ಕಳ್ಳತನ ಮಾಡಲು ಹೋಗಿ ದೇವರಿಗೆ ಕೈಮುಗಿದು ವಾಪಸ್ ಬಂದ ಕಳ್ಳ
ಬೆಂಗಳೂರು, ಫೆ. 04: ಕಳ್ಳತನ ಮಾಡಲು ದೇವಾಲಯ ಬಾಗಿಲನ್ನು ರಾಡ್ನಿಂದ ಮುರಿದು ಒಳನುಗ್ಗಿರುವ ಕಳ್ಳನ ಮನಸಿಗೆ ಅದೇನು ಬಂತೋ ಗೊತ್ತಿಲ್ಲ. ದೇವರ ಗರ್ಭಗುಡಿಯಲ್ಲಿ ದೇವರಿಗೆ ಕೈ ಮುಗಿದು ಯಾವುದೇ ಆಭರಣ ಕದಿಯದೇ ವಾಪಸು ಬಂದಿದ್ದಾನೆ.
ಇಂತದ್ದೊಂದು ಅಪರೂಪದ ಪ್ರಕರಣ ಬೆಂಗಳೂರಿನ ಹೊರ ವಲಯದ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇಲ್ಲಿನ ಆರ್ಬಿಐ ಬಡಾವಣೆಯಲ್ಲಿ ಸುಬ್ರಮಣ್ಯಸ್ವಾಮಿ ದೇಗುಲವಿದೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿನಲ್ಲಿ
ಅಪರಿಚಿತನೊಬ್ಬ ಬಾಗಿಲನ್ನು ರಾಡ್ನಿಂದ ಮೀಟಿ ಒಳ ನುಗ್ಗಿದ್ದಾನೆ. ದೇವಾಲಯದ ಹುಂಡಿ ನೋಡಿದ್ದಾನೆ. ಆ ಬಳಿಕ ಗರ್ಭಗುಡಿಗೆ ಪ್ರವೇಶಿಸಿದ್ದಾನೆ. ಕೆಲ ಕಾಲ ಗರ್ಭಗುಡಿಯಲ್ಲಿಯೇ ನಿಂತು ಕೊನೆಗೆ ದೇವರಿಗೆ ಕೈ ಮುಗಿದು ವಾಪಸು ಬಂದಿದ್ದಾನೆ.

ಕದಿಯಲು ದೇವಾಲಯ ಬಾಗಿಲು ಮುರಿದಿರುವ ಅಪರಿಚಿತ ವ್ಯಕ್ತಿ ಕೈ ಮುಗಿದು ವಾಪಸು ಹೋಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇವಾಲಯದ ಆಡಳಿತ ಮಂಡಳಿ ಬಾಗಿಲು ತೆಗೆದು ನೋಡಿದಾಗ ಕೃತ್ಯ ಬೆಳಕಿಗೆ ಬಂದಿದೆ. ಸಿಸಿಟಿವಿ ನೋಡಿದಾಗ ಮೇಲಿನ ವೃತ್ತಾಂತ ಗೊತ್ತಾಗಿದೆ. ಈ ಕುರಿತು ತಾವರೆಕೆರೆ ಪೊಲೀಸರಿಗೆ ದೂರು ನೀಡಲಾಗಿದೆ. ಬಾಗಿಲು ಮುರಿದು ಒಳ ಹೋಗಿರುವ ಕಳ್ಳ ಬರಿ ಗೈಯಲ್ಲಿ ಯಾಕೆ ಸುಮ್ಮನಾದ ಎಂಬುದು ಇದೀಗ ಸ್ಥಳೀಯರನ್ನು ಕಾಡುತ್ತಿದೆ. ದೇವರನ್ನು ನೋಡಿದ ಬಳಿಕ ಮನಸು ಬದಲಾಗಿ ವಾಪಸು ಹೋದನೇ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿಸಿಬಿ ಪೊಲೀಸರಿಂದ ಗ್ಯಾಂಬ್ಲರ್ಸ್ ಅರೆಸ್ಟ:
ಬೆಂಗಳೂರಿನಲ್ಲಿ ಖಾಸಗಿ ಹೋಟೆಲ್ ನಲ್ಲಿ ರೂಂ ಬಾಡಿಗೆ ಪಡೆದು ಅಂದರ್ ಬಾಹರ್ ದಂಧೆಯಲ್ಲಿ ತೊಡಗಿದ್ದ ಐವರನ್ನು ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 20 ಲಕ್ಷ ರೂ. ಹಣ, ಹಣ ಎಣಿಸುವ ಯಂತ್ರ, ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಉದಯಶೆಟ್ಟಿ, ನಟರಾಜ್, ಸುರೇಶ್, ರಾಮಕೃಷ್ಣ, ಕೃಷ್ಣಗೌಡ ಬಂಧಿತರು. ಇವರು ರೇಸ್ ಕೋರ್ಸ್ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ಇಸ್ಪೀಟ್ ಆಟವಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿದ್ದಾರೆ. ಬಂಧಿತರ ಬಳಿಯಿದ್ದ 20 ಲಕ್ಷ ರೂ. ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.












Click it and Unblock the Notifications