ಜೂ.14ರಂದು ಬೆಂಗಳೂರಿಗೆ ರಾಷ್ಟ್ರಪತಿ ಭೇಟಿ
ಬೆಂಗಳೂರು ಜೂ.12: ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜೂನ್ 14ರ ಮಂಗಳವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಕನಕಪುರ ರಸ್ತೆಯ ವಸಂತಪುರದಲ್ಲಿರುವ ಇಸ್ಕಾನ್ನ ರಾಜಾಧಿರಾಜ ಶ್ರೀ ಗೋವಿಂದ ಮಂದಿರವನ್ನು ಉದ್ಘಾಟಿಸಲಿದ್ದಾರೆ.
ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರು ಗ್ರಾಮೀಣ ಕ್ಷೇತ್ರದ ಸಂಸದ ಡಿ. ಕೆ. ಸುರೇಶ್, ಶಾಸಕ ಎಂ. ಕೃಷ್ಣಪ್ಪ ಸೇರಿದಂತೆ ಇನ್ನಿತರು ಪಾಲ್ಗೊಳ್ಳಲಿದ್ದಾರೆ.
ಭಗವಂತ ಎಂದರೆ ಲೋಕದ ರಾಜ ಎಂಬ ನಂಬಿಕೆ ಇದೆ. ಪ್ರಸ್ತುತ ಉದ್ಘಾಟನೆಗೊಳ್ಳಲಿರುವ ಶ್ರೀ ಗೋವಿಂದ ಮಂದಿರವು ತಿರುಮಲದಲ್ಲಿರುವ ಶ್ರೀ ವೆಂಕಟೇಶ್ವರ ದೇವಸ್ಥಾನವನ್ನೇ ಹೋಲುವಂತಿದೆ. ಇಲ್ಲಿ ಕಲ್ಲಿನಲ್ಲಿ ಸೂಕ್ಷ್ಮವಾಗಿ ಕೆತ್ತಲಾಗಿರುವ ಶಿಲ್ಪಗಳಿವೆ. ದೇವರ ಮೂರ್ತಿಯ ಎತ್ತರ, ಪ್ರಾಂಗಣಗಳ ಆಕಾರ ಬಹುತೇಕ ಎಲ್ಲವು ತಿರುಮಲ ದೇವಾಲಯವನ್ನು ಹೋಲುವಂತಿದೆ. ಮುಖ್ಯವಾಗಿ ನೂತನ ಮಂದಿದ ದೇವರ ಹೆಸರು ಸಹ ಗೋವಿಂದ ಎಂಬುದು ಮತ್ತೊಂದು ವಿಶೇಷ.
ದೇವಾಲಯದ ವಿಶೇಷತೆ; ಶ್ರೀ ಗೋವಿಂದ ದೇವಾಲಯವು ಮಕ್ಕಳು, ಯುವಕರು ಮತ್ತು ಕುಟುಂಬ ಸದಸ್ಯರಿಗೆ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಶಿಕ್ಷಣ ಒದಗಿಸುವ ಎಲ್ಲ ರೀತಿಯ ಸೌಲಭ್ಯಗಳನ್ನು ಹೊಂದಿದೆ.
ಅಲ್ಲದೇ ಗೋವಿಂದ ಮತ್ತು ಇತರ ದೇವರ ದರ್ಶನಕ್ಕಾಗಿ ವಿವಿಧೆಡೆಯಿಂದ ಬರುವ ಭಕ್ತರಿಗೆ ಸರತಿ ಸಾಲಿನಲ್ಲಿ ನಿಲ್ಲಲ್ಲು, ವಿಶ್ರಾಂತಿ, ಧ್ಯಾನಕ್ಕಾಗಿ ಬೃಹತ್ ಪ್ರಾಂಗಣ ನಿರ್ಮಿಸಲಾಗಿದೆ. ದರ್ಶನ ಬಳಿಕ ನೂರಾರು ಭಕ್ತರು ಸೇರಿ ಸಾಮೂಹಿಕವಾಗಿ ಪ್ರಸಾದ ಸೇವಿಸಲು ಅನುಕೂಲವಾಗುವಂತೆ ದೊಡ್ಡದಾದ ಅಗತ್ಯ ಊಟದ ಸಭಾಂಗಣ ಹೊಂದಿದೆ. ಮಂದಿರ ಸೇರಿದಂತೆ ಅಗತ್ಯ ಸೌಲಭ್ಯಗಳ ಅಭಿವೃದ್ಧಿಗೆ ಭಕ್ತರು ಹಾಗೂ ದಾನಿಗಳು ಉದಾರವಾಗಿ ಕೊಡುಗೆ ನೀಡಿದ್ದಾರೆ.
ರಾಷ್ಟ್ರಪತಿಗಳು ಸೇರಿದಂತೆ ಸಾಕಷ್ಟು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳವುದರಿಂದ ದೇವಸ್ಥಾನ ಆಡಳಿತ ಮಂಡಳಿಯ ಸದಸ್ಯರು ಉದ್ಘಾಟನಾ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಯೋಜನೆ ರೂಪಿಸಿದ್ದಾರೆ. ವೈದಿಕ ಸಾಂಪ್ರದಾಯದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ವಿಶೇಷ ಪುನಸ್ಕಾರಗಳು ಜರುಗಲಿವೆ. ದೇವಾಲಯವು ಆಗಸ್ಟ್ 1ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅಂದಿನಿಂದ ಭಕ್ತರು ದೇವರ ದರ್ಶನ ಪಡೆಯಬಹುದು.
ಕುತೂಹಲ ಮೂಡಿಸಿದ ಭೇಟಿ; ರಾಮನಾಥ್ ಕೋವಿಂದ್ 2017ರಲ್ಲಿ ರಾಷ್ಟ್ರಪತಿಗಳಾಗಿ ಅಧಿಕಾರ ಸ್ವೀಕಾರ ಮಾಡಿದರು. 5 ವರ್ಷ ಆಡಳಿತ ನೀಡಿದ ಅವರ ಅಧಿಕಾರಾವಧಿ 2022ರ ಜುಲೈ 24ಕ್ಕೆ ಕೊನೆಗೊಳ್ಳಲಿದೆ. ಈಗಾಗಲೇ ನೂತನ ರಾಷ್ಟ್ರಪತಿ ಆಯ್ಕೆಗೆ ದಿನಾಂಕ ನಿಗದಿಯಾಗಿದೆ.
ಇದಕ್ಕೂ ಮೊದಲು ರಾಮನಾಥ್ ಕೋವಿಂದ್ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿ ಪ್ರತಿಪಕ್ಷ ನಾಯಕರಲ್ಲಿ ಕುತೂಹಲ ಮೂಡಿಸಿದೆ. ಅಲ್ಲದೇ ರಾಜ್ಯದಿಂದ ನೂತನವಾಗಿ ರಾಜ್ಯಸಭೆಗೆ ಮೂವರು ಆಯ್ಕೆಯಾಗಿರುವ ವೇಳೆ ರಾಷ್ಟ್ರಪತಿಗಳು ಭೇಟಿ ನೀಡುತ್ತಿದ್ದಾರೆ.