ಬೆಂಗಳೂರು ಪಾದಚಾರಿಗಳಿಗೆ ನೆಮ್ಮದಿ ನೀಡಿದ ಬಿಬಿಎಂಪಿ
ಬೆಂಗಳೂರು, ಜನವರಿ 22: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೊಸೂರು ಮುಖ್ಯ ರಸ್ತೆಯ ಚೆಕ್ ಪೋಸ್ಟ್ ಬಳಿ ನೂತನವಾಗಿ ನಿರ್ಮಿಸಿರುವ ಪಾದಚಾರಿ ಮೇಲ್ಸೇತುವೆಯನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು.
ಹೊಸೂರು ಮುಖ್ಯರಸ್ತೆ ಸರ್ಜಾಪುರ ಜಂಕ್ಷನ್ನಲ್ಲಿ ಪಾದಚಾರಿ ಮೇಲ್ಸೇತುವೆ ಅಗತ್ಯ ತುಂಬಾ ಇತ್ತು. ಆ ನಿಟ್ಟಿನಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲು ಪ್ರಕಾಶ್ ಆರ್ಟ್ಸ್ ಪ್ರೈವೇಟ್ ಲಿ ಸಂಸ್ಥೆಯು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಸ್ಕೈವಾಕ್ ನಿರ್ಮಾಣ ಮಾಡಿದೆ.
ವಿನೂತನ ರೀತಿಯಲ್ಲಿ ಸ್ಕೈವಾಕ್ ಅನ್ನು ನಿರ್ಮಿಸಿದ್ದು, ಸಿಸಿ ಕ್ಯಾಮೆರಾ, ಎರಡೂ ಬದಿಯಲ್ಲಿ ಲಿಪ್ಟ್ ಹಾಗೂ ಸಾರ್ವಜನಿಕರು ರಾತ್ರಿ ವೇಳೆ ಸುರಕ್ಷಿತವಾಗಿ ತೆರಳಲು ಎಲ್.ಇ.ಡಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ.

ಹೆಚ್ಚು ಸ್ಕೈವಾಕ್ ಗಳನ್ನು ನಿರ್ಮಾಣ ಮಾಡಬೇಕು
ಮೇಯರ್ ಗೌತಮ್ ಕುಮಾರ್ ಮಾತನಾಡಿ, ನಗರವನ್ನು ಸ್ವಚ್ಛಗೊಳಸಿ ಸುಂದರವಾಗಿ ಕಾಣುವಂತೆ ಮಾಡುವ ಪೌರಕಾರ್ಮಿಕರ ಆರೋಗ್ಯದ ಹಿತದೃಷ್ಟಿಯಿಂದ ಪೌರಕಾರ್ಮಿಕರಿಗೆ ಹೈಜಿನಿಕ್ ಕಿಟ್ಗಳನ್ನು ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆ ವ್ಯಾಪ್ತಿಯ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವವರಿಗೂ ಕಿಟ್ ವಿತರಿಸಲು ಕ್ರಮ ವಹಿಸಲಾಗವುದು. ಪೌರಕಾರ್ಮಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಪಾಲಿಕೆ ವಿನೂತನ ಹೆಜ್ಜೆ ಇಟ್ಟಿದೆ. ಅದರಂತೆ ಈಗಾಗಲೇ 150 ಪೌರಕಾರ್ಮಿಕರಿಗೆ ಹೈಜಿನಿಕ್ ಕಿಟ್ ವಿತರಣೆ ಮಾಡಲಾಗಿದೆ. ಪೌರಕಾರ್ಮಿಕರು ಆರೋಗ್ಯವಾಗಿದ್ದರೆ ಮಾತ್ರ ನಗರ ಸುಂದರವಾಗಿ ಹಾಗೂ ನಾಗರಿಕರು ಆರೋಗ್ಯವಾಗಿರಲು ಸಾಧ್ಯ. ಇದೇ ಮಾದರಿಯಲ್ಲಿ ಬೇರೆಡೆಯೂ ಸ್ಕೈವಾಕ್ ಗಳನ್ನು ನಿರ್ಮಾಣ ಮಾಡಬೇಕು ಎಂದು ಹೇಳಿದರು.

ಮಾಜಿ ಸಚಿವ ರಾಮಲಿಂಗರೆಡ್ಡಿ ಮಾತು
ಮಾಜಿ ಸಚಿವ ರಾಮಲಿಂಗರೆಡ್ಡಿ, ''ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ನಗರದಲ್ಲಿ ಈಗಾಗಲೇ ಸಾಕಷ್ಟು ಸ್ಕೈವಾಕ್ ನಿರ್ಮಾಣ ಮಾಡಲಾಗಿದೆ. ಸ್ಕೈ ವಾಕ್ ಗಳನ್ನು ನಿರ್ಮಾಣ ಮಾಡಿದ ಬಳಿಕ ಅದನ್ನು ನಿರ್ವಹಣೆ ಮಾಡುವುದು ಕೂಡಾ ಬಹಳ ಮುಖ್ಯ. ಹೆಚ್ಚು ಬೇಡಿಕೆ ಇರುವ ಕಡೆ ಸ್ಕೈವಾಕ್ ಗಳನ್ನು ನಿರ್ಮಿಸಿ ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು'' ಎಂದು ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ ಏನಂದ್ರು?
ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ''ನಗರದಲ್ಲಿ ದಿನೇ ದಿನೆ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಅದನ್ನು ಕಡಿಮೆ ಮಾಡಬೇಕಾದರೆ ನಾಗರೀಕರು ಖಾಸಗಿ ವಾಹನಗಳನ್ನು ಬಳಸುವ ಬದಲು ಹೆಚ್ಚಾಗಿ ಸಾರ್ವಜನಿಕ ಸಾರಿಗೆ ಬಳಸಿದರೆ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ. ಪಾದಚಾರಿ ಮೇಲ್ಸೇತುವೆಗಳು ನಿರ್ಮಾಣ ಮಾಡುವುದರಿಂದ ಹಿರಿಯ ನಾಗರಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಅಗತ್ಯವಿರುವ ಸ್ಥಳಗಳಲ್ಲಿ ಸ್ಕೈವಾಕ್ ಗಳನ್ನು ನಿರ್ಮಿಸಿದರೆ ಪಾದಚಾರಿಗಳಿಗೆ ಹೆಚ್ಚು ಸಹಕಾರಿಗಲಿದೆ'' ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಇದ್ದವರು ಯಾರಾರು?
ಈ ವೇಳೆ ಉಪಮಹಾಪೌರ ರಾಮಮೋಹನ ರಾಜು, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ಮಾಜಿ ಮಹಾಪೌರ ಮಂಜುನಾಥ ರೆಡ್ಡಿ, ಸ್ಥಳೀಯ ಬಿಬಿಎಂಪಿ ಸದಸ್ಯರಾದ ಚಂದ್ರಪ್ಪ, ಜಿ.ಮಂಜುನಾಥ್, ಸರಳ ಸಿ, ಮಹೇಶ್ ಬಾಬು, ಮುಖ್ಯ ಅಭಿಯಂತರ ಸೋಮಶೇಖರ್, ಅಧೀಕ್ಷಕ ಅಭಿಯಂತರ, ಬಸವರಾಜ್ ಕಬಾಡೆ ಉಪಸ್ಥಿತರಿದ್ದರು.












Click it and Unblock the Notifications