ಬೆಂಗಳೂರು: ಪೊಲೀಸರಿಂದ ಬೆಳ್ಳಂಬೆಳಿಗ್ಗೆ ಎರಡು ಕಡೆ ಶೂಟೌಟ್
ಬೆಂಗಳೂರು, ನವೆಂಬರ್ 18: ರಾಜ್ಯ ರಾಜಧಾನಿಯಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ ಎರಡು ಕಡೆ ಗುಂಡಿನ ಮೊರೆತ ಕೇಳಿದೆ. ಇಬ್ಬರು ರೌಡಿ ಶೀಟರ್ಗಳ ಮೇಲೆ ಪೊಲೀಸರು ಶೂಟೌಟ್ ನಡೆಸಿದ್ದಾರೆ.
ರೌಡಿಶೀಟರ್ ಮಂಜ ಅಲಿಯಾದ ಬೊಂಡ ಮಂಜನ ಮೇಲೆ ಪೊಲೀಸರು ನಾರಾಯಣನಗರ ಡಬಲ್ ರಸ್ತೆಯಲ್ಲಿ ಶೂಟೌಟ್ ನಡೆಸಿದ್ದಾರೆ. ಅನೇಕ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದ ಮಂಜನನ್ನು ಬಂಧಿಸಲು ತೆರಳಿದ್ದಾಗ ಆತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಇದರಿದ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ.
ಸುಮಾರು 23 ಪ್ರಕರಣಗಳಲ್ಲಿ ಬೇಕಾಗಿದ್ದ ಮಂಜನನ್ನು ಪೊಲೀಸರು ಒಂದು ತಿಂಗಳಿನಿಂದ ಹುಡುಕಾಡುತ್ತಿದ್ದರು. ಆತ ತಲೆಮರೆಸಿಕೊಂಡು ಓಡಾಡುತ್ತಿದ್ದ. ಕೋಣನಕುಂಟೆ ಪ್ರದೇಶದಲ್ಲಿ ಆತ ಓಡಾಡುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು. ಪೊಲೀಸರು ತನ್ನನ್ನು ಬಂಧಿಸಲು ಬರುತ್ತಿದ್ದಾರೆ ಎಂಬ ಸುಳಿವು ಪಡೆದ ಮಂಜ ತಮಿಳುನಾಡಿಗೆ ಪರಾರಿಯಾಗಲು ಪ್ರಯತ್ನಿಸಿದ್ದ.

ನಾರಾಯಣಪುರ ಜೋಡಿ ರಸ್ತೆಯಲ್ಲಿ ಬೈಕ್ನಲ್ಲಿ ಹೋಗುತ್ತಿದ್ದ ಮಂಜನನ್ನು ಅಡ್ಡಗಟ್ಟಿದ ಪೊಲೀಸರು ಶರಣಾಗುವಂತೆ ಸೂಚಿಸಿದ್ದರು. ಆದರೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ. ಗಾಳಿಯಲ್ಲಿ ಗುಂಡು ಹಾರಿಸಿ ಮತ್ತೊಮ್ಮೆ ಎಚ್ಚರಿಕೆ ನೀಡಿದರೂ ಆತ ಡ್ಯಾಗರ್ನಿಂದ ಹೆಡ್ ಕಾನ್ಸ್ಟೆಬಲ್ ನಾಗರಾಜ್ ಮೇಲೆ ಹಲ್ಲಿ ನಡೆಸಿದ್ದಾನೆ. ಆಗ ಸಿಸಿಬಿ ಪೊಲೀಸ್ ಪುನೀತ್ ಮತ್ತು ತಂಡ ಮಂಜನ ಎಡ ಮೊಣಕಾಲಿಗೆ ಗುಂಡು ಹಾರಿಸಿದೆ.
ನಾಗರಾಜ್ ಮತ್ತು ಮಂಜ ಇಬ್ಬರನ್ನೂ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕೊಲೆ ಆರೋಪಿಗೆ ಗುಂಡೇಟು:
ಮತ್ತೊಂದೆಡೆ ಕೊಲೆ ಆರೋಪಿ ವಿಶ್ವ ಅಲಿಯಾಸ್ ಸೈಕೋ ಎಂಬಾತನ ಮೇಲೆ ಬ್ಯಾಡರಹಳ್ಳಿ ಬಳಿಯ ಬ್ರಹ್ಮದೇವರ ಗುಡ್ಡದಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ. ಕಾಮಾಕ್ಷಿಪಾಳ್ಯದಲ್ಲಿ ಮಂಜುನಾಥ್ ಎಂಬುವವರ ಕೊಲೆ ಪ್ರಕರಣ ಆರೋಪಿಯಾಗಿದ್ದ ವಿಶ್ವನ ಇರುವಿಕೆ ಸುಳಿವು ದೊರೆತ ವಿಜಯನಗರ ಎಸಿಪಿ ನಂಜುಂಡೇಗೌಡ ಮತ್ತು ಇನ್ಸ್ಪೆಕ್ಟರ್ ಪ್ರಶಾಂತ್ ತಂಡ ಆತನನ್ನು ಬಂಧಿಸಲು ತೆರಳಿತ್ತು. ಆಗ ವಿಶ್ವ ಹೆಡ್ ಕಾನ್ಸ್ಟೆಬಲ್ ಮಂಜುನಾಥ್ ಅವರ ಮೇಲೆ ಡ್ಯಾಗರ್ನಿಂದ ಹಲ್ಲೆನಡೆಸಿದ್ದಾನೆ. ಕೂಡಲೇ ಪೊಲೀಸ್ ಅಧಿಕಾರಿಗಳು ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.












Click it and Unblock the Notifications