ಮರಳು ಮಾಫಿಯಾದಿಂದ ಜೀವ ಬೆದರಿಕೆ: ವಿಧಾನಸಭೆಯಲ್ಲಿ ರಕ್ಷಣೆ ಕೋರಿದ ಜೆಡಿಎಸ್ ಶಾಸಕಿ ಕರೆಮ್ಮ
ಬೆಂಗಳೂರು, ಜುಲೈ. 13: ತಾವು ಪ್ರತಿನಿಧಿಸುವ ದೇವದುರ್ಗ ಕ್ಷೇತ್ರದಲ್ಲಿ ಅಕ್ರಮ ಮರಳು ದಂಧೆ ತಡೆಯಲು ಯತ್ನಿಸಿದ್ದಕ್ಕೆ ಜೀವ ಬೆದರಿಕೆ ಹಾಕಿರುವುದಾಗಿ ಶಾಸಕಿ ಕರೆಮ್ಮ ಅವರು ಗುರುವಾರ ಕರ್ನಾಟಕ ವಿಧಾನಸಭೆಯಲ್ಲಿ ರಕ್ಷಣೆ ಕೋರಿದ್ದಾರೆ. ಪೊಲೀಸರ ನಿಷ್ಕ್ರಿಯತೆಯನ್ನು ಆರೋಪಿಸಿರುವ ಅವರು, ಯಾವುದೇ ಹೆಸರನ್ನು ತೆಗೆದುಕೊಳ್ಳದೆ, ಮಾಜಿ ಶಾಸಕರ ಬೆಂಬಲಿಗರು ತಮ್ಮ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೊದಲ ಬಾರಿಗೆ ಶಾಸಕಿಯಾಗಿರುವ ಕರೆಮ್ಮ ಅವರು ಎತ್ತಿರುವ ಕಳವಳಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲು ಗೃಹ ಸಚಿವರೊಂದಿಗೆ ಮಾತನಾಡುವುದಾಗಿ ಸ್ಪೀಕರ್ ಯುಟಿ ಖಾದರ್ ಭರವಸೆ ನೀಡಿದ್ದಾರೆ. ನನ್ನ ಕ್ಷೇತ್ರದ ಜನರು ಶಾಂತಿಯುತ ದೇವದುರ್ಗವನ್ನು ಬಯಸುತ್ತಾರೆ. ಆದರೆ ಅಲ್ಲಿ ಅಕ್ರಮ ಮದ್ಯ, ಮಟ್ಕಾ (ಜೂಜು) ಮತ್ತು ಅಕ್ರಮ ಮರಳು ದಂಧೆ ವಿಪರೀತವಾಗಿದೆ ಎಂದು ಕರೆಮ್ಮ ಆರೋಪಿಸಿದ್ದಾರೆ.

ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಮಧ್ಯಪ್ರವೇಶಿಸಿದ ಅವರು, ದೇವದುರ್ಗದಲ್ಲಿ ಇಷ್ಟೆಲ್ಲ ಅಕ್ರಮಗಳು ನಡೆಯುತ್ತಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಪೊಲೀಸ್ ಅಧಿಕಾರಿಗಳಿಂದ ಸರಿಯಾದ ಉತ್ತರ ದೊರೆಯುತ್ತಿಲ್ಲ, ಮಟ್ಕಾ ಮತ್ತಿತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರೆ 300 ರೂಪಾಯಿ ದಂಡ ವಿಧಿಸಿ ಸುಮ್ಮನೆ ಬಿಡುತ್ತಾರೆ ಂದು ಗಂಭೀರ ಆರೋಪ ಮಾಡಿದ್ದಾರೆ.
ದೇವದುರ್ಗದ ಜನರು ಬಡ ಕುಟುಂಬದ ಮಹಿಳೆಯನ್ನು ತಮ್ಮ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದಾರೆ. ಹೀಗೆಲ್ಲಾ ಆದರೆ, ತಮ್ಮ ಜನರಿಗೆ ಹೇಗೆ ನ್ಯಾಯ ಕೊಡಿಸಲು ಸಾಧ್ಯವಾಗುತ್ತದೆ ಎಂದು ಆತಂಕ ಹೊರಹಾಕಿದ್ದಾರೆ. ನಾನು ಹೋದಲ್ಲೆಲ್ಲಾ ಮಾಜಿ ಶಾಸಕರ ಹಿಂಬಾಲಕರು ನನಗೆ ತೊಂದರೆ ಕೊಡುತ್ತಿದ್ದಾರೆ. ಅಕ್ರಮ ಮರಳು ದಂಧೆ ನಿಲ್ಲಿಸಿದ್ದರಿಂದ ನನ್ನ ಅಣ್ಣನ ಮಗ ಆಸ್ಪತ್ರೆಯಲ್ಲಿದ್ದಾನೆ. 21 ವರ್ಷದ ಯುವಕನನ್ನು ಬೀದಿಗಿಳಿದು ಥಳಿಸಿದ್ದಾರೆ. ಯಾರನ್ನು ಕೇಳಲಿ...? ಜನ ನನಗೆ ಅಧಿಕಾರವಿದೆ, ಸಮಸ್ಯೆ ಬಗೆಹರಿಸುತ್ತೇನೆ ಎಂದು ನಂಬಿದ್ದಾರೆ. ಆದರೆ ಹೇಗೆ ಎಂದು ನನಗೆ ತಿಳಿದಿಲ್ಲ, ಹಾಗಾಗಿ ನನಗೆ ನ್ಯಾಯವನ್ನು ನೀಡುವಂತೆ ನಾನು (ಸದನ ಮತ್ತು ಸರ್ಕಾರ) ವಿನಂತಿಸುತ್ತೇನೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅಕ್ರಮ ಮದ್ಯ, ಮಟ್ಕಾ (ಜೂಜು), ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ ಶಾಸಕಿ, ಸರಕಾರಕ್ಕೆ ದೂರು ನೀಡಿದರೂ ತಪ್ಪಿತಸ್ಥ ಅಧಿಕಾರಿಗಳು ತಮ್ಮ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಕೆಲವರು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಅವರು ನನ್ನ ಮೇಲೆ ಲಾರಿ ಹತ್ತಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಆದರೆ ನಾನು ಇನ್ನೂ ಮುಂದೆ ಹೋಗಿ ಅಕ್ರಮ ಮರಳು ದಂಧೆಯನ್ನು ಪರಿಶೀಲಿಸಲು ರಾತ್ರಿ ಸ್ಥಳ ಪರಿಶೀಲನೆ ನಡೆಸಿದ್ದೇನೆ" ಎಂದು ಹೇಳಿದ್ದಾರೆ. ಜೊತೆಗೆ ಈ ಬಗ್ಗೆ ಪ್ರಕರಣ ದಾಖಲಾಗಿದೆ, ಆದರೆ ಯಾವುದೇ ಕ್ರಮ ಕೈಗೊಂಡಿದ್ದಾರೆಯೇ ಎಂದು ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಬಗ್ಗೆ ನನಗೆ ಗೌರವವಿದೆ, ಆದರೆ ಪ್ರೋಟೋಕಾಲ್ಗಾಗಿಯೂ ಅವರು ನನ್ನನ್ನು ಗೌರವಿಸಲಿಲ್ಲ ಎಂದು ಆರೋಪಿಸಿದ ಅವರು, ತಮ್ಮ ಕ್ಷೇತ್ರದ ಜನರ ಸೇವೆಗೆ ಪೊಲೀಸ್ ರಕ್ಷಣೆ ಮತ್ತು ಬೆಂಬಲ ಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications