ಜೀವ ಜೀವದ ನಂಟು ಹಾಗು ಬುದ್ಧ ಮತ್ತು ಪರಂಪರೆ
ಮಾರ್ಚ್ 15, ಭಾನುವಾರ ಬೆಳಿಗ್ಗೆ 10 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮುಖ್ಯ ಸಭಾಂಗಣದಲ್ಲಿ ಎರಡು ಪುಸ್ತಕಗಳು ಬಿಡುಗಡೆಯಾಗುತ್ತಿವೆ. ಒಂದು, ಪತ್ರಕರ್ತ ಬಿ ಎಸ್ ಜಯಪ್ರಕಾಶ ನಾರಾಯಣ ಅವರ 'ಜೀವ ಜೀವದ ನಂಟು'. ಇನ್ನೊಂದು, ಡಾ| ಟಿ ಎನ್ ವಾಸುದೇವಮೂರ್ತಿ ಅವರು ಸಂಗ್ರಹಿಸಿ, ಅನುವಾದಿಸಿರುವ 'ಬುದ್ಧ ಮತ್ತು ಪರಂಪರೆ'. ಈ ಪುಸ್ತಕಗಳನ್ನು ಕುರಿತು ಖ್ಯಾತ ಲೇಖಕ ಚಂದ್ರಶೇಖರ ಆಲೂರು ಮತ್ತು ಖ್ಯಾತ ಚಿಂತಕ ಡಾ|ಜಿ ಬಿ ಹರೀಶ ಅವರು ಮಾತನಾಡಲಿದ್ದಾರೆ.

ಈ ಕೃತಿಗಳ ಪೈಕಿ ಜಯಪ್ರಕಾಶ ನಾರಾಯಣ ಅವರು ಬರೆದಿರುವ 'ಜೀವ ಜೀವದ ನಂಟು' ನಿಜವಾದ ಅರ್ಥದಲ್ಲಿ ಅನಾಮಿಕರಾಗಿದ್ದಂತಹ ಸಾದಾಸೀದಾ ಮನುಷ್ಯರನ್ನು ಕುರಿತ ವ್ಯಕ್ತಿಚಿತ್ರ-ಪ್ರಬಂಧಗಳನ್ನು ಒಳಗೊಂಡಿದೆ. ಇಲ್ಲಿ ಪ್ರಬಂಧದ ವಸ್ತುವಾಗಿರುವವರೆಲ್ಲ ಹಾಸನ ಸೀಮೆಯ ಚನ್ನರಾಯಪಟ್ಟಣ ತಾಲೂಕಿನ ಒಂದು ಹಳ್ಳಿಯವರು ಅನ್ನುವುದು ವಿಶೇಷ. ಇದಕ್ಕೆ ತಕ್ಕಂತೆ ಪ್ರಬಂಧಗಳಲ್ಲಿ ಆ ಸೀಮೆಯ ದೇಸಿ ನುಡಿಗಟ್ಟುಗಳೇ ಇವೆ.
ವಾಸುದೇವಮೂರ್ತಿ ಅವರ ಕೃತಿಯು ಓಶೋ ಅವರ ಬೌದ್ಧ ಉಪನ್ಯಾಸಗಳ ಆಯ್ದ ಅನುವಾದದ ಮಹತ್ತ್ವದ ಸಂಪುಟವಾಗಿದೆ. ಫ್ರೆಡರಿಕ್ ನೀಶೆ, ರಮಣ, ಶಂಕರ, ರಾಮಕೃಷ್ಣರ ತತ್ತ್ವಜ್ಞಾನದ ಬಗ್ಗೆ ಆಳವಾಗಿ ಓದಿಕೊಂಡಿರುವ ವಾಸುದೇವಮೂರ್ತಿ ಅವರು ಇಲ್ಲಿ ಮಾಡಿರುವ ಅನುವಾದ ಗಮನಾರ್ಹವಾಗಿದೆ. ಈ ಎರಡೂ ಪುಸ್ತಕಗಳನ್ನು 'ವಂಶಿ ಪಬ್ಲಿಕೇಷನ್ಸ್' ಪ್ರಕಟಿಸಿದೆ.












Click it and Unblock the Notifications