Breaking: ಬೆಂಗಳೂರಿಗೆ ದ್ರೌಪದಿ ಮುರ್ಮು ಭೇಟಿ: ಸಂಚಾರ ಮಾರ್ಗ ಬದಲು
ಬೆಂಗಳೂರು, ಸೆಪ್ಟಂಬರ್ 27: ನಾಡ ಹಬ್ಬ ದಸರಾ ಹಬ್ಬದ ಉದ್ಘಾಟನೆ ನೆರವೇರಿಸಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಂಗಳವಾರ ರಾಜ್ಯ ರಾಜಧಾನಿ ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ. ಗಣ್ಯರ ಭೇಟಿ ಹಿನ್ನೆಲೆ ಬೆಂಗಳೂರು ನಗರ ಪೊಲೀಸರು ನಗರದಲ್ಲಿ ಹಲವೆಡೆ ಸಂಚಾರ ಮಾರ್ಗ ಬದಲಿಸಿದ್ದಾರೆ.
ಬೆಂಗಳೂರು ನಗರದ ರಿಚ್ಮಂಡ್ ಮೇಲ್ಸೇತುವೆ ಮೇಲೆ ಸಂಚರಿಸುವ ಎಲ್ಲ ಮಾದರಿ ವಾಹನಗಳಿಗೆ ಮಂಗಳವಾರ ಮಧ್ಯಾಹ್ನ 2.30ರಿಂದ 5.30ರವರೆಗೆ ನಿರ್ಬಂಧಿಸಲಾಗಿದೆ. ಶಾಂತಿನಗರ ಜಂಕ್ಷನ್ ಹಾಗೂ ನಂಜಪ್ಪ ವೃತ್ತದ ಮಧ್ಯದ ರಸ್ತೆಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಬೆಂಗಳೂರಿನಲ್ಲಿ ಎನ್ಐವಿಗೆ ದ್ರೌಪದಿ ಮುರ್ಮುರಿಂದ ಶಂಕುಸ್ಥಾಪನೆ
ಜತೆಗೆ ರಾಜಭವನ ರಸ್ತೆ, ಇನ್ಫೆಂಟ್ರಿ ರಸ್ತೆ, ಕ್ವೀನ್ಸ್ ರಸ್ತೆ, ಕಸ್ತೂರಬಾ ರಸ್ತೆ, ಲ್ಯಾಂಗ್ ಫೋರ್ಡ್ ಮತ್ತು ಬಿ.ಆರ್.ಅಂಬೇಡ್ಕರ್ ರಸ್ತೆಗಳನ್ನು ಸಾರ್ವಜನಿಕರು ಬಳಸಬಾರದು. ಅವುಗಳ ಆಸುಪಾಸಿನ ರಸ್ತೆ ಬಳಸಬೇಕು. ಇಲ್ಲವೇ ಪೊಲೀಸ್ ಇಲಾಖೆ ಸೂಚಿಸಿದ ರಸ್ತೆಗಳಲ್ಲಿ ಸಂಚರಿಸುವಂತೆ ಮನವಿ ಮಾಡಿ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮುರ್ಮು ಭಾಗಿ
ಮಂಗಳವಾರ ಬೆಂಗಳೂರಿನಲ್ಲಿ ನಡೆಯಲಿರುವ ಸೇಂಟ್ ಜೋಸೆಫ್ ವಿಶ್ವವಿದ್ಯಾನಿಲಯದ ಉದ್ಘಾಟನೆ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾಲ್ಗೊಳ್ಳಲಿದ್ದಾರೆ. ನಂತರ ಕರ್ನಾಟಕ ಸರ್ಕಾರ ರಾಷ್ಟ್ರಪತಿಗಳನ್ನು ಗೌರವಿಸಲು ಆಯೋಜಿಸಿರುವ ಸಮಾರಂಭದಲ್ಲಿ ಭಾಗವಹಿಸಿ ನಂತರ ಸೆಪ್ಟಂಬರ್ 28ರಂದು ದೆಹಲಿಗೆ ರಾಷ್ಟ್ರಪತಿಗಳು ಮರಳಲಿದ್ದಾರೆ.
ಸೋಮವಾರ ಸಂಜೆ ಹಳೆ ವಿಮಾನ ನಿಲ್ದಾಣ ರಸ್ತೆ, ಎಂಜಿ ರಸ್ತೆ, ಡಿಕನ್ಸನ್ ರಸ್ತೆ, ರಾಜಭವನ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ ಎಂದು ಪೊಲೀಸ್ ಇಲಾಖೆ ಹೇಳಿತ್ತು. ಆದರೆ ಮಧ್ಯಾಹ್ನದ ನಂತರ ಮಳೆ ಬಂದ ಕಾರಣ, ಸಾರ್ವಜನಿಕರ ಸಂಚಾರ ಅಸ್ತವ್ಯಸ್ತವಾಯಿತು. ಕೆಲವೆಡೆ ಸಂಚಾರ ದಟ್ಟಣೆಯು ಕಂಡು ಬಂತು. ಕೆಲವೇ ನಿಮಿಷಗಳು ಸಂಚರಿಸುವ ಗಣ್ಯರ ಸಲುವಾಗಿ ಪೊಲೀಸರು ಗಂಟೆಗಟ್ಟಲೇ ರಸ್ತೆ ಸಂಚಾರ ನಿರ್ಬಂಧ ವಿಧಿಸಿದ್ದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದರು.