ಇಬ್ಬರು ಮಕ್ಕಳ ಪ್ರಾಣಕ್ಕೆ ಎರವಾದ ಮುಚ್ಚಿದ ಕಾರಿನ ಬಾಗಿಲು
ಗುರ್ ಗಾಂವ್, ಸೆಪ್ಟೆಂಬರ್, 10 : ಕಾರಿನ ಬಾಗಿಲು ಅಚಾನಕ್ಕಾಗಿ ಮುಚ್ಚಿದ ಪರಿಣಾಮ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ ಇಬ್ಬರು ಮಕ್ಕಳು ಕಾರಿನಲ್ಲಿಯೇ ಸಾವನ್ನಪ್ಪಿದ್ದ ಘಟನೆ ಬುಧವಾರ ನಡೆದಿದೆ.
ಈ ದುರ್ಘಟನೆ ಗುರ್ ಗಾಂವ್ ಜಿಲ್ಲೆಯ ಖಾದಾಪುರ ಎಂಬ ಹಳ್ಳಿಯಲ್ಲಿ ಸಂಭವಿಸಿದ್ದು, ಹಿಮಾಶಿ(4) ಹಾಗೂ ಆಕೆಯ ತಂಗಿ ರಿತಿಕಾ(2) ಎಂಬ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಇದು ಬುಧವಾರ ಸಂಜೆ ಸುಮಾರು 4.30ರ ವೇಳೆಯಲ್ಲಿ ನಡೆದಿದೆ.[ಹೆತ್ತವರ ಪ್ರೀತಿ ಕಳೆದುಕೊಂಡು ನಲುಗುತ್ತಿರುವ ಮಕ್ಕಳು]
ಮನೆಯಲ್ಲಿ ಕಾರು ನಿಂತಿದ್ದ ವೇಳೆ ಈ ಇಬ್ಬರು ಮಕ್ಕಳು ಕಾರು ಹತ್ತಿದ್ದಾರೆ. ಆಗ ಕಾರಿನ ಬಾಗಿಲು ಇದ್ದಕ್ಕಿದ್ದ ಹಾಗೆ ಮುಚ್ಚಿಕೊಂಡಿದೆ. ಕಿಟಕಿ, ಬಾಗಿಲು ಎರಡೂ ಮುಚ್ಚಿದ್ದು, ಗಾಳಿ ಕಾರಿನೊಳಗೆ ಪ್ರವೇಶಿಸಲು ಯಾವುದೇ ವ್ಯವಸ್ಥೆ ಇರಲಿಲ್ಲ.
ಕಾರಿನಲ್ಲಿ ಗಾಳಿ ಇಲ್ಲದಿದ್ದುದ್ದರಿಂದ ಉಸಿರುಗಟ್ಟುವ ವಾತಾವರಣದಿಂದಾಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಹಲವು ಪ್ರಯತ್ನದ ನಂತರ ಕಾರಿನ ಬಾಗಿಲು ತೆರೆದು ಪ್ರಜ್ಞೆ ತಪ್ಪಿದ್ದ ಮಕ್ಕಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ.
ಈ ಘಟನೆ ಕುರಿತಾಗಿ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಗುರುವಾರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ದಾಖಲೆಗಳು ಸದ್ಯದಲ್ಲೇ ನಮ್ಮ ಕೈಸೇರಲಿದೆ ಎಂದು ಸಹಾಯಕ ಪೊಲೀಸ್ ಅಧಿಕಾರಿ ರಾಜೇಶ್ ಚೇಚಿ ಹೇಳಿದ್ದಾರೆ.