ವಿಬ್ ಗಯಾರ್ ಬಳಿ ಚಿರತೆ ಪ್ರತ್ಯಕ್ಷ, ವದಂತಿ ತಂದ ಆತಂಕ
ಬೆಂಗಳೂರು, ಫೆಬ್ರವರಿ 09 : ವರ್ತೂರಿನಲ್ಲಿರುವ ವಿಬ್ ಗಯಾರ್ ಶಾಲೆಗೆ ಚಿರತೆ ನುಗ್ಗಿದ ಎರಡೇ ದಿನಗಳಲ್ಲಿ ಶಾಲೆಯ ಹಿಂಬದಿಯಲ್ಲಿರುವ ನೀಲಗಿರಿ ತೋಪಿನ ಬಳಿ ಮತ್ತೆರಡು ಚಿರತೆಗಳು ಕಾಡಿನಿಂದ ಬಂದಿರುವ ವದಂತಿ ನಾಗರಿಕರಲ್ಲಿ ಭಾರೀ ಭಯವನ್ನು ಹುಟ್ಟುಹಾಕಿತ್ತು.
ಪೊದೆಯೊಂದರಿಂದ ಪ್ರಾಣಿಯೊಂದು ಓಡಿಹೋದದ್ದನ್ನು ನೋಡಿದ ನಾಗರಿಕರೊಬ್ಬರು ಚಿರತೆ ಇರಬಹುದೆಂದು ತಿಳಿದು ಸುದ್ದಿ ಹಬ್ಬಿಸಿದ್ದಾರೆ. ಆದರೆ, ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಸುತ್ತಲಿನ ನಿವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಭಾನುವಾರ ಚಿರತೆ ಬಂದಿದ್ದ ಹಿನ್ನೆಲೆಯಲ್ಲಿ ಜನರಲ್ಲಿ ಮತ್ತೆ ಬರಬಹುದೆಂಬ ಆತಂಕ ಸಹಜವಾಗಿ ಸೃಷ್ಟಿಯಾಗಿದೆ.
ವಿಬ್ ಗಯಾರ್ ಶಾಲೆಯ ಹಿಂಬದಿಯ ಅಪಾರ್ಟ್ಮೆಂಟ್ಗೆ ಚಿರತೆಗಳೆರಡು ನುಗ್ಗಲು ಯತ್ನಿಸುತ್ತಿವೆ ಎಂದು ತಿಳಿದುಬಂದಿತ್ತು. ಇದರಿಂದ ಕಂಗಾಲಾಗಿರುವ ನಾಗರಿಕರು ಚೀರುತ್ತ, ಕೂಗಾಡುತ್ತ ಮತ್ತು ಪಟಾಕಿ ಹಾರಿಸುತ್ತ ಚಿರತೆಗಳನ್ನು ಓಡಿಸಲು ಯತ್ನಿಸುತ್ತಿದ್ದರು. [ಚಿತ್ರಗಳು : ಬೆಂಗಳೂರು ಶಾಲೆಗೆ ಲಗ್ಗೆ ಹಾಕಿದ ಚಿರತೆ]

ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಕೂಡಲೆ ಧಾವಿಸಿದ್ದು ಚಿರತೆಗಳನ್ನು ಮತ್ತೆ ಕಾಡಿಗಟ್ಟಲು ಅಥವಾ ಹಿಡಿಯಲು ಪ್ರಯತ್ನ ನಡೆಸಿದರು. ಆದರೆ, ಸಾಕಷ್ಟು ಹುಡುಕಾಟ ನಡೆಸಿದ ನಂತರ ಯಾವುದೇ ಚಿರತೆಗಳು ಕಂಡುಬಂದಿಲ್ಲ. ಚಿರತೆಯ ಭಯ ಜನರಲ್ಲಿ ಮೂಡಿದ್ದರಿಂದ ಇಂಥ ವದಂತಿ ಹಬ್ಬಿರಬಹುದು ಎಂದು ಅವರು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ವಿಬ್ ಗಯಾರ್ ಶಾಲೆಗೆ ಪ್ರಾಂಶುಪಾಲ ರೋಶನ್ ಡಿಸೋಜಾ ಅವರು ಬುಧವಾರ ರಜಾ ಘೋಷಿಸಿದ್ದಾರೆ. ಈ ಮೊದಲು ಶಾಲೆಯೊಳಗೆ ಚಿರತೆ ನುಗ್ಗಿದ್ದಾಗ ಅದೃಷ್ಟವಶಾತ್ ರಜಾ ಇದ್ದಿದ್ದರಿಂದ ಭಾರೀ ಅನಾಹುತ ತಪ್ಪಿತ್ತು.
ಭಾನುವಾರ ಶಾಲೆಗೆ ಬಂದಿದ್ದ ಚಿರತೆ : ಕಳೆದ ಭಾನುವಾರ ವಿಬ್ ಗಯಾರ್ ಶಾಲೆಯೊಳಗೆ ಚಿರತೆಯೊಂದು ನುಗ್ಗಿ ಭಾರೀ ಹಾವಳಿ ಎಬ್ಬಿಸಿತ್ತು. ಅರವಳಿಕೆ ಮದ್ದು ನೀಡಲು ಬಂದಿದ್ದ ಸಿಬ್ಬಂದಿಯ ಮೇಲೆಯೇ ದಾಳಿ ಮಾಡಿ ಮೂವರನ್ನು ಗಾಯಗೊಳಿಸಿತ್ತು. ಭಾರೀ ಹರಸಾಹಸಪಟ್ಟನಂತರ ಸಂಜೆ 8 ಗಂಟೆ ಸುಮಾರಿಗೆ ಚಿರತೆಯನ್ನು ಹಿಡಿಯಲಾಗಿತ್ತು. [ಶಾಲೆಗೆ ಮತ್ತೆ ಬಂದ ಚಿರತೆ, ಮೂವರ ಮೇಲೆ ದಾಳಿ]












Click it and Unblock the Notifications