ಎರಡು ವರ್ಷದ ಆಡಳಿತ ತೃಪ್ತಿ ನೀಡಿದೆ : ಸಿದ್ದರಾಮಯ್ಯ
ಬೆಂಗಳೂರು, ಮೇ 13 : ರಾಜ್ಯ ಸರ್ಕಾರದ ಎರಡು ವರ್ಷಗಳ ಆಡಳಿತ ತಮಗೆ ತೃಪ್ತಿ ತಂದಿದ್ದು, ರಾಜ್ಯದ ಜನತೆಗೆ ನೀಡಲಾಗಿದ್ದ 165 ಭರವಸೆಗಳ ಪೈಕಿ 100ಕ್ಕೂ ಹೆಚ್ಚು ಭರವಸೆಗಳನ್ನು ಆಯವ್ಯಯದ ಮೂಲಕ ಈಡೇರಿಸಿರುವ ಸಮಾಧಾನ ತಮಗಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಬೆಂಗಳೂರಿನ ಪ್ರೆಸ್ ಕ್ಲಬ್ ಆವರಣದಲ್ಲಿ ಪ್ರೆಸ್ಕ್ಲಬ್ ಆಫ್ ಬೆಂಗಳೂರು ಹಾಗೂ ವರದಿಗಾರರ ಕೂಟ, ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿದ ಸಂದರ್ಭ ಬುಧವಾರ ಏರ್ಪಡಿಸಿದ್ದ ಮುಖ್ಯಮಂತ್ರಿಗಳ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ರಾಜ್ಯದ ಜನರ ನಿರೀಕ್ಷೆಗೆ ಧಕ್ಕೆಯಾಗದ ರೀತಿ ತಮ್ಮ ಸರ್ಕಾರ ಕೆಲಸ ನಿರ್ವಹಿಸಿದೆ ಎಂಬ ಸಮಾಧಾನವಿದೆ ಎಂದು ನುಡಿದರು.
1 ಕೋಟಿ 8 ಲಕ್ಷ ಬಿಪಿಎಲ್ ಕುಟುಂಬಗಳಿಗೆ ಅನ್ನಭಾಗ್ಯ ಯೋಜನೆ ಮೂಲಕ ಅಕ್ಕಿ ವಿತರಿಸಲಾಗುತ್ತಿದ್ದು, ಈ ಯೋಜನೆ 4 ಕೋಟಿ ಜನರನ್ನ ಒಳಗೊಂಡಿದೆ ಎಂದ ಅವರು, ಈ ವರ್ಷದಿಂದ 10-11 ಲಕ್ಷ ಎಪಿಎಲ್ ಕಾರ್ಡುದಾರರಿಗೂ ಯೋಜನೆ ವಿಸ್ತರಿಸಲಾಗುವುದು ಎಂದು ವಿವರಿಸಿದರು. [ಸಿದ್ದರಾಮಯ್ಯ ಸರಕಾರದ 10 ಜನಪ್ರಿಯ ಯೋಜನೆಗಳು]

ತಮ್ಮ ಸರ್ಕಾರದ ಅಧಿಕಾರಾವಧಿಯಲ್ಲಿ ಅಂದಾಜು 40 ಸಾವಿರ ಕೋಟಿ ಬೆಲೆ ಬಾಳುವ 4052 ಎಕರೆ ಒತ್ತುವರಿಯನ್ನು ತೆರವು ಮಾಡಲಾಗಿದೆ. ಭೂಗಳ್ಳರ ವಿರುದ್ದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಭೂಗಳ್ಳರು ಎಷ್ಟೇ ಪ್ರಭಾವಿಗಳಾಗಿದ್ದರೂ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ತೆರವುಗೊಳಿಸಲಾದ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸಿ ಅದಕ್ಕೆ ಬದ್ದನಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಇದಕ್ಕೆ ಅನುಗುಣವಾಗಿ ಅವಕಾಶ ವಂಚಿತರಿಗೆ ಅವಕಾಶ ಕಲ್ಪಿಸುವುದು, ಸಮಾಜದ ಎಲ್ಲ ಜನರಿಗೆ ವಸತಿ, ಶಿಕ್ಷಣ, ಆರೋಗ್ಯ, ಅನ್ನ ಒದಗಿಸಲು ತಮ್ಮ ಸರ್ಕಾರದ ಮೂಲಕ ಪ್ರಯತ್ನಿಸುತ್ತಿದ್ದು, ಸರ್ವರಿಗೂ ಸಮಪಾಲು, ಸಮಬಾಳು ಸಿಗಬೇಕೆಂಬ ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತಮ್ಮ ಸರ್ಕಾರ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. [ಸಿದ್ದರಾಮಯ್ಯ ಸರಕಾರಕ್ಕೆ 2 ವರ್ಷ ತುಂಬಿದೆ, ಮಾರ್ಕ್ಸ್ ಹಾಕಿ]
2015-16ನೇ ಸಾಲಿಗೆ ಅನ್ವಯಿಸುವಂತೆ 16,320 ಕೋಟಿ ರು. ಅನುದಾನವನ್ನು ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಹಾಗೂ ಗಿರಿಜನ ಉಪ ಯೋಜನೆಗೆ ಮೀಸಲಿರಿಸಿದ್ದು, ಈ ಹಣವನ್ನು ಫಲಾನುಭವಿಗಳಿಗೆ ಖರ್ಚು ಮಾಡದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಸಹ ಕಾಯ್ದೆ ರೂಪಿಸಲಾಗಿದೆ. ನೆರೆಯ ಆಂಧ್ರಪ್ರದೇಶ ಹೊರತುಪಡಿಸಿದರೆ ಈ ಕಾಯ್ದೆ ರೂಪಿಸಿದ ಎರಡನೇ ರಾಜ್ಯ ನಮ್ಮದು ಎಂದು ಹೆಮ್ಮೆಯಿಂದ ಹೇಳಿದರು.
ಪ್ರತಿ ಬಿಪಿಎಲ್ ಕಾರ್ಡುದಾರರ ಕುಟುಂಬದ ಒಬ್ಬ ಸದಸ್ಯನಿಗೆ ಸಹಕಾರ ಸಂಘದ ಸದಸ್ಯತ್ವ ದೊರಕಿಸಿಕೊಡಲು ಸರ್ಕಾರ ಬದ್ದವಾಗಿದ್ದು, ಇದಕ್ಕಾಗಿ ಸದಸ್ಯತ್ವ ಠೇವಣಿಯನ್ನು ಸ್ವತಃ ಸರ್ಕಾರವೇ ಭರಿಸಲಿದೆ. ಯಶಸ್ವಿನಿ ಯೋಜನೆಯಡಿ ಲಾಭ ದೊರಕಬೇಕಾದಲ್ಲಿ ಸಹಕಾರ ಸಂಘದ ಸದಸ್ಯತ್ವ ಅತ್ಯಗತ್ಯ ಎಂದು ಸರಕಾರದ ಸಾಧನೆ ಹೇಳಿಕೊಂಡರು.
ಕೃಷಿ ಭಾಗ್ಯ ಯೋಜನೆಯಡಿ ಒಣಭೂಮಿ ಹೊಂದಿರುವ ರೈತರು ಹನಿ ನೀರಾವರಿ ಪದ್ದತಿ ಅಳವಡಿಸಬೇಕಿದ್ದಲ್ಲಿ ಸರ್ಕಾರ ಅಂತಹ ರೈತರಿಗೆ ಶೇ.90ರಷ್ಟು ಸಬ್ಸಿಡಿ ನೀಡಲಿದೆ ಎಂದ ಮುಖ್ಯಮಂತ್ರಿಗಳು, ರಾಜಸ್ಥಾನದ ನಂತರ ಅತಿ ಹೆಚ್ಚು ಒಣಭೂಮಿ ಹೊಂದಿರುವ ಪ್ರದೇಶ ಕರ್ನಾಟಕ ಎಂದು ಮಾಹಿತಿ ನೀಡಿದರು.
ರೈತರ ಬೆಳಗಳಿಗೆ ತೊಂದರೆಯಾದಂತಹ ಸಂದರ್ಭದಲ್ಲಿ ಪ್ರಥಮ ಬಾರಿಗೆ ರಾಜ್ಯ ಸರ್ಕಾರ 83 ಕೋಟಿ ರೂ. ಪರಿಹಾರ ನೀಡಿ ಅಡಿಕೆ ಬೆಳೆಗಾರರಿಗೆ ಸ್ಪಂದಿಸಿದೆ. ಪ್ರಥಮ ಬಾರಿಗೆ ಒಂದು ಟನ್ ಕಬ್ಬಿಗೆ 250 ಸಬ್ಸಿಡಿಯನ್ನು ಸರ್ಕಾರ ನೀಡಿದೆ. ಅಲ್ಲದೆ, ಟನ್ ಗೆ 100 ರೂ. ತೆರಿಗೆ ವಿನಾಯಿತಿಯನ್ನೂ ನೀಡಿದೆ ಎಂದು ರೈತರ ಪರ ತಾವಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಶ್ರೀಧರ್, ಪತ್ರಕರ್ತರಾದ ಸದಾಶಿವ ಶೆಣೈ, ಚಂದ್ರಶೇಖರ್, ಕೂಟದ ಉಪಾಧ್ಯಕ್ಷ ವಿಠಲ್ ಮೂರ್ತಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications