Bengaluru Rains : ಬೆಂಗಳೂರು ನಗರದಲ್ಲಿ ಶುಕ್ರವಾರ ತುಂತುರು ಮಳೆಯ ಸಿಂಚನ
ಬೆಂಗಳೂರು, ನವೆಂಬರ್ 11: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಮಳೆಯ ವಾತಾವರಣ ಕಂಡು ಬರುತ್ತಿದ್ದು, ಶುಕ್ರವಾರ ನಗರದ ಕೆಲವು ಪ್ರದೇಶಗಳಲ್ಲಿ ತುಂತುರು ಮಳೆ ಆಗಿದೆ. ಈ ವಾತಾವರಣ ಮುಂದಿನ ನಾಲ್ಕು ದಿನ ಮುಂದುವರಿಯಲಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ (ಕೆಎಸ್ಎನ್ಡಿಎಂಸಿ) ಕೇಂದ್ರದ ಮಳೆ ಮುನ್ಸೂಚನೆ ಪ್ರಕಾರ, ನವೆಂಬರ್ 15ರವೆರೆಗೆ ಮುಂದಿನ ನಾಲ್ಕು ದಿನ ಬೆಂಗಳೂರಿನ ಕೆಲವು ಬಡಾವಣೆಗಳಲ್ಲಿ ತುಂತರು ಇಲ್ಲವೆ ಹಗುರದಿಂದ ಮಳೆ ಯಾಗಲಿದೆ. ಒಂದೆರಡು ಕಡೆ ಗುಡುಗು ಸಹಿ ಜೋರು ಮಳೆ ಬರಬಹುದು ಎಂದು ಅಂದಾಜಿಸಲಾಗಿದೆ.
ಶುಕ್ರವಾರ ಬೆಳಗ್ಗೆಯಿಂದಲೂ ನಗರದೆಲ್ಲಡೆ ಮೋಡ ಕವಿದ, ಚಳಿಯ ವಾತಾವರಣ ಸೃಷ್ಟಿಯಾಗಿದೆ. ಹೂಡಿ, ಆಡುಗೋಡಿ, ವರ್ತೂರು, ಮೆಜಸ್ಟಿಕ್ ಸುತ್ತಮುತ್ತಲಿನ ಪ್ರದೇಶ, ಮಲ್ಲೇಶ್ವರಂ, ರಾಜಾಜಿನಗರ, ವಿಜಯನಗರ, ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ ಸೇರಿದಂತೆ ವಿವಿಧೆಡೆ ಹಗುರವಾಗಿ ಮಳೆಯಾಗಿದೆ. ಎಲ್ಲೆಡೆ ತೇವಾಂಶದಿಂದ ಕೂಡಿದ ಗಾಳಿ ಬೀಸುವಿಕೆ ಪ್ರಮಾಣ ಹೆಚ್ಚಾಗಿ ಕಂಡು ಬಂತು. ಇಂದು ಸಂಜೆ ಸಹ ನಗರದ ಕೆಲವು ಬಡಾವಣೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಬೀಳುವ ಸಾಧ್ಯತೆ ಇದೆ.
ಕಳೆದ ಒಂದು ವಾರದಿಂದ ನಗರದಲ್ಲಿ ಗರಿಷ್ಠ ತಾಪಮಾನ 24ರಿಂದ 25ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ನವೆಂಬರ್ 15ರ ನಂತರ ಗರಿಷ್ಠ ತಾಪಮಾನ 27-28ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕನಿಷ್ಠ 19ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಮಳೆಯಲ್ಲೇ ಮೋದಿ ಕಂಡ ಅಭಿಮಾನಿಗಳು
ಬೆಂಗಳೂರಿಗೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕೆಲವು ಕಾರ್ಯಕ್ರಮದಲ್ಲಿ ಭಾಗವಹಿದರು. ಅದಕ್ಕು ಮುನ್ನ ವಿಧಾನಸೌಧ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಸಮಾರಂಭಗಳಲ್ಲಿ ನರೇಂದ್ರ ಮೋದಿ ಪಾಲ್ಗೊಂಡರು. ಈ ವೇಳೆ ಪ್ರಧಾನಿಯನ್ನು ಕಾಣಲು ದೂರದ ಊರಿನಿಂದ ಬಂದ ಅಭಿಮಾನಿಗಳು, ಕಾರ್ಯಕರ್ತರು ಬೆಳಗ್ಗೆಯಿಂದ ಇದ್ದ ಮಬ್ಬು ವಾತಾವರಣ, ತುಂತುರು ಮಳೆಯಲ್ಲೇ ಕಾದರು. ನಂತರ ಹೆಬ್ಬಾಳದ ತೆರಳುತ್ತಿದ್ದ ಪ್ರಧಾನಿಯನ್ನು ಅಭಿಮಾನಿಗಳು ಕಣ್ತುಂಬಿಕೊಂಡರು.