ಬನ್ನೇರುಘಟ್ಟ : ಪ್ರೇಯಸಿ ಮುಂದೆ ಪ್ರಿಯಕರನ ಕೈ ಕಡಿದ ಪ್ರಕರಣಕ್ಕೆ ತಿರುವು!
ಬೆಂಗಳೂರು, ಸೆಪ್ಟೆಂಬರ್ 16 : ಬನ್ನೇರುಘಟ್ಟ ಕಾಡಿನಲ್ಲಿ ಪ್ರೇಯಸಿ ಮುಂದೆ ಪ್ರಿಯಕರನ ಕೈ ಕಡಿದ ಪ್ರಕರಣಕ್ಕೆ ವಿಚಿತ್ರ ತಿರುವು ಸಿಕ್ಕಿದೆ. ಕೈ ಕಡಿಯಲು ಸುಪಾರಿ ನೀಡಿದ್ದ ಸಂಚಾರಿ ಪೊಲೀಸ್ ಪೇದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಿಯಕರ ಕೈ ಕಡಿಯಲು ಸುಪಾರಿ ನೀಡಿದ್ದ ಜಯಲಕ್ಷ್ಮೀ (27) ಎಂಬ ಆರೋಪಿಯನ್ನು ಬನ್ನೇರುಘಟ್ಟ ಪೊಲೀಸರು ಬಂಧಿಸಿದ್ದಾರೆ. ವಿಜಯ್ (22), ಆನಂದ (19) ಸೇರಿ ಪ್ರಕರಣಕ್ಕೆ ಸಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.
ಸೆ.11ರಂದು ಬನ್ನೇರುಘಟ್ಟ ಸಮೀಪದ ಸ್ವರ್ಣಮುಖಿ ದೇವಾಲಯದ ಬಳಿ ಜಯಲಕ್ಷ್ಮೀ ಪ್ರಿಯಕರ ವೀರೇಶ್ (23) ಕೈ ಕಡಿಯಲಾಗಿತ್ತು. ವಿಜಯ್ ಮತ್ತು ಆನಂದ ಸೇರಿ ಕೈ ಕಡಿದು ಕೈಯನ್ನು ತೆಗೆದುಕೊಂಡು ಹೋಗಿದ್ದರು. ಜಯಲಕ್ಷ್ಮೀ ಮುಂದೆಯೇ ವಿಜಯ್ ಮೇಲೆ ಹಲ್ಲೆ ಮಾಡಿ ಕೈ ಕಡಿಯಲಾಗಿತ್ತು.

ಏನಿದು ಪ್ರಕರಣ : ಜಯಲಕ್ಷ್ಮೀ ಬೆಂಗಳೂರಿನ ವಿ.ವಿ.ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಜಯಲಕ್ಷ್ಮೀ ಮತ್ತು ವೀರೇಶ್ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಮನೆಯಲ್ಲಿ ಒಪ್ಪದ ಕಾರಣ ವಿವಾಹವಾಗಿರಲಿಲ್ಲ.
ಜಯಲಕ್ಷ್ಮೀ ಮನೆಯಲ್ಲಿ ನೋಡಿದ ಯುವಕನೊಂದಿಗೆ ವಿವಾಹವಾಗಿದ್ದರು. ಆದರೆ, ಆ ಮದುವೆ ಮುರಿದುಬಿದ್ದಿತ್ತು, ಡೈವೋರ್ಸ್ ಪಡೆಯಲು ನ್ಯಾಯಾಲಯದ ಮೊರೆ ಹೋಗಿದ್ದರು. ಮದುವೆ ಮುರಿದು ಬಿದ್ದ ಬಳಿಕ ಜಯಲಕ್ಷ್ಮೀ ಪುನಃ ವೀರೇಶ್ ಸಂಪರ್ಕಿಸಿದ್ದಳು.
ಜಯಲಕ್ಷ್ಮೀ ವಿವಾಹದ ಪ್ರಸ್ತಾವನೆ ಮುಂದಿಟ್ಟಿದ್ದಳು. ಆದರೆ, ವೀರೇಶ್ ಈ ಪ್ರಸ್ತಾಪ ನಿರಾಕರಿಸಿದ್ದ. ಇದರಿಂದ ಕೋಪಗೊಂಡ ಆಕೆ ವೀರೇಶ್ ಕೈ ಕಡಿಯಲು ಸುಪಾರಿ ನೀಡಿದ್ದಳು. ವೀರೇಶ್ ಕೈ ಕಡಿದರೆ ಬೇರೆ ಯಾರನ್ನೂ ಆತ ವಿವಾಹವಾಗುವುದಿಲ್ಲ. ನನ್ನ ಜೊತೆಯೇ ಉಳಿಯುತ್ತಾನೆ ಎಂಬುದು ಜಯಲಕ್ಷ್ಮೀ ಸಂಚಾಗಿತ್ತು.
ವಿಜಯ್ ಮತ್ತು ಆನಂದಗೆ ಸುಪಾರಿ ನೀಡಿದ್ದ ಜಯಲಕ್ಷ್ಮೀ ಸೆ.11ರಂದು ಯೋಜನೆಯಂತೆ ವೀರೇಶ್ನನ್ನು ಬನ್ನೇರುಘಟ್ಟಕ್ಕೆ ಕರೆದುಕೊಂಡು ಬಂದಿದ್ದಳು. ಅವರಿಬ್ಬರು ಮಾತನಾಡುತ್ತಾ ಕುಳಿತಿದ್ದಾಗ ವಿಜಯ್ ಮತ್ತು ಆನಂದ ಬಂದು ವೀರೇಶ್ ಮೇಲೆ ಹಲ್ಲೆ ನಡೆಸಿದ್ದರು. ಕೈಯನ್ನು ಕಡಿದು ತೆಗೆದುಕೊಂಡು ಹೋಗಿದ್ದರು.












Click it and Unblock the Notifications