ರೂಪಾ ವರ್ಗ : ಟ್ವಿಟ್ಟರಿನಲ್ಲಿ ಸಿದ್ದು ವಿರುದ್ಧ ಭುಗಿಲೆದ್ದ ಆಕ್ರೋಶ
ಬೆಂಗಳೂರು, ಜುಲೈ 17 : ಪರಪ್ಪನ ಅಗ್ರಹಾರದಲ್ಲಿ ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಉಮ್ಮೇದಿಯಲ್ಲಿ ಕಾರಾಗೃಹದಿಂದ ಎತ್ತಂಗಡಿಯಾಗಿರುವ ಐಪಿಎಸ್ ಅಧಿಕಾರಿ ರೂಪಾ ಡಿ ಅವರು ತಪ್ಪುಗಳನ್ನೇ ಮಾಡುತ್ತ ಸಾಗಿದರಾ ಅಥವಾ ಅವರನ್ನು ವರ್ಗಾವಣೆ ಮಾಡಿ ಸರಕಾರವೇ ತನ್ನ ಕಾಲ ಮೇಲೆ ಚಪ್ಪಡಿ ಕಲ್ಲು ಎಳೆದುಕೊಂಡಿದೆಯಾ?
ಈ ಸಂಗತಿ ನಿಷ್ಪಕ್ಷಪಾತ ತನಿಖೆಯ ನಂತರ ಬಯಲಾಗಲಿದೆ. ಆದರೆ, ಸಾಮಾಜಿಕ ತಾಣದಲ್ಲಿ, ಪ್ರಾಮಾಣಿಕ ಪೊಲೀಸ್ ಅಧಿಕಾರಿಯೊಬ್ಬರನ್ನು 'ಮಾಮೂಲಿ ವರ್ಗಾವಣೆ' ಎಂಬ ಕಾರಣ ನೀಡಿ ಎತ್ತಂಗಡಿ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟ್ಟರ್ ಬಳಕೆದಾರರು ಒಕ್ಕೊರಲಿನಿಂದ ಕಾಂಗ್ರೆಸ್ ಸರಕಾರದ ಕ್ರಮವನ್ನು ಖಂಡಿಸುತ್ತಿದ್ದಾರೆ.
ಜೈಲಿನ ಭ್ರಷ್ಟಾಚಾರ ಬಯಲಿಗೆಳೆದ ರೂಪಾಗೆ ವರ್ಗಾವಣೆ ಶಿಕ್ಷೆ
ಅಕ್ರಮ ಆಸ್ತಿ ಗಳಿಕೆಯ ಆರೋಪಿ ಶಶಿಕಲಾ ನಟರಾಜನ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹೆಚ್ಚಿನ ಸವಲತ್ತುಗಳನ್ನು ಪಡೆಯಲು ಡಿಜಿಪಿ ಮತ್ತಿತರ ಅಧಿಕಾರಿಗಳಿಗೆ 2 ಕೋಟಿ ರುಪಾಯಿ ಲಂಚ ನೀಡಿದ್ದಾರೆ, ಇವರು ಸ್ವೀಕರಿಸಿದ್ದಾರೆ ಎಂದು ರೂಪಾ ಅವರು ಆರೋಪ ಮಾಡಿರುವುದು ಕರ್ನಾಟಕದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.
'ಇದೊಂದು ಆಡಳಿತಾತ್ಮಕ ಪ್ರಕ್ರಿಯೆ'- ರೂಪಾ ವರ್ಗಾವಣೆಗೆ ಸಿಎಂ ಪ್ರತಿಕ್ರಿಯೆ
ರೂಪಾ ಡಿ ಮೌದ್ಗೀಲ್ ಅವರನ್ನು ಕೇಂದ್ರ ಕಾರಾಗೃಹದಿಂದ ಟ್ರಾಫಿಕ್ ಮತ್ತು ರಸ್ತೆ ಸುರಕ್ಷತಾ ಇಲಾಖೆಯ ಡಿಐಜಿ ಆಫ್ ಪೊಲೀಸ್ ಮತ್ತು ಕಮಿಷನರ್ ಆಗಿ ವರ್ಗಾವಣೆ ಮಾಡುತ್ತಿದ್ದಂತೆ ಸಿದ್ದರಾಮಯ್ಯ ಸರಕಾರದ ವಿರುದ್ಧ ಟ್ವಿಟ್ಟಿಗರು ಮುಗಿಬಿದ್ದಿದ್ದಾರೆ.
ಭ್ರಷ್ಟರನ್ನು ಶಿಕ್ಷಿಸುವುದು ಸಿನೆಮಾದಲ್ಲಿ ಮಾತ್ರ
ಭ್ರಷ್ಟ ರಾಜಕಾರಣಿಗಳನ್ನು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಾಮಾಣಿಕ ಪೊಲೀಸ್ ಅಧಿಕಾರಿಯೇ ತಿರುಗಿ ಬೀಳುವುದು ಮತ್ತು ಅವರನ್ನು ಶಿಕ್ಷೆಗೆ ಗುರಿಪಡಿಸುವುದು ಕನ್ನಡ ಸಿನೆಮಾಗಳಲ್ಲಿ ಮಾತ್ರ. ವಸ್ತುಸ್ಥಿತಿಯಲ್ಲಿ ಅಂಥ ಪ್ರಾಮಾಣಿಕರನ್ನು ಕೆಲಸಕ್ಕೆ ಬಾರದ ಪೋಸ್ಟಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದು ರಾಜಪೂತ್ ಎಂಬುವವರು ಕಿಡಿಕಾರಿದ್ದಾರೆ.
ಮೋದಿಯನ್ನು ದುರ್ಬಲ ಅಂದವರು ಏನಂತಾರೆ?
ಚೀನಾ ವಿರುದ್ಧ ಕೇಂದ್ರದ ನೀತಿಯೇನು ಎಂದು ನರೇಂದ್ರ ಮೋದಿಯವರನ್ನು ಪ್ರಶ್ನಿಸುತ್ತಿದ್ದವರು, ಮೋದಿಯವರನ್ನು ದುರ್ಬಲ ಪ್ರಧಾನಿ ಎಂದು ಜರಿದವರು ಈ ಪ್ರಕರಣದ ಬಗ್ಗೆ ಏನು ಹೇಳುತ್ತಾರೆ? ಎಂದು ಟ್ವಿಟ್ಟಿಗರೊಬ್ಬರು ಸಿದ್ದರಾಮಯ್ಯನವರನ್ನು ಕುಟುಕಿದ್ದಾರೆ. ಇದೊಂದು ಆಡಳಿತಾತ್ಮಕ ಪ್ರಕ್ರಿಯೆ, ಮಾಧ್ಯಮದ ಮುಂದೆ ರೂಪಾ ಹೋಗುವುದು ಅಗತ್ಯವಿರಲಿಲ್ಲ ಎಂಬ ಸಿದ್ದರಾಮಯ್ಯನವರ ಟ್ವೀಟಿಗೆ ಇದು ಉತ್ತರ.
ದಯವಿಟ್ಟು ಟ್ವೀಟ್ ಮಾಡ್ತೀರಾ ರಮ್ಯಾ?
ದಿವ್ಯಾ ಸ್ಪಂದನಾ (ಮಾಜಿ ಸಂಸದೆ ರಮ್ಯಾ) ಅವರೆ, ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಟ್ವೀಟ್ ಮಾಡುತ್ತೀರಾ? ಎಂದು ಒಬ್ಬರು ರಮ್ಯಾ ಅವರನ್ನು ಕೆಣಕಿದ್ದಾರೆ. ಒಬ್ಬ ಮಹಿಳೆಯಾಗಿ ಪ್ರಾಮಾಣಿಕ ಮಹಿಳಾ ಅಧಿಕಾರಿಯ ವಿರುದ್ಧ ನಡೆಯುತ್ತಿರುವ ಅನಾಚಾರದ ವಿರುದ್ಧ ದನಿ ಎತ್ತುತ್ತಾರಾ ರಮ್ಯಾ ಮೇಡಂ?
ಈಗ್ಲಾದ್ರೂ ಗೊತ್ತಾಯ್ತಾ ಯುಪಿಎಗೆ ಏಕೆ ಮತ ಹಾಕಿಲ್ಲವೆಂದು?
ಕರ್ನಾಟಕದಲ್ಲಿ (ಕಾರಾಗೃಹದಲ್ಲಿ) ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಸರಕಾರವಾಗಲಿ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರಾಗಲಿ ದನಿ ಎತ್ತದಿರುವುದು ನಾಚಿಕೆಗೇಡಿನದು. ಭಾರತ ಯುಪಿಎ ಮೈತ್ರಿಕೂಟಕ್ಕೆ ಏಕೆ ಮತ ಹಾಕಲಿಲ್ಲ ಎಂಬುದು ನಿಮಗೆ ಇನ್ನೂ ಗೊತ್ತಾಗದಿರುವುದು ಶೋಚನೀಯ ಎಂದು ಮತ್ತೊಬ್ಬರು ಟ್ವಿಟ್ಟರಿನಲ್ಲಿ ಗುಡುಗಿದ್ದಾರೆ.
ರಾಹುಲ್ ಅವರ ಅನುಮತಿಯಿಲ್ಲದೆ ವರ್ಗಾವಣೆ ಸಾಧ್ಯವಿಲ್ಲ
ಡಿ ರೂಪಾ ಅವರು ತಮ್ಮ ಪ್ರಾಮಾಣಿಕತೆಗೆ ತಕ್ಕ ಬೆಲೆ ತೆತ್ತಿದ್ದಾರೆ. ಇದೊಂದು ಕಳ್ಳರ ಸರಕಾರ. ಕರ್ನಾಟಕದ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗೆ ಧಿಕ್ಕಾರ. ಭ್ರಷ್ಟರಿಗೆ ರಕ್ಷಣೆ ನೀಡಲು ಪ್ರಜಾಪ್ರಭುತ್ವವನ್ನು ಕಾಂಗ್ರೆಸ್ ಸರಕಾರ ಹೇಗೆ ಹೊಸಕಿಹಾಕುತ್ತದೆ ಎಂಬುದಕ್ಕೆ ಈ ಪ್ರಕರಣವೇ ನಿದರ್ಶನ. ಇದು ರಾಹುಲ್ ಗಾಂಧಿಯವರ ಅನುಮತಿಯಿಲ್ಲದೆ ಜಾರಿಗೆ ಬರಲು ಸಾಧ್ಯವೇ ಇಲ್ಲ ಎಂದು ಟ್ವಿಟ್ಟಿಗರೊಬ್ಬರು ಕೆಂಡ ಕಾರಿದ್ದಾರೆ.
ಎದ್ದೇಳಿ ಸಿದ್ದರಾಮಯ್ಯ ಎದ್ದೇಳಿ
ಕಾಂಗ್ರೆಸ್ ಆಡಳಿತದಲ್ಲಿ ಡಿಕೆ ರವಿ, ಗಣಪತಿ, ಮಲ್ಲಿಕಾರ್ಜುನ ಬಂಡೆ ಮುಂತಾದವರನ್ನು ಕಳೆದುಕೊಂಡಿದ್ದೇವೆ. ಸಿದ್ದರಾಮಯ್ಯ ಕರ್ನಾಟಕ ಕಂಡಂತಹ ಕೆಟ್ಟ ಮುಖ್ಯಮಂತ್ರಿ. ಪೊಲೀಸ್ ಇಲಾಖೆಯಲ್ಲಿ ಎಷ್ಟೊಂದು ಅಧಿಕಾರಿಗಳ ವಿರುದ್ಧ ದೌರ್ಜನ್ಯ ನಡೆದಿದೆ. ಎದ್ದೇಳಿ ಸಿದ್ದರಾಮಯ್ಯ ಎದ್ದೇಳಿ ಎಂದು ಮಗದೊಬ್ಬರು ಕರ್ನಾಟಕ ಸರಕಾರಕ್ಕೆ ತಪರಾಕಿ ಕೊಟ್ಟಿದ್ದಾರೆ.