'ಹಿಂದಿ ಗೊತ್ತಿಲ್ಲದವರು ಅನಕ್ಷರಸ್ಥರು...' ಕನ್ನಡಿಗನಿಗೆ ರೈಲ್ವೆ ಸಿಬ್ಬಂದಿ ಅವಾಜ್
ಕನ್ನಡ ನೆಲದಲ್ಲೇ ಇತ್ತೀಚೆಗೆ ಕನ್ನಡ ವಿರೋಧಿ ಕೂಗು ಜೋರಾಗಿ ಕೇಳಿಬರುತ್ತಿದೆ. ಈ ಜಾಗಕ್ಕೇ ಬಂದು ಇಲ್ಲಿನವರ ಮೇಲೆ ದರ್ಪದಿಂದ ಮಾತನಾಡುವ, ಇಲ್ಲಿನ ನೆಲದ ಭಾಷೆಗೆ ಅಗೌರವ ತೋರುವ ಘಟನೆಗಳು ಆಗಾಗ ಮರುಕಳಿಸುತ್ತಲೇ ಇವೆ. ಇಂದು ಕೂಡ ಒಂದು ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಕನ್ನಡಿಗ ಹಾಗೂ ಹಿಂದಿ ಭಾಷೆ ಮಾತನಾಡುವ ರೈಲ್ವೆ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, ಅಲ್ಲೇ ಉಲ್ಲೇಖಿಸಿರುವಂತೆ ಈ ಘಟನೆ ಇಂದು ಯಶವಂತಪುರ ರೈಲ್ವೆ ನಿಲ್ದಾಣದ ರೈಲಿನಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಇಲ್ಲಿ ಪ್ರಯಾಣಿಕನಾಗಿದ್ದ ಕನ್ನಡಿಗ ಹಾಗೂ ಹಿಂದಿ ಭಾಷೆ ಮಾತನಾಡುವ ರೈಲ್ವೆ ಸಿಬ್ಬಂದಿ ನಡುವೆ ಜೋರಾದ ಗಲಾಟೆಯೇ ನಡೆದು ಹೋಗಿದೆ.

ಇನ್ನು ಭಾಷಾ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದ್ದು, ಈ ವೇಳೆ ರೈಲ್ವೆ ಸಿಬ್ಬಂದಿ ಕನ್ನಡಿಗನಿಗೆ ಅವಾಜ್ ಹಾಕಿದ್ದಾರೆ. ಹಿಂದಿ ಭಾಷೆಯೇ ಮೇಲು ಎನ್ನುವಂತೆ ಮಾತನಾಡುವ ಭರದಲ್ಲಿ, ಹಿಂದಿ ಕಲಿಯದವರು ಅನ್ಎಜುಕೇಟೆಡ್ಸ್ (ಅನಕ್ಷರಸ್ಥರು) ಎಂದು ಕರೆದಿದ್ದಾರೆ ಎಂಬ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಯಶವಂತಪುರದ ರೈಲ್ವೆ ಟಿಟಿಇವೊಬ್ಬರು ಪ್ರಯಾಣಿಕರೊಂದಿಗೆ ಹಿಂದಿಯಲ್ಲೇ ಮಾತನಾಡುವಂತೆ ಒತ್ತಾಯಿಸಿದ್ದಾರೆ. ಈ ಹಿಂದಿ ಹೇರಿಕೆ ವಿರುದ್ಧ ಕನ್ನಡಿಗನೊಬ್ಬ ಅಲ್ಲೇ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾನೆ. ಈ ವೇಳೆ ಇಬ್ಬರ ನಡುವೆಯಾ ಭಾಷಾ ವಾರ್ ನಡೆದಿದೆ.
ಯಶವಂತಪುರ ದಾದರ್ ಎಕ್ಸ್ಪ್ರೆಸ್ ರೈಲಿನಲ್ಲಿ ಈ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ರೈಲಿನಲ್ಲಿದ್ದ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಪ್ರಯಾಣಿಕರಿಗೆ ನೀವು ಹಿಂದಿ ಮಾತನಾಡಿ ಎಂದು ಜೋರು ಮಾಡಿದ್ದಾರೆ. ಇದಕ್ಕೆ ಅಲ್ಲಿದ್ದ ಕನ್ನಡಿಗರೊಬ್ಬರು ವಿರೋಧ ಮಾಡಿದ್ದಾರೆ.
ರೈಲ್ವೆಯಲ್ಲಿ ಹಿಂದಿ ಕಡ್ಡಾಯ, ಹಾಗಾಗಿ ಹಿಂದಿಯಲ್ಲೇ ಮಾತನಾಡಬೇಕು ಎಂದು ಹೇಳಿದ್ದಾನೆ. ಇದಕ್ಕೆ ಕೋಪಗೊಂಡ ಕನ್ನಡಿಗ, ಇದು ಕನ್ನಡದ ನೆಲ, ನೀವು ಇರುವುದು ಕನ್ನಡ ನೆಲದಲ್ಲೇ...ನೀವು ಮೊದಲು ಕನ್ನಡವನ್ನು ಕಲಿತುಕೊಳ್ಳಿ, ಇಲ್ಲಾಂದ್ರೆ ನಿಮ್ಮ ರಾಜ್ಯಕ್ಕೆ ಹೋಗಿ ನಿಮ್ ಭಾಷೇಲಿ ಮಾತನಾಡಿ ಎಂದು ಕೌಂಟರ್ ಕೊಟ್ಟಿದ್ದಾನೆ.
ಆಗ ರೈಲ್ವೆ ಸಿಬ್ಬಂದಿ ಮತ್ತೆ ಮಾತು ಆರಂಭಿಸಿ, ಇಲ್ಲಿ ಕನ್ನಡವೇನು ಕಡ್ಡಾಯವಲ್ಲ ಎಂದಿದ್ದ. ಅದಕ್ಕೆ ಮತ್ತೆ ಉತ್ತರಿಸಿದ ಕನ್ನಡಿಗ, ಹೌದು ಇಲ್ಲಿ ಕನ್ನಡ ಕಡ್ಡಾಯವಲ್ಲ, ಆಗೆಂದ ಮಾತ್ರಕ್ಕೆ ನಾವೆಲ್ಲ ಹಿಂದಿಯನ್ನೇ ಮಾತನಾಡಬೇಕು ಎಂದೇನಿಲ್ಲ. ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದು ಉತ್ತರಿಸಿದ್ದಾನೆ. ಆಗ ಉಡಾಫೆಯಿಂದ ಆತ ನೀನು ಏನ್ ಬೇಕಾದ್ರು ಮಾಡ್ಕೋ ಎಂದು ಸವಾಲು ಕೂಡ ಹಾಕಿದ್ದಾನೆ.
ಕೊನೆಗೆ ಕನ್ನಡಿಗ ನೀನು ಕೆಲಸ ಮಾಡುತ್ತಿರುವುದು ಕರ್ನಾಟಕದಲ್ಲಿ, ಹಾಗಾಗಿ ಕನ್ನಡ ಮಾತನಾಡು ಎಂದು ತಾಕೀತು ಮಾಡಿದಾಗ, ರೈಲ್ವೆ ಸಿಬ್ಬಂದಿ ಅದೆಲ್ಲ ಆಗಲ್ಲ, ನಾನು ರೈಲ್ವೆ ಕೆಲಸ ಮಾಡುವುದು, ಕನ್ನಡ ಎಲ್ಲ ಮಾತಾಡೋಕೆ ಆಗಲ್ಲ ಎಂದೇ ಪಟ್ಟು ಹಿಡಿದು ಮಾತನಾಡಿದ್ದಾನೆ. ಇವರಿಬ್ಬರ ಈ ವಾಗ್ವಾದದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಇನ್ನು ಈ ವಿಡಿಯೋಗೆ ಪರ ವಿರೋಧದ ಚರ್ಚೆಗಳಿಗೆ ಕಾರಣವಾಗಿದೆ. ಕೆಲವರು ಕನ್ನಡಿಗರೇ.. ನಿಮಗೆ ಎಷ್ಟೇ ಭಾಷೆ ಬಂದ್ರು ಕರ್ನಾಟಕದಲ್ಲಿ ಇನ್ಮುಂದೆ ಎಲ್ಲಾ ಪರಭಾಷಿಕರ ಜೊತೆ ಕನ್ನಡದಲ್ಲೇ ಮಾತಾಡಿ, ಇಲ್ದಿದ್ರೆ ಮುಂದೊಂದು ದಿನ ನಮ್ಮ ನೆಲದಲ್ಲಿ ನಮ್ಮ ಹಕ್ಕುಗಳನ್ನ ಕಳ್ಕೋಬೇಕಾಗಯತ್ತೆ ಎಂದು ಕಾಮೆಂಟ್ ಮಾಡಿದ್ದಾರೆ.
ಕನ್ನಡ ಹೋರಾಟಗಾರರೊಬ್ಬರು, ಕೆಲವರ ಪ್ರಕಾರ ರೈಲ್ವೆ ಇಲಾಖೆಯಲ್ಲಿರೋ ಈತ ಕನ್ನಡ ಮಾತಾಡೋ ಅವಶ್ಯಕತೆ ಇಲ್ಲ. ನೀವೇ ಹಿಂದಿ ಮಾತಾಡಿ ಎಂಬುದು..! ಅಂತವರಿಗೆ ನಾನು ಕೇಳೋದು ಈ ಕನ್ನಡಿಗ, ಕನ್ನಡ ಕೇಳಿದ್ದು ಭಿಮಾರು ರಾಜ್ಯಗಳಲ್ಲಿ ಅಲ್ಲ, ನಮ್ಮ ಕನ್ನಡ ನಾಡಲ್ಲಿ. ಇದಕ್ಕೆಲ್ಲ ಪರಿಹಾರವೆಂದರೆ, ಅವನು ಕನ್ನಡ ಕಲಿಯಲಿ ಅಥವಾ ಕನ್ನಡಿಗರಿಗೆ ಉದ್ಯೋಗ ನೀಡಲಿ ಎಂದು ಆಗ್ರಹಿಸಿದ್ದಾರೆ.












Click it and Unblock the Notifications