ಬೆಂಗಳೂರಿಗರ ಬಹುದಿನಗಳ ಕನಸು, ಸಬರ್ಬನ್ ರೈಲಿಗೆ ಹಸಿರು ನಿಶಾನೆ
ನವದೆಹಲಿ, ನವೆಂಬರ್ 04: "ಬೆಂಗಳೂರಿನ ಜನತೆಗೆ ಸಿಹಿ ಸುದ್ದಿ; ಇಂದು ದೆಹಲಿಯಲ್ಲಿ ನಡೆದ ರೈಲ್ವೆಬೋರ್ಡ್ (ವಿಸ್ತೃತ) ಸಭೆಯಲ್ಲಿ ಬೆಂಗಳೂರು #ಉಪನಗರರೈಲು ಯೋಜನೆಗೆ ಹಸಿರು ನಿಶಾನೆ ದೊರಕಿದೆ. ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಸಂಪೂರ್ಣ ಸಹಕಾರ ನೀಡುತ್ತಿರುವ ರೈಲ್ವೆಸಚಿವ ಪಿಯೂಷ್ ಗೋಯೆಲ್, ಸುರೇಶ್ ಅಂಗಡಿ ಅವರಿಗೆ ಕೃತಜ್ಞತೆಗಳು ಎಂದು ಸಂಸದ ಪಿಸಿ ಮೋಹನ್ ಅವರು ಟ್ವೀಟ್ ಮಾಡಿದ್ದಾರೆ.
ನವದೆಹಲಿಯಲ್ಲಿ ನವೆಂಬರ್ 4ರಂದು ರೈಲ್ವೆ Extend ಬೋರ್ಡ್ ಮಿಟಿಂಗ್ ಹಮ್ಮಿಕೊಳ್ಳಲಾಗಿದೆ. ಬಳಿಕ ರಾಜ್ಯರೈಲ್ವೆ ಖಾತೆ ಸಚಿವ ಸುರೇಶ್ ಅಂಗಡಿ ಮತ್ತು ರೈಲ್ವೇ ಬೋರ್ಡ್ ಛೇರ್ಮನ್ ಅವರುಗಳು ಬೆಂಗಳೂರಿಗೆ ಆಗಮಿಸಲಿದ್ದು, ಈ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಲಿದ್ದಾರೆ" ಎಂದು ಸಂಸದ ಪಿಸಿ ಮೋಹನ್ ಹೇಳಿದರು.
In order to fast track the #BengaluruSuburbanRail, the Extended Railway Board met today & has given its clearance.
— Suresh Angadi (@SureshAngadi_) November 4, 2019
In this regard, I assure the people of Bengaluru that Shri @PiyushGoyal Ji & I shall make all efforts to ensure the project is brought to fruition at the earliest.
ಮುಂಬರುವ ಸಂಸತ್ ಅಧಿವೇಶನದಲ್ಲಿ ಸಬರ್ಬನ್ ರೈಲ್ವೆ ಅನುಷ್ಠಾನ ಸಂಬಂಧ ರಾಜ್ಯದ ಸಂಸದರೆಲ್ಲಾ ಪ್ರಧಾನ ಮಂತ್ರಿ ಅವರನ್ನು ಭೇಟಿಯಾಗಿ ಚರ್ಚಿಸಲಿದ್ದೇವೆ, ಎರಡೂ ಸಭೆಗಳ ಬಳಿಕ ಯೋಜನೆಗೆ ಅಂತಿಮ ಸ್ವರೂಪ ಸಿಗಲಿದೆ. ಯೋಜನೆ ತ್ವರಿತವಾಗಿ ಚಾಲನೆಗೆ ಬರಬೇಕು ಎನ್ನುವುದು ನಮ್ಮ ಉದ್ದೇಶ, ಈಗಾಗಲೇ ಕೇಂದ್ರದ ಬಜೆಟ್ ನಲ್ಲಿ ಅನುಮೋದನೆ ಸಿಕ್ಕಿದೆ, ಬಜೆಟ್ ನಲ್ಲಿ 17 ಸಾವಿರ ಕೋಟಿ ರೂ. ನೀಡಲಾಗಿದೆ ಎಂದು ಹೇಳಿದರು.
ಸಂಸದರಾದ ತೇಜಸ್ವಿ ಸೂರ್ಯ, ರಾಜೀವ್ ಚಂದ್ರಶೇಖರ್ ಸೇರಿದಂತೆ ರೈಲ್ವೆ ಪ್ರಯಾಣಿಕರು ಈ ಸುದ್ದಿ ತಿಳಿಯುತ್ತಿದ್ದಂತೆ ಸಂಭ್ರಮಿಸಿದ್ದಾರೆ. ಉಪನಗರ ರೈಲು ಯೋಜನೆ ಅನುಷ್ಠಾನಗೊಳಿಸುವ ಮೂಲಕ ಬೆಂಗಳೂರಿನ ನಾಗರಿಕರ ಹಲವಾರು ದಶಕಗಳ ಕನಸು ನನಸಾಗಲಿದೆ ಎಂದು ಪಿ.ಸಿ.ಮೋಹನ್ ಹೇಳಿದರು.
ಮೆಟ್ರೋ ಆದಾಯ ಕಡಿಮೆ ಎಂಬ ವಾದ
ಈ ಹಿಂದಿನ ಡಿಪಿಅರ್ ನಲ್ಲಿ ಮೆಟ್ರೋವಿರುವ ಕಡೆ ಸಬರ್ಬನ್ ರೈಲು ಇರಬಾರದು, ಇದರಿಂದ ಮೆಟ್ರೋ ಆದಾಯ ಕಡಿಮೆ ಆಗುತ್ತದೆ ಎಂಬ ಈ ನೆಪ ಹೇಳಲಾಗಿತ್ತು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ರಿವೈಸ್ಡ್ ಡಿಪಿಆರ್ ಕಳುಹಿಸಿಕೊಡಲಾಗಿದೆ, ಬೆಂಗಳೂರಿಗೆ ಮಲ್ಟಿ ಮೋಡ್ ಟ್ರಾನ್ಸ್ ಪೋರ್ಟ್ ಬೇಕು, ಈ ಯೋಜನೆಯಿಂದ ಬೆಂಗಳೂರಿನ ಹೊರಭಾಗದ ಜನರಿಗೂ ಅನುಕೂಲ ಆಗಲಿದೆ" ಎಂದು ಸಂಸದ ಪಿ.ಸಿ.ಮೋಹನ್ ತಿಳಿಸಿದರು.
ಸುರೇಶ್ ಅಂಗಡಿಯವರಿಗೆ ಬರೆದ ಪತ್ರ
ಈ ಕುರಿತು ಕೇಂದ್ರ ರಾಜ್ಯ ಸಚಿವ ಸುರೇಶ್ ಅಂಗಡಿಯವರಿಗೆ ಬರೆದ ಪತ್ರದಲ್ಲಿ ಮೋಹನ್ ಅವರು, ಸಂಚಾರ ದಟ್ಟಣೆಯಿಂದ ನಲುಗುತ್ತಿರುವ ಬೆಂಗಳೂರು ನಗರಕ್ಕೆ ಉಪನಗರ ರೈಲು ಯೋಜನೆಯಂತಹ ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಅತ್ಯಗತ್ಯವಾಗಿದ್ದು, ಆಡಳಿತಾತ್ಮಕ ಕಾರಣಗಳಿಂದ ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದಿಂದಾಗಿ ಬೆಂಗಳೂರಿನ ನಾಗರಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ ಎಂದಿದ್ದಾರೆ. ಸಿಲಿಕಾನ್ ಸಿಟಿ ಎಂದು ಜಾಗತಿಕವಾಗಿ ಖ್ಯಾತಿ ಪಡೆದಿರುವ ಬೆಂಗಳೂರಿಗೆ ಉಪನಗರ ರೈಲು ಯೋಜನೆಯಂತಹ ಸಾರಿಗೆ ವ್ಯವಸ್ಥೆ ಅನಿವಾರ್ಯವಾಗಿದೆ. ಬ್ರ್ಯಾಂಡ್ ಬೆಂಗಳೂರಿನ ಖ್ಯಾತಿಗೆ ತಕ್ಕಂತೆ ಸಂಚಾರ ವ್ಯವಸ್ಥೆ ರೂಪಿಸುವ ನಿಟ್ಟಿನಲ್ಲಿ ಉಪನಗರ ರೈಲು ಯೋಜನೆ ಮಹತ್ವದ್ದಾಗಿದೆ ಎಂದು ರೈಲ್ವೆ ಸಚಿವರಿಗೆ ಬರೆದ ಪತ್ರದಲ್ಲಿ ಮೋಹನ್ ಹೇಳಿದ್ದಾರೆ.
ಉಪನಗರ ರೈಲು ಯೋಜನೆ ಅನಂತ್ ಹೋರಾಟ
ಉಪನಗರ ರೈಲು ಯೋಜನೆಗಾಗಿ ದಿ. ಅನಂತಕುಮಾರ್, ಹಾಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರು ಮತ್ತು ತಾವು ನಡೆಸಿದ ಹಲವಾರು ವರ್ಷಗಳ ನಿರಂತರ ಪ್ರಯತ್ನಗಳನ್ನು ಉಲ್ಲೇಖಿಸಿರುವ ಪಿ.ಸಿ.ಮೋಹನ್, ಇದೆಲ್ಲದರ ಫಲವಾಗಿ ಕೇಂದ್ರ ಹಾಗು ರಾಜ್ಯಸರ್ಕಾರಗಳು ಯೋಜನೆ ಜಾರಿಗಾಗಿ ಒಂದು ನೆಲೆಯಲ್ಲಿ ನಿಂತು, ನಂತರ ಕೇಂದ್ರ ಕೇಂದ್ರದ ನರೇಂದ್ರಮೋದಿ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಪೂರಕವಾಗಿ ಸ್ಪಂದಿಸಿ, ಬಜೆಟ್ಟಿನಲ್ಲಿ ಯೋಜನೆಗೆ ಹಣ ಮೀಸಲಿಡುವಂತಾಯಿತು ಎಂದು ತಿಳಿಸಿದ್ದಾರೆ. ಪರಿಷ್ಕೃತ ಯೋಜನಾ ವರದಿಗೆ ಅನುಮೋದನೆ ನೀಡುವುದೂ ಸೇರಿದಂತೆ ರಾಜ್ಯಸರ್ಕಾರದ ವಿಶೇಷ ಉದ್ದೇಶಿತ ವಾಹಕದ (SPV) ಮೂಲಕ ಆದಷ್ಟು ಶೀಘ್ರದಲ್ಲಿ ಯೋಜನೆ ಅನುಷ್ಠಾನ ಪ್ರಾರಂಭವಾಗಬೇಕು ಎಂದು ಪಿ.ಸಿ.ಮೋಹನ್ ಮನವಿ ಮಾಡಿಕೊಂಡಿದ್ದಾರೆ.
160 ಕಿಮೀ ಉದ್ದದ ಈ ಯೋಜನೆ
160 ಕಿಮೀ ಉದ್ದದ ಈ ಯೋಜನೆಯಲ್ಲಿ 83 ನಿಲ್ದಾಣಗಳಿರಲಿದ್ದು 12 ಕಡೆ ಮೆಟ್ರೊ ಮಾರ್ಗಕ್ಕೆ ಅಡ್ಡವಾಗಿ ಹಾದುಹೋಗಲಿದೆ. ಉಪನಗರ ರೈಲು ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವಿದ್ದು, ಬೆಂಗಳೂರು ಹಾಗು ಸುತ್ತಮುತ್ತಲಿನ ಪ್ರದೇಶಗಳ ಸಾರಿಗೆ ವ್ಯವಸ್ಥೆಯನ್ನೇ ಪರಿವರ್ತಿಸಲಿದೆ. ಸಬ್ ಅರ್ಬನ್ ರೈಲು ಯೋಜನೆಗೆ ಬೇರೆ ರೈಲು ಹಳಿಗಳ ನಿರ್ಮಾಣದ ಅಗತ್ಯವಿಲ್ಲ. ಇರುವ ನಿಲ್ದಾಣಗಳಿಗೆ ಮೂಲಸೌಕರ್ಯಗಳನ್ನು ಒದಗಿಸಿದರೆ ಹೆಚ್ಚು ಅನುಕೂಲವಾಗುತ್ತದೆ. ಲೋಕಲ್ ಟ್ರೈನ್ ಸಂಚಾರ ಆರಂಭವಾದರೆ ಶೇ.40ರಷ್ಟು ಸಂಚಾರ ಸುಗಮವಾಗುತ್ತದೆ.