ಸಿದ್ದಗಂಗಾ ಶ್ರೀಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಹೇಳಿದ್ದೇನು?
ಮೊದಲಿಗೆ ಈ ಚಿಕಿತ್ಸೆಗೆ ಸ್ವಾಮೀಜಿ ಒಪ್ಪಿರಲಿಲ್ಲ. ಆದರೆ, ವೈದ್ಯರ ತಂಡದ ನಿರಂತರ ಮನವೊಲಿಕೆ ಪ್ರಯತ್ನಗಳಿಗೆ ಕಿವಿಗೊಟ್ಟ ಅವರು ಚಿಕಿತ್ಸೆಗೆ ಒಪ್ಪಿದರು ಎಂದ ವೈದ್ಯರ ತಂಡ.
ಬೆಂಗಳೂರು, ಮೇ 13: ಅನಾರೋಗ್ಯದಿಂದಾಗಿ, ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದಗಂಗಾ ಶ್ರೀಗಳಿಗೆ ನೀಡಬೇಕಿದ್ದ ಚಿಕಿತ್ಸೆಯು ಅತ್ಯಂತ ಕ್ಲಿಷ್ಟಕರವಾಗಿದ್ದರಿಂದ ಎಚ್ಚರಿಕೆಯಿಂದ ಅದನ್ನು ನಿಭಾಯಿಸಿರುವುದಾಗಿ ಬಿಜಿಎಸ್ ವೈದ್ಯರ ತಂಡ ಹೇಳಿದೆ.
ಶನಿವಾರ ಸಂಜೆ, ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ವೈದ್ಯರ ತಂಡ, ಶ್ರೀಗಳಿಗೆ ನೀಡಲಾದ ಚಿಕಿತ್ಸೆಯ ಬಗ್ಗೆ ಮಾಧ್ಯಮಗಳಿಗೆ ವಿವರವಾಗಿ ತಿಳಿಸಿತು. ವೈದ್ಯರ ತಂಡದ ಪರವಾಗಿ ಡಾ. ರವೀಂದ್ರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.[ಸುಸ್ತನ್ನೂ ಲೆಕ್ಕಿಸದೆ ಸಿದ್ದಗಂಗಾ ಮಠದಲ್ಲಿ ಭಕ್ತರ ಭೇಟಿ ಮಾಡಿದ ಶಿವಕುಮಾರ ಸ್ವಾಮೀಜಿ]

ಮೊದಲಿಗೆ ಶ್ರೀಗಳು ಇದ್ದ ವಿಶೇಷ ವಾರ್ಡ್ ಸಜ್ಜುಗೊಳಿಸಿದ ಬಗ್ಗೆ ವಿವರಿಸಿದ ಅವರು, ಶ್ರೀಗಳ ಕೋಣೆಯನ್ನು ದೇಗುಲದಂತೆ ಸಿದ್ಧಪಡಿಸಿದ್ದಾಗಿ ಹೇಳಿದರು. ಶ್ರೀಗಳೂ ಸಹ ಆಸ್ಪತ್ರೆಯ ಸಿಬ್ಬಂದಿಯೊಡನೆ ಅತ್ಯಂತ ಸ್ನೇಹಪರವಾಗಿ ನಡೆದುಕೊಂಡಿದ್ದು ಅವರ ಚಿಕಿತ್ಸೆಯನ್ನು ಮತ್ತಷ್ಟು ಸುಗಮವಾಗಿಸಿತು ಎಂದರು.
ಗ್ಯಾಸ್ಟ್ರೋ ಎಂಟರಾಲಜೀಸ್ ಎಂಬ ಚಿಕಿತ್ಸೆಗೆ ಶ್ರೀಗಳನ್ನು ಒಳಪಡಿಸಲಾಗಿತ್ತು ಎಂದ ಡಾ. ರವೀಂದ್ರ, ಶ್ರೀಗಳ ಪಾಲಿಗೆ ಇದು ತುಂಬಾ ಕ್ಲಿಷ್ಟಕರವಾದ ಚಿಕಿತ್ಸೆಯಾಗಿತ್ತು. ಮೊದಲಿಗೆ ಈ ಚಿಕಿತ್ಸೆಗೆ ಸ್ವಾಮೀಜಿ ಒಪ್ಪಿರಲಿಲ್ಲ. ಆದರೆ, ವೈದ್ಯರ ತಂಡದ ನಿರಂತರ ಮನವೊಲಿಕೆ ಪ್ರಯತ್ನಗಳಿಗೆ ಕಿವಿಗೊಟ್ಟ ಅವರು ಚಿಕಿತ್ಸೆಗೆ ಒಪ್ಪಿದರು ಎಂದರು.
ಗ್ಯಾಸ್ಟ್ರೋ ಎಂಟರಾಲಜೀಸ್ ಅಡಿಯಲ್ಲಿ ಅವರಿಗೆ ಎಂಡೋಸ್ಕೋಪಿ ಮಾಡಬೇಕಿತ್ತು. ಆದರೆ, ಇದು ವೈದ್ಯರಿಗೆ ಸವಾಲಾಗಿತ್ತು. ಶ್ರೀಗಳ ಕುತ್ತಿಗೆ ಬಾಗಿರುವುದರಿಂದ ಎಂಡೋಸ್ಕೋಪಿ ಕಷ್ಟವಾಗಿತ್ತು. ಆದರೂ, ಅವರಿಗೆ ಅನಸ್ತೇಷಿಯಾ ನೀಡಿ, ಆನಂತರ ಎಂಡೋಸ್ಕೋಪಿ ನೆರವೇರಿಸಲಾಯಿತು.
ಡಾ. ಪುಟ್ಟಪ್ಪ ಅವರು ಎಂಡೋಸ್ಕೋಪಿ ನೀಡಿದರು. ಆನಂತರ, ಎಂಡೋಸ್ಕೋಪಿಯ ಮೂಲಕ ಅವರಿಗಿದ್ದ ಸಮಸ್ಯೆಯನ್ನು ನಿವಾರಿಸಲಾಯಿತು ಎಂದು ಡಾ. ರವೀಂದ್ರ ತಿಳಿಸಿದರು.
ತಮ್ಮ ಮಾತು ಮುಂದುವರಿಸಿ ಅವರು, ''ಶ್ರೀಗಳಿಗೆ ವಿಶ್ರಾಂತಿ ಬೇಕಿದೆ. 7ರಿಂದ 10 ದಿನಗಳವರೆಗೆ ವಿಶ್ರಾಂತಿಯ ಅಗತ್ಯವಿದೆ. ವೈದ್ಯರಾಗಿ ನಾವು ನಮ್ಮ ಉತ್ತಮ ಚಿಕಿತ್ಸೆ ನೀಡಿದ್ದೇವೆ'' ಎಂದು ಅವರು ತಿಳಿಸಿದರು.












Click it and Unblock the Notifications