸಚಿವ ಅಮಿತ್ ಷಾ ಭೇಟಿ, ಭದ್ರತೆ ಪರಿಶೀಲಿಸಿದ ಹಿರಿಯ ಅಧಿಕಾರಿಗಳು
ಬೆಂಗಳೂರು ಗ್ರಾಮಾಂತರ, ಡಿ. 30: ದೇವನಹಳ್ಳಿಯ ಆವತಿ ಹಾಗೂ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಶನಿವಾರ (ಡಿಸೆಂಬರ್ 31) ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು, ಪೊಲೀಸರು ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಪೊಲೀಸ್ ಮಹಾನೀರಿಕ್ಷಕ ಎಂ.ಚಂದ್ರಶೇಖರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಕಾರ್ಯಕ್ರಮದ ಸ್ಥಳಗಳು ಹಾಗೂ ಭದ್ರತಾ ವ್ಯವಸ್ಥೆ ಪರಿಶೀಲಿಸಿದರು.
New Year 2023: ಡಿಸೆಂಬರ್ 31ರ ಮಧ್ಯರಾತ್ರಿ 2 ಗಂಟೆಯವರೆಗೆ ಸಿಗಲಿದೆ ಮೆಟ್ರೋ ಸೇವೆ
ಶನಿವಾರ ಬೆಳಿಗ್ಗೆ 11 ಗಂಟೆಗೆ ದೇವನಹಳ್ಳಿಯ ಆವತಿ ಗ್ರಾಮದ 35 ಎಕರೆ ಪ್ರದೇಶದಲ್ಲಿ ಬ್ಯೂರೋ ಆಫ್ ಪೊಲೀಸ್ ರೀಸರ್ಚ್ ಅಂಡ್ ಡೆವಲಪ್ಮೆಂಟ್ (ಬಿ.ಪಿ.ಆರ್.ಡಿ.) ಸಂಸ್ಥೆಯಡಿ ಕಾರ್ಯನಿರ್ವಹಿಸುವ, ಕೇಂದ್ರೀಯ ಪತ್ತೇದಾರಿ ತರಬೇತಿ ಶಾಲೆಯ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮ ನೆರವೇರಲಿದೆ.
ಬೆಂಗಳೂರಿನ ಸೆಂಟ್ರಲ್ ಡಿಟೆಕ್ಟಿವ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ (ಸಿಡಿಟಿಐ) ಸಂಸ್ಥೆಯನ್ನು, ಅರ್ಬನ್ ಪೊಲೀಸಿಂಗ್ (ಸ್ಮಾರ್ಟ್ ಸಿಟಿ ಪೊಲೀಸಿಂಗ್) ಹಾಗೂ ಬ್ಲಾಕ್ ಚೈನ್ ತಂತ್ರಜ್ಞಾನದ ಉತ್ಕೃಷ್ಟತಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಈ ಕೇಂದ್ರದಲ್ಲಿ ಎಲ್ಲಾ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು, ಸಿಪಿಓಗಳು ಹಾಗೂ ಸಿಎಪಿಎಫ್ಗಳ ಪೊಲೀಸ್ ಅಧಿಕಾರಿಗಳಿಗೆ ತರಬೇತಿ ಕೋರ್ಸ್ಗಳನ್ನು ಒದಗಿಸಲಾಗುವುದು.
ಪೊಲೀಸ್ ಅಧಿಕಾರಿಗಳ ತನಿಖಾ ಗುಣಮಟ್ಟವನ್ನು ಸುಧಾರಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ. ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ಈ ಕೇಂದ್ರಕ್ಕಾಗಿ ರಾಜ್ಯ ಸರ್ಕಾರ 35 ಎಕರೆ ಭೂಮಿಯನ್ನು ಒದಗಿಸಿದೆ.
ಆವತಿಯಲ್ಲಿ ಭೂಮಿಪೂಜೆ ಕಾರ್ಯಕ್ರಮದ ನಂತರ ಚಿಕ್ಕಬಳ್ಳಾಪುರ ರಸ್ತೆಯ ಅತ್ತಿಬೆಲೆ ಗ್ರಾಮದ ಸಮೀಪದ ಅನಂತ ವಿದ್ಯಾನಿಕೇತನ ಶಾಲೆ ಆವರಣದಲ್ಲಿ ಹಮ್ಮಿಕೊಂಡಿರುವ ವರ್ಚುವಲ್ ಕಾರ್ಯಕ್ರಮದ ಮೂಲಕ ಬೆಂಗಳೂರಿನಲ್ಲಿರುವ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪ್ರಾದೇಶಿಕ ಪ್ರಧಾನ ಕಛೇರಿಯ ಹಲವು ಯೋಜನೆಗಳ ಉದ್ಘಾಟಿಸಲಿದ್ದಾರೆ.
120 ಸೈನಿಕರ ಬ್ಯಾರಕ್ಗಳು, 42 ವಸತಿ ಕಟ್ಟಡಗಳು, ಜಂಟಿ ಆಡಳಿತಾತ್ಮಕ ಕಟ್ಟಡಗಳು ಹಾಗೂ ಅಧಿಕಾರಿಗಳ ಹಾಗೂ ಅಧೀನ ಅಧಿಕಾರಿಗಳ ಮೆಸ್ ಆನ್ಲೈನ್ ಮೂಲಕ ಉದ್ಘಾಟನೆಗೊಳ್ಳಲಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ , ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಮಹಾನಿರ್ದೇಶಕ ಬಾಲಾಜಿ ಶ್ರೀವಾಸ್ತವ, ಭಾರತ ಟಿಬೇಟ್ ಗಡಿ ಪೊಲೀಸ್ ಮಹಾನಿರ್ದೇಶಕ ಅನೀಶ್ ದಯಾಳ್ ಮತ್ತಿತರ ಗಣ್ಯರು ಮತ್ತು ಆಹ್ವಾನಿತರು ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.