ಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು
ಬೆಂಗಳೂರು, ಫೆಬ್ರವರಿ 23 : ದಂತವೈದ್ಯ ರೇವಂತ್ ಪ್ರಿಯತಮೆ ಹರ್ಷಿತಾ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಹರ್ಷಿತಾ ಬರೆದಿದ್ದಾರೆ ಎನ್ನಲಾದ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ಆಕೆಯ ಪತಿಯನ್ನು ವಶಕ್ಕೆ ಪಡೆದಿದ್ದಾರೆ.
ಕಡೂರು ಮೂಲದ ದಂತವೈದ್ಯ ರೇವಂತ್ ಪತ್ನಿ ಕವಿತಾಳನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರೇವಂತ್ ಆತ್ಮಹತ್ಯೆಯ ಸುದ್ದಿ ತಿಳಿದ ತಕ್ಷಣ ಅವರ ಪ್ರಿಯತಮೆ ಹರ್ಷಿತಾ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ನೇಣಿಗೆ ಶರಣಾಗಿದ್ದರು.
ಆತ್ಮಹತ್ಯೆಗೂ ಮುನ್ನ ಹರ್ಷಿತಾ ಬರೆದಿಟ್ಟಿರುವ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ. ಬಿಎಂಟಿಸಿ ಚಾಲಕರಾಗಿರುವ ಪತಿ ಸುಧೀಂದ್ರ ವಿರುದ್ಧ ಕಿರುಕುಳದ ಆರೋಪವನ್ನು ಹರ್ಷಿತಾ ಮಾಡಿದ್ದು, ಆದ್ದರಿಂದ, ಪತಿಯನ್ನು ವಶಕ್ಕೆ ಪಡೆಯಲಾಗಿದೆ.

ಡಿಸಿಪಿ ರಮೇಶ್ ಬಾನೋತ್ ಈ ಕುರಿತು ಹೇಳಿಕೆ ನೀಡಿದ್ದು, "ಡೆತ್ನೋಟ್ನಲ್ಲಿ ಕಿರುಕುಳದ ಆರೋಪ ಮಾಡಿದ್ದಾರೆ. ಆದ್ದರಿಂದ, ಅಸಹಜ ಸಾವು ಎಂದು ಪ್ರಕರಣ ದಾಖಲು ಮಾಡಿಕೊಂಡು, ಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ" ಎಂದರು.
ದಂತವೈದ್ಯ ರೇವಂತ್ ಮತ್ತು ಕವಿತಾ ವಿವಾಹವಾಗಿದ್ದರು. ಆದರೆ, ರೇವಂತ್ಗೆ ಹರ್ಷಿತಾ ಜೊತೆ ಅಕ್ರಮ ಸಂಬಂಧವಿತ್ತು. ಕವಿತಾ ಹತ್ಯೆ ಮಾಡಿದ್ದ ರೇವಂತ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ರೇವಂತ್ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದ ಹರ್ಷಿತಾ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು.
ಹರ್ಷಿತಾ ಮತ್ತು ಸುಧೀಂದ್ರ ನಡುವೆ ಆಗಾಗ ಜಗಳವಾಗುತ್ತಿತ್ತು. ಶನಿವಾರ ಪೊಲೀಸರು ಅವರ ಮನೆಗೆ ಹೋದಾಗ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಡೆತ್ ನೋಟ್ ಸಹ ಹರ್ಷಿತಾ ಬರೆದಿರುವುದರಿಂದ ಪತಿ ಸುಧೀಂದ್ರ ವಶಕ್ಕೆ ಪಡೆಯಲಾಗಿದೆ.












Click it and Unblock the Notifications