ಟ್ರಾಫಿಕ್ ಜಾಮ್: ಏರ್ಪೋರ್ಟ್, ಟೌನ್ಹಾಲ್ ರಸ್ತೆ ಬಳಸದಿದ್ದರೆ ಒಳಿತು
ಬೆಂಗಳೂರು, ಅಕ್ಟೋಬರ್ 26: ಯಾರೂ ಇವತ್ತು ಏರ್ಪೋರ್ಟ್, ಟೌನ್ಹಾಲ್, ಕನಕಪುರ ರಸ್ತೆಗಳನ್ನು ಬಳಸಬೇಡಿ, ಒಂದೊಮ್ಮೆ ಹೋದರೆ ಹಿಡಿಶಾಪ ಹಾಕುವುದು ಮಾತ್ರ ಖಚಿತ.
ಡಿ.ಕೆ.ಶಿವಕುಮಾರ್ 'ಸಾಲ್ಟ್ ಆಂಡ್ ಪೆಪ್ಪರ್ ಲುಕ್' ಗೆ ನೆಟ್ಟಿಗರು ಫಿದಾ
ಏರ್ಪೋರ್ಟ್ನಿಂದ ಕೆಪಿಸಿಸಿ ಕಚೇರಿ ವರೆಗೆಡಿಕೆ ಶಿವಕುಮಾರ್ ಅವರ ರೋಡ್ ಶೋ ಜೊತೆಗೆ ಬಿಇಎಲ್ ಕಾರ್ಮಿಕರ ಪ್ರತಿಭಟನೆಯೂ ಇರುವ ಕಾರಣ ವಾಹನ ಸವಾರರು ಏರ್ಪೋರ್ಟ್ ರಸ್ತೆ, ಟೌನ್ಹಾಲ್, ಕ್ವೀನ್ಸ್ ರೋಡ್, ಕನಕಪುರ ರಸ್ತೆಯನ್ನು ಬಳಸದಿದ್ದರೆ ಒಳಿತು.
ಟೌನ್ಹಾಲ್ ಎದುರು ಬಿಇಎಂಎಲ್ ನೌಕರರ ಪ್ರತಿಭಟನೆ
ಇಂದು ಆ ರಸ್ತೆಯಲ್ಲಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಲಿದೆ. ಬಿಇಎಂಎಲ್ ನೌಕರರು ಟೌನ್ ಹಾಲ್ ಎದುರು 11ರ ಸುಮಾರಿಗೆ ಪ್ರತಿಭಟನೆ ನಡೆಸಲಿದ್ದಾರೆ. ನೂರಾರು ನೌಕರರು ಪಾಲ್ಗೊಳ್ಳಲಿದ್ದಾರೆ.
ಬಿಇಎಂಎಲ್ ಖಾಸಗೀಕರಣ ಬೇಡ
ದೇಶದ ಲಾಭದಾಯಕ ಕಂಪನಿಗಳಲ್ಲಿ ಒಂದಾಗಿರುವ ಬಿಇಎಂಎಲ್ ನ್ನು ಖಾಸಗೀಕರಣಗೊಳಿಸಲು ಹೊರಟಿರುವ ಕೇಂದ್ರ ಸರಕಾರದ ನಿರ್ಧಾರದ ವಿರುದ್ದ ಈಗಾಗಲೇ ಬಿಇಎಂಲ್ ಕಾರ್ಖಾನೆಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದ ವಿರುದ್ದ ಏಕ ಧ್ವನಿಯನ್ನು ಎತ್ತಲು ಹಾಗೂ ಪ್ರತಿಭಟನೆಯನ್ನು ತೀವ್ರಗೊಳಿಸುವ ಉದ್ದೇಶದಿಂದ ಟೌನ್ ಹಾಲ್ ಎದುರು ಬೃಹತ್ ಪ್ರತಿಭಟನೆಯನ್ನು ಆಯೋಜಿಸಿದೆ.
ಎಲ್ಲೆಲ್ಲಿಂದ ಕಾರ್ಮಿಕರ ಆಗಮನ
ಬೆಂಗಳೂರು, ಮೈಸೂರು, ಕೆ.ಜಿ.ಎಫ್, ಪಾಲಕ್ಕಾಡ್ ಹಾಗೂ ಬೆಂಗಳೂರು ಕೇಂದ್ರ ಕಚೇರಿಯ, ನೌಕರರು ತೀರ್ಮಾನಿಸಿದ್ದು, ಈ ಎಲ್ಲಾ ವಿಭಾಗಗಳ ಕಾರ್ಮಿಕರ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಈ ಪ್ರತಿಭಟನೆಯ ನೇತೃತ್ವವನ್ನು ಬೆಂಗಳೂರು ಕೇಂದ್ರ ವಿಭಾಗದ ಕಾರ್ಮಿಕರ ಸಂಘದ ಅಧ್ಯಕ್ಷರಾದ ದೊಮ್ಮಲೂರು ಶ್ರೀನಿವಾಸ ರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಆರ್ ನಾರಾಯಣ್, ಕೆಜಿಎಫ್ ಯೂನಿಯನ್ ಅಧ್ಯಕ್ಷರಾದ ಆಂಜನೇಯ ರೆಡ್ಡಿ, ಮುಖ್ಯ ಕಚೇರಿಯ ಸಂಘದ ಅಧ್ಯಕ್ಷರಾದ ಜೆ ಮುನಗಪ್ಪಾ, ಮೈಸೂರು ಯೂನಿಯನ್ ಅಧ್ಯಕ್ಷರಾದ ಮುನಿರೆಡ್ಡಿ, ಪಾಲಕ್ಕಾಡ್ ಯೂನಿಯನ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಅವರು ವಹಿಸಲಿದ್ದಾರೆ.
ಡಿಕೆ ಶಿವಕುಮಾರ್ ರೋಡ್ ಶೋ
ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಿಕೆ ಶಿವಕುಮಾರ್ ಬೆಂಗಳೂರು ಏರ್ಪೋರ್ಟ್ಗೆ ಆಗಮಿಸಲಿದ್ದು, ಅಲ್ಲಿಂದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿವರೆಗೆ ಮೆರವಣಿಗೆ ಮೂಲಕ ತೆರಳಲಿದ್ದಾರೆ. ಹಾಗಾಗಿ ಏರ್ಪೋರ್ಟ್ನಿಂದ ಕ್ವೀನ್ಸ್ ರಸ್ತೆಯವರೆಗೂ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಶಿವಕುಮಾರ್ ಅಭಿಮಾನಿಗಳು ವಾಹನಗಳಲ್ಲಿ ಬರುವುದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ಟ್ರಾಫಿಕ್ ಜಾಮ್ ಉಂಟಾಗಲಿದೆ. ಅಷ್ಟೇ ಅಲ್ಲದೆ ಬಳಿಕ ಡಿಕೆ ಶಿವಕುಮಾರ್ ಕನಕಪುರಕ್ಕೆ ತೆರಳುವ ಸಾಧ್ಯತೆ ಇರುವುದರಿಂದ ಕನಕಪುರ ರಸ್ತೆಯಲ್ಲೂ ಕೂಡ ಟ್ರಾಫಿಕ್ ಜಾಮ್ ಉಂಟಾಗಲಿದೆ. ಹಾಗಾಗಿ ಈ ರಸ್ತೆಗಳನ್ನು ವಾಹನ ಸವಾರರು ಬಳಸದಿರುವುದೇ ಒಳಿತು.