ಥಣಿಸಂದ್ರ ವಾರ್ಡ್ ಬಿಬಿಎಂಪಿ ಸದಸ್ಯೆ ಮೇಲೆ ಪತಿಯಿಂದ ಹಲ್ಲೆ
ಬೆಂಗಳೂರು, ಜುಲೈ 11 : ಥಣಿಸಂದ್ರ ವಾರ್ಡ್ ಬಿಬಿಎಂಪಿ ಸದಸ್ಯೆ ಕೆ.ಎಂ.ಮಮತಾ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ. ಕೊತ್ತನೂರು ಠಾಣೆಯಲ್ಲಿ ಪತಿ ವಿರುದ್ಧ ಮಮತಾ ಅವರು ದೂರು ನೀಡಿದ್ದು, ಪತಿ ನಾಪತ್ತೆಯಾಗಿದ್ದಾರೆ.
ಥಣಿಸಂದ್ರ ವಾರ್ಡ್ನ ಕಾಂಗ್ರೆಸ್ ಬಿಬಿಎಂಪಿ ಸದಸ್ಯೆ ಮಮತಾ ಮೇಲೆ ಪತಿ ವೆಂಕಟೇಶ್ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಪತಿ ತಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಮಮತಾ ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರ ಮೇಲೆ ಮಚ್ಚು ಎತ್ತಿದ ರೌಡಿಗೆ ಗುಂಡು
ಮಮತಾ ಮತ್ತು ವೆಂಕಟೇಶ್ 15 ವರ್ಷಗಳ ಹಿಂದೆ ವಿವಾಹವಾಗಿದ್ದಾರೆ. ಮೊದಲು ದಂಪತಿಗಳು ಅನ್ಯೋನ್ಯವಾಗಿದ್ದರು. ಆದರೆ, ಕಳೆದ ಮೂರು ವರ್ಷಗಳಿಂದ ಚಿಕ್ಕಪುಟ್ಟ ವಿಷಯಕ್ಕೂ ವೆಂಕಟೇಶ್ ಪತ್ನಿ ಜೊತೆ ಜಗಳವಾಡುತ್ತಿದ್ದು, ಆಕೆಗೆ ಕಿರುಕುಳ ನೀಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಜುಲೈ 8ರಂದು ಆಡವಾಡುತ್ತಿದ್ದ ಮಗನ ಮೇಲೆ ವೆಂಕಟೇಶ್ ಹಲ್ಲೆ ನಡೆಸುತ್ತಿದ್ದರು. ಇದನ್ನು ತಡೆಯಲು ಮಮತಾ ಅವರು ಬಂದಾಗ ಅವರ ಜೊತೆ ಪತಿ ಜಗಳವಾಡಿದ್ದಾರೆ. ಬಳಿಕ ರಾಡ್ನಿಂದ ಹಲ್ಲೆ ನಡೆಸಿದ್ದಾರೆ. ಮಮತಾರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಬಳಿಕ ಅವರು ಮನೆಗೆ ಮರಳಿದ್ದಾರೆ.
ಹಿಂದೆಯೂ ಒಮ್ಮೆ ಪತಿ-ಪತ್ನಿ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪೊಲೀಸರು, ಹಿರಿಯ ಸಂಧಾನದ ಬಳಿಕ ದೂರು ವಾಪಸ್ ಪಡೆದಿದ್ದರು. ಆದರೆ, ಪುನಃ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ವೆಂಕಟೇಶ್ ವಿರುದ್ಧ ಮಮತಾ ದೂರು ನೀಡಿದ್ದಾರೆ.
ಮಮತಾ ಅವರು ನೀಡಿದ ದೂರಿನ ಅನ್ವಯ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ತನ್ನ ವಿರುದ್ಧ ಎಫ್ಐಆರ್ ದಾಖಲಾಗುತ್ತಿದ್ದಂತೆ ವೆಂಕಟೇಶ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.