ರಾಜ್ಯದಲ್ಲಿ ಬಂಡವಾಳ ಹೂಡಿ ಕನ್ನಡಿಗರಿಗೆ ಉದ್ಯೋಗ ನೀಡಿ
ಬೆಂಗಳೂರು,ಜು.12: ರಾಜ್ಯದಲ್ಲಿ ಬಂಡವಾಳ ಹೂಡಿ ಕೈಗಾರಿಕೆ ಸ್ಥಾಪಿಸಿ ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದು ಅನಿವಾಸಿ ಕನ್ನಡಿಗರಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಕರೆ ನೀಡಿದ್ದಾರೆ.
ನಾರ್ತ್ ಅಮೆರಿಕ ವಿಶ್ವ ಕನ್ನಡ (ನಾವಿಕ) ಸಂಸ್ಥೆ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಎರಡನೇ ಅಮೆರಿಕನ್ನಡೋತ್ಸವ ಹಾಗೂ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.[ಬೆಂಗಳೂರಿನಲ್ಲಿ ನಡೆಯುತ್ತಿರುವ ಅಮೆರಿಕನ್ನಡೋತ್ಸವ ವಿಶೇಷತೆ ಏನು?]
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು, ನಾವಿಕ ಅಧ್ಯಕ್ಷ ಡಾ.ಶರಣಬಸವ ರಾಜೂರ್, ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ಮುರಳಿಧರ್, ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ವಿ.ಸಿ.ಪ್ರಕಾಶ್, ಅಮೆರಿಕನ್ನಡೋತ್ಸವ ಸಂಚಾಲಕ ಪ್ರಕಾಶ್ ಬಾಣಾವರ, ನಾವಿಕದ ಮಾಜಿ ಅಧ್ಯಕ್ಷ ಡಾ.ಕೇಶವಬಾಬು, ಅಮೆರಿಕನ್ನಡೋತ್ಸವ ಸಮಿತಿ ಸದಸ್ಯ ವಲ್ಲೀಶ ಶಾಸ್ತ್ರಿ, ಹಾಲಿವುಡ್ ನಟ ರಾಜರ್ ನಾರಾಯಣ್ ಉಪಸ್ಥಿತರಿದ್ದರು.

ಸರ್ಕಾರ ಸಹಕಾರ ನೀಡಲಿದೆ:
"ಇಂದು ಉದ್ಯೋಗ ಕಡಿಮೆಯಾಗುತ್ತಿದ್ದು ಜನ ಸಂಖ್ಯೆ ಹೆಚ್ಚಾಗುತ್ತಿದೆ. ಅನಿವಾಸಿ ಶ್ರೀಮಂತ ಕನ್ನಡಿಗರು ರಾಜ್ಯದಲ್ಲಿ ಕೈಗಾರಿಕೆ ಆರಂಭಿಸಿದರೆ ರಾಜ್ಯದ ಬಹಳಷ್ಟು ಮಂದಿಗೆ ಸಹಾಯವಾಗುತ್ತದೆ. ಬಂಡವಾಳ ಹೂಡುವ ಕನ್ನಡಿಗರಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರವನ್ನು ನೀಡಲಿದೆ"
ರಾಮಲಿಂಗ ರೆಡ್ಡಿ, ಸಾರಿಗೆ ಸಚಿವ, ಕರ್ನಾಟಕ ಸರ್ಕಾರ

ದೂರದಲ್ಲಿದ್ದರೂ ಕನ್ನಡಿಗರಾಗಿದ್ದಾರೆ
"ಅನಿವಾಸಿ ಕನ್ನಡಿಗರು ದೂರದಲ್ಲಿದ್ದರೂ ಕನ್ನಡ ಪ್ರೀತಿಯನ್ನು ಇನ್ನು ಉಳಿಸಿಕೊಂಡಿದ್ದಾರೆ. ಕನ್ನಡ ಸಮ್ಮೇಳನವನ್ನು ಆಯೋಜಿಸುವುದರ ಜೊತೆಗೆ ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇವರ ಎಲ್ಲಾ ಕೆಲಸಗಳಿಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಿ ಪ್ರೋತ್ಸಾಹಿಸಬೇಕು"
ಮುಖ್ಯಮಂತ್ರಿ ಚಂದ್ರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ

ಗ್ರಾಮೀಣ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ:
"ಅನಿವಾಸಿ ಕನ್ನಡಿಗರು ಅಮೆರಿಕದಲ್ಲಿ ಕನ್ನಡ ಸಮ್ಮೇಳನ ಮಾಡಿ ಯಶಸ್ವಿಯಾಗಿದ್ದಾರೆ. ಇದೀಗ ರಾಜ್ಯದಲ್ಲೂ ಸಮ್ಮೇಳನವನ್ನು ಆಯೋಜನೆ ಮಾಡುತ್ತಿದ್ದೇವೆ. ಹಳ್ಳಿಗಳಲ್ಲಿ ಆಸ್ಪತ್ರೆ ನಿರ್ಮಾಣ, ಶಾಲೆ ಮತ್ತು ನೆರೆ ಸಂತ್ರಸ್ಥರಿಗೆ ಪರಿಹಾರ ನೀಡಲು ನಾವಿಕ ಮುಂದಾಗಲಿದೆ"
ಡಾ.ಶರಣಬಸವ ರಾಜೂರ್, ನಾವಿಕ ಅಧ್ಯಕ್ಷ

ಸಾಂಸ್ಕೃತಿಕ ಕಾರ್ಯಕ್ರಮ
ಅಮೆರಿಕನ್ನಡೋತ್ಸವ ಹಲವಾರು ಮನೊರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎರಡೂ ದಿನವೂ ಬೆಳಗ್ಗೆ 10ರಿಂದ ಪ್ರಾರಂಭವಾಗುವ ಕಾರ್ಯಕ್ರಮ, ರಾತ್ರಿ 10ರವರೆಗೆ ಇರುತ್ತದೆ. ಜುಲೈ 12ರಂದು ಸಂಜೆ ಅನಿವಾಸಿಗಳದೊಂದು ವಾದ್ಯಗೋಷ್ಠಿ ವಿಶೇಷ ಕಾರ್ಯಕ್ರಮ. ಜುಲೈ 13ರಂದು ಕಲಾಗಂಗೋತ್ರಿಯವರಿಂದ "ಮೈಸೂರು ಮಲ್ಲಿಗೆ" ನಾಟಕ ಹಾಗೂ ಸಂಜೆ "ಅನಿವಾಸಿ ಬಾಂಧವ್ಯ" ಎಂಬ ವಿಶೇಷ ಕಾರ್ಯಕ್ರಮವಿರುತ್ತದೆ. ಈ ಅನಿವಾಸಿ ಬಾಂಧವ್ಯ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಹೊರದೇಶಗಳಿಗೆ ಭೇಟಿಕೊಟ್ಟ ಕಲಾವಿದರು, ಸಾಹಿತಿಗಳು ಹಾಗೂ ರಾಜಕಾರಣಿಗಳು ತಮ್ಮ ಸಿಹಿ ಕಹಿ ಅನುಭವಗಳನ್ನು ಹಂಚಿಕೊಳ್ಳಲು ಒಂದು ವೇದಿಕೆ. 15ಕ್ಕೂ ಹೆಚ್ಚು ಕನ್ನಡದ ಶ್ರೇಷ್ಠ ಗಾಯಕರುಗಳು ವೇದಿಕೆಯಲ್ಲಿ ಹಾಡಲಿದ್ದಾರೆ.

ಭಾನುವಾರ ಸಮಾರೋಪ ಕಾರ್ಯಕ್ರಮ:
ಶನಿವಾರ ಮತ್ತು ಭಾನುವಾರ ಅಮೆರಿಕನ್ನಡೋತ್ಸವ ಕಾರ್ಯಕ್ರಮ ನಡೆಯಲಿದ್ದು ಬಂಡವಾಳ ಹೂಡಿಕೆದಾರರ ಸಮಾವೇಶ, ಸಾಹಿತ್ಯ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಭಾನುವಾರ ಸಂಜೆ 5.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ , ಕನ್ನಡ ಪ್ರಭದ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಎಫ್ಕೆಸಿಸಿಐ ಅಧ್ಯಕ್ಷ ಸಂಪತ್ ರಾಮನ್ ಭಾಗವಹಿಸಲಿದ್ದಾರೆ.












Click it and Unblock the Notifications