ಬೆಂಗಳೂರಿನ ಪುಟ್ಟ ಟ್ರಾಫಿಕ್ ಪೊಲೀಸನಿಗೊಂದು ಸಲಾಂ!
ಬೆಂಗಳೂರು, ಸೆಪ್ಟೆಂಬರ್ 04 : ಆರು ರಸ್ತೆಗಳನ್ನು ಒಂದೆಡೆ ಸೇರಿಸುವ ಬೆಂಗಳೂರು ದಕ್ಷಿಣ ಭಾಗದಲ್ಲಿರುವ ಸೌತ್ ಎಂಡ್ ಸರ್ಕಲ್ ಅಥವಾ ತೀನಂಶ್ರೀ ವೃತ್ತ ವಾಹನಗಳ ನಿರಂತರ ಹರಿದಾಟದಿಂದ ಸದಾ ಎಚ್ಚರದಿಂದಿರುವ ಸರ್ಕಲ್. ಟ್ರಾಫಿಕ್ ಸಿಗ್ನಲ್ ಇರಲಿ, ಇಲ್ಲದಿರಲಿ ಪೊಲೀಸರು ಸದಾ ಮ್ಯಾನೇಜ್ ಮಾಡುತ್ತಲೇ ಇರಬೇಕು.
ಈ ಸರ್ಕಲ್ ಸುತ್ತಲಿರುವ ಕಾಲೇಜು ಹುಡುಗರು, ತಮ್ಮ ಜೀವದ ಮೇಲೆ ಕಾಳಜಿ ಇಲ್ಲದವರು ಹೆಲ್ಮೆಟ್ ಕೂಡ ಧರಿಸದೆ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುತ್ತಿರುವುದನ್ನು ಸೆರೆಹಿಡಿಯಲು ಸಿಸಿಟಿವಿ ಕ್ಯಾಮೆರಾ ಇದೆಯೋ ಇಲ್ಲವೋ, ಡಾ. ರಾಜ್ ಕುಮಾರ್ ನೋಡುತ್ತಲೇ ನಿಂತಿದ್ದಾರೆ. ಪಕ್ಕದಲ್ಲೇ ಬೆಂಗಳೂರು ದಕ್ಷಿಣ ಪೊಲೀಸ್ ಕಮಿಷನರ್ ಕಚೇರಿಯಿದೆ. ಇದೆಯಷ್ಟೇ!
ಪೊಲೀಸರ ಕಣ್ಗಾವಲು ಇದ್ದರೂ, ತಾಳ್ಮೆ ಇಲ್ಲದ ಹಲವಾರು ಅವಿವೇಕಿಗಳು ಟ್ರಾಫಿಕ್ ರೂಲನ್ನು ಬ್ರೇಕ್ ಮಾಡಿ ಸ್ಕೂಟರನ್ನು ಭರ್ರನೆ ತೆಗೆದುಕೊಂಡು ಹೋಗುತ್ತಿರುತ್ತಾರೆ. ಟ್ರಾಫಿಕ್ ಸಿಗ್ನಲ್ಲಿಗೆ ಕವಡೆ ಕಾಸಿನ ಕಿಮ್ಮತ್ತು ನೀಡುವುದಿಲ್ಲ. ಪೊಲೀಸರು ಮೂಕ ಪ್ರೇಕ್ಷಕರಂತೆ ನಿಂತಿರುತ್ತಾರೆ. ಇನ್ನು ಪೊಲೀಸರ ಸುಳಿವೇ ಇಲ್ಲದಿದ್ದಾಗ ಬಿಡುತ್ತಾರಾ?
ಗುರುವಾರ ಸಂಜೆ ನಾಲ್ಕೂವರೆ ಹೊತ್ತಿನಲ್ಲಿ, ಹಲವಾರು ಜನರು ತಮ್ಮ ಕಚೇರಿ ಕೆಲಸ ಮುಗಿಸಿ ಮನೆ ಸೇರುವ ತವಕದಲ್ಲಿದ್ದಾಗ, ಆ ವೃತ್ತದಲ್ಲಿ ಒಬ್ಬೇ ಒಬ್ಬ ಪೊಲೀಸ್ ಪೇದೆಯೂ ಇರಲಿಲ್ಲ. ಆದರೂ ಟ್ರಾಫಿಕ್ ಪೊಲೀಸ್ ಕೂಡ ನಾಚುವಂತೆ ವಾಹನಗಳು ನಿಯಮ ಪಾಲಿಸುತ್ತ ಸರಾಗವಾಗಿ ಸಾಗುತ್ತಿದ್ದವು. ಈ ಮ್ಯಾಜಿಕ್ ಆಗಿದ್ದಾದರೂ ಹೇಗೆ? [ಚಿಕ್ಕಪೇಟೆ ಪೊಲೀಸರ ಮಾನವೀಯತೆಗೆ ಸಲಾಂ]
ಈಶೂ ಊರ್ಫ್ ಕ್ರಿಶಾ ಐತಾಲ್ ಎಂಬ 13 ವರ್ಷದ ಬಾಲಕ ಬಾಯಲ್ಲಿ ಪೀಪಿ ಊದುತ್ತ ತಾನೇ ಟ್ರಾಫಿಕ್ ಪೊಲೀಸನಾಗಿದ್ದ, ಕೈಯನ್ನು ಅತ್ತಿಂದಿತ್ತ ಓಲಾಡಿಸುತ್ತ ವಾಹನ ಸಂಚಾರವನ್ನು ನಿಭಾಯಿಸುತ್ತಿದ್ದ. ಪೊಲೀಸರಿಗೂ ಕ್ಯಾರೆ ಅನ್ನದ ವಾಹನ ಚಾಲಕರು, ಕಟ್ಟು ನಿಟ್ಟಾದ ಶಿಕ್ಷಕರೆದಿರು ನಿಂತ ವಿಧೇಯ ವಿದ್ಯಾರ್ಥಿಗಳಂತೆ ನಿಯಮಗಳನ್ನು ಶಿರಸಾವಹಿಸಿ ಪಾಲಿಸುತ್ತಿದ್ದರು.
ಜೆಎಸ್ ಅಕಾಡೆಮಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿರುವ ಈಶೂ ಇದನ್ನೆಲ್ಲ ಏಕೆ ಮಾಡುತ್ತಾನೆ, ಇದನ್ನು ಮಾಡಲು ಪ್ರೇರಣೆಯೇನು, ವೃತ್ತದ ಮಧ್ಯದಲ್ಲಿ ನಿಂತು ಸಂಚಾರ ನಿಭಾಯಿಸುವಾಗ ಹೆದರಿಕೆ ಆಗುವುದಿಲ್ಲವೆ ಮುಂತಾದ ಸಂಗತಿಗಳ ಕುರಿತು ಆತ ಒನ್ಇಂಡಿಯಾ ಜೊತೆ ಮಾತನಾಡಿದ್ದಾನೆ. ಅಚ್ಚರಿಯ ಸಂಗತಿಯೆಂದರೆ, ಇದನ್ನು ಆತ ಪ್ರತಿನಿತ್ಯ ಮಾಡುತ್ತಿದ್ದಾನೆ ಮತ್ತು ಸಖತ್ ಎಂಜಾಯ್ ಕೂಡ ಮಾಡುತ್ತಾನಂತೆ. ಪುಟ್ಟ ಪೊಲೀಸನಿಗೊಂದು ಸಲಾಂ. [ಸಂಚಾರಿ ನಿಯಮ ಉಲ್ಲಂಘನೆ ಪತ್ತೆಗೆ ಹೊಸ ಆಪ್]

ಕಾರಣವೇನಿಲ್ಲ, ಹೀಗೇ ಸುಮ್ಮನೆ
ಪ್ರ : ನೀನು ಪ್ರತಿನಿತ್ಯ ಟ್ರಾಫಿಕ್ ಏಕೆ ನಿಭಾಯಿಸುತ್ತಿಯಾ?
ಉ : ಹೀಗೇ ಸುಮ್ನೆ, ಮಾಡಬೇಕು ಅಂತ ಅನಿಸುತ್ತದೆ. ಅದಕ್ಕೇ ಮಾಡುತ್ತಿದ್ದೇನೆ. ಇದನ್ನು ಮಾಡುತ್ತಿರುವುದರಿಂದ ನನಗೂ ಖುಷಿ.

ಯಾರೂ ಪ್ರೇರಣೆ ನೀಡಿಲ್ಲ
ಪ್ರ : ಇಂಥ ಕೆಲಸ ಮಾಡುವುದಕ್ಕೆ ಯಾರಾದರೂ ಪ್ರೇರಣೆ ನೀಡಿದರಾ?
ಉ : ಯಾರೂ ಪ್ರೇರಣೆ ನೀಡಿಲ್ಲ. ಹೀಗೆ ಮಾಡಬೇಕೆಂದು ನನಗೇ ಅನಿಸಿತು. ಅದಕ್ಕೇ ಮಾಡುತ್ತಿದ್ದೇನೆ.

ಹೊಳೆದದ್ದಾದರೂ ಹೇಗೆ?
ಪ್ರ : ಟ್ರಾಫಿಕ್ ಮ್ಯಾನೇಜ್ ಮಾಡಬೇಕೆಂಬುದು ಹೊಳೆದದ್ದಾದರೂ ಹೇಗೆ?
ಉ : ಒಂದು ದಿನ ಮನೆಯಲ್ಲಿ ಆಟವಾಡುತ್ತಿದ್ದಾಗ ಪೀಪಿ ಸಿಕ್ಕಿತು. ಧೂಳಿನಿಂದ ಕೂಡಿದ್ದ ಪೀಪಿ ಸ್ವಚ್ಛ ಮಾಡಿದೆ. ಮನೆಯಲ್ಲಿ ಪೀಪಿ ಊದಿದರೆ ಬೈಗುಳ ಬೀಳುವುದು ಗ್ಯಾರಂಟಿ ಅಂತ ಟ್ರಾಫಿಕ್ ಸಿಗ್ನಲ್ ನಲ್ಲಿ ಊದಲು ಆರಂಭಿಸಿದೆ.

ಅಪ್ಪಅಮ್ಮ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ
ಪ್ರ : ಅಮ್ಮ, ಅಪ್ಪ ಇದೆಲ್ಲ ಯಾಕೆ ಅಂತ ಕಿವಿಮಾತು ಹೇಳಲಿಲ್ಲವೆ?
ಉ : ಖಂಡಿತ ಇಲ್ಲ. ನಾನು ಮಾಡುತ್ತಿರುವ ಕೆಲಸದಿಂದ ಅವರಿಗೆ ತುಂಬಾ ಖುಷಿಯಾಗಿದೆ. ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಶಾಲೆ, ಪಾಠ, ಆಟ, ನಂತರ ಟ್ರಾಫಿಕ್ ಮ್ಯಾನೇಜ್ಮೆಂಟ್
ಪ್ರ : ಶಾಲೆಯ ಪಠ್ಯ ಅಭ್ಯಾಸ ಯಾವಾಗ ಮಾಡ್ತೀಯಾ?
ಉ : ಶಾಲೆಯಿಂದ ಮರಳಿದ ನಂತರ ಊಟ ಮಾಡಿ, ಸ್ವಲ್ಪ ಹೊತ್ತು ಆಟವಾಡಿ ನಂತರ ಒಂದೆರಡು ಗಂಟೆ ಟ್ರಾಫಿಕ್ ನಿಭಾಯಿಸುತ್ತೇನೆ. ನಂತರ ಮನಗೆ ಮರಳಿ ಅಭ್ಯಾಸ ಮಾಡುತ್ತೇನೆ.

ನಾನು ನನ್ನ ಕರ್ತವ್ಯ ನಿಭಾಯಿಸುತ್ತಿರುತ್ತೇನೆ
ಪ್ರ : ಗಾಡಿ ನಿಲ್ಲಿಸಿ ಅಂತ ಆದೇಶಿಸಿದಾಗಲೂ ನಿಲ್ಲದಿದ್ದರೆ ಏನು ಅನ್ನಿಸುತ್ತದೆ?
ಉ : ಏನೂ ಅನ್ನಿಸಲ್ಲ. ನಾನು ನನ್ನ ಕರ್ತವ್ಯ ನಿಭಾಯಿಸುತ್ತಿರುತ್ತೇನೆ. ನನಗೆ ಏನೂ ಬೇಜಾರು ಆಗುವುದಿಲ್ಲ.

ಗುರಿಯೊಂದೆ, ಜನರ ಜೀವ ಉಳಿಸುವುದು
ಪ್ರ : ದೊಡ್ಡವನಾದ ಮೇಲೆ ಏನಾಗಬೇಕೆಂದಿದ್ದೀ?
ಉ : ನಾನು ವೈದ್ಯನಾಗಬೇಕೆಂಬ ಕನಸು ಕಂಡಿದ್ದೇನೆ. ನನ್ನ ಗುರಿಯೊಂದೆ, ಜನರ ಜೀವ ಉಳಿಸುವುದು.

ಒಂದು ದಿನ ಪೊಲೀಸ್ ಕಮಿಷನರ್ ಮಾಡಿದರೆ...
ಪ್ರ : ಒಂದು ವೇಳೆ ನಿನ್ನನ್ನು ಬೆಂಗಳೂರು ಟ್ರಾಫಿಕ್ ಪೊಲೀಸ್ ಕಮಿಷನರ್ ಮಾಡಿದರೆ ಏನು ಮಾಡುತ್ತಿಯಾ?
ಉ : ನಿಯಮ ಪಾಲಿಸದವರ, ಹುಚ್ಚಾಪಟ್ಟೆ ಓಡಿಸುವವರ ಡ್ರೈವಿಂಗ್ ಲೆಸೆನ್ಸ್ ಜಪ್ತಿ ಮಾಡಲು ಆದೇಶಿಸುತ್ತೇನೆ. ಹೆಚ್ಚು ಅಪಘಾತಗಳು ಸಂಭವಿಸುತ್ತಿರುವುದಕ್ಕೆ ವೇಗದ ಚಾಲನೆಯೇ ಕಾರಣ.
ಎದುರಾಗಿರುವ ಪ್ರಶ್ನೆ ಏನೆಂದರೆ, ಆ ಹುಡುಗ ಪೊಲೀಸ್ ಕೆಲಸವನ್ನು ಮಾಡುತ್ತಿದ್ದಾಗ, ಪೊಲೀಸರು ಏನು ಮಾಡುತ್ತಿದ್ದರು? ಆ ಹುಡುಗನಿಗೆ ಏನಾದರೂ ಹೆಚ್ಚುಕಮ್ಮಿಯಾದರೆ ಯಾರು ಜವಾಬ್ದಾರರು? ಪೋಷಕರಿಗಾದರೂ ಕಾಳಜಿ ಬೇಡವಾ? ಏನೇ ಆಗಲಿ, ಆ ಹುಡುಗನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.
-
RCB: ಆರ್ಸಿಬಿಯಲ್ಲಿ ಜೋಶ್ ಹ್ಯಾಜಲ್ವುಡ್ ಸ್ಥಾನ ತುಂಬುವ ಆಟಗಾರ ಇವರೇ ನೋಡಿ -
ಶೆಲ್ ಬಂಕ್ನಲ್ಲಿ ಪೆಟ್ರೋಲ್ ದರ ಏರಿಕೆ: ಬೆಂಗಳೂರಿನಲ್ಲಿ 10 ದಿನಗಳಲ್ಲಿ 4.50 ರೂಪಾಯಿ ಹೆಚ್ಚಳ; ಇಲ್ಲಿದೆ ದರಪಟ್ಟಿ -
SSLC ಪರೀಕ್ಷೆ-1 ಆರಂಭ: ಮಲ್ಲೇಶ್ವರಂನ ಕೆಪಿಎಸ್ ಶಾಲೆಗೆ ಸಚಿವ ಮಧು ಬಂಗಾರಪ್ಪ ಭೇಟಿ, ವಿದ್ಯಾರ್ಥಿಗಳಿಗೆ ಶುಭಹಾರೈಕೆ -
Gold Price Today: ಯುಗಾದಿಗೂ ಮೊದಲೇ ಚಿನ್ನದ ದರದಲ್ಲಿ ಭಾರೀ ಇಳಿಕೆ; ಆಭರಣ ಪ್ರಿಯರಿಗೆ ಇಂದೇ ಹಬ್ಬ -
Karnataka Weather: ಧಾರವಾಡದಲ್ಲಿ 101 ಮಿಮೀ ಮಳೆ ದಾಖಲು, ಒಳನಾಡಿಗೆ ಅಲಿಕಲ್ಲು ಸಹಿತ ಮಳೆ ಮುನ್ಸೂಚನೆ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Prem: ಅಂದು ಮೇಲುಕೋಟೆ ಹುಡುಗಿ, ಇಂದು ಸೆರಗ ಸರ್ಸೆ: ವಿವಾದಕ್ಕೆ ಕಾರಣವಾದ ಪ್ರೇಮ್ ಸಿನಿಮಾ ಹಾಡುಗಳು












Click it and Unblock the Notifications