ಚಿತ್ತೂರು ಉಗ್ರರು ಬೆಂಗಳೂರಿಗೆ; ಜತೆಗೆ ಭಟ್ಕಳನೂ
ಬೆಂಗಳೂರು, ಅ.8: ಮೊನ್ನೆ ಆಂಧ್ರದ ಪುತ್ತೂರು ಪಟ್ಟಣದಲ್ಲಿ ಬಂಧನಕ್ಕೀಡಾದ ಇಬ್ಬರು ಉಗ್ರರು ಮತ್ತು ತಮಿಳುನಾಡಿನಲ್ಲಿ ಸೆರೆ ಸಿಕ್ಕ ಮತ್ತೊಬ್ಬ ಉಗ್ರ ಜತೆಗೆ ನಮ್ಮದೇ ಊರಿನ ಅತ್ಯುಗ್ರ ಸಹ ಬೆಂಗಳೂರಿಗೆ ಬಂದಿಳಿಯಲಿದ್ದಾರೆ.
ಇದರೊಂದಿಗೆ ಭಯೋತ್ಪಾದನೆ ವಿರುದ್ಧದ ಸಮರ ಒಂದು ಮಜಲು ತಲುಪಿದೆ ಎನ್ನಬಹುದು. ಹೀನ ಸುಳಿಗಳಾದ ಅಫ್ಜಲ್, ಅದಕ್ಕೂ ಮುನ್ನ ಕಸಬ್ ನನ್ನು ಗಲ್ಲಿಗೇರಿಸಿದ್ದು. ಅದಾದ ನಂತರ ತುಂಡಾ ಬಂಧನ, ಅವನು ಕೊಟ್ಟ ಅಮೂಲ್ಯ ಸುಳಿವಿನ ಮೇರೆಗೆ ಪರಮ ಪಾತಕಿ, ನಮ್ಮವನೇ ಆದ ರಿಯಾಜ್ ಭಟ್ಕಳನನ್ನು ಹೆಡೆಮುರಿಗೆ ಕಟ್ಟಿದ್ದು, ತಾಜಾ ಆಗಿ ಚಿತ್ತೂರು ಬಳಿ ಮತ್ತಿಬ್ಬರನ್ನು ಎತ್ತಿಹಾಕಿಕೊಂಡು ಬಂದಿದ್ದು ...

ಇದೆಲ್ಲಾ ನೋಡಿದರೆ ನಿಜಕ್ಕೂ ನಮ್ಮ ಪೊಲೀಸರು, NIA ಅಧಿಕಾರಿಗಳು ಯಾರಿಗೇನೂ ಕಡಿಮೆ ಇಲ್ಲ ಎನ್ನಬಹುದು. ಆದರೆ ಅವರಿಗೆ ಅತ್ಯಗತ್ಯವಾಗಿ Free Hand ಕೊಡಬೇಕಷ್ಟೇ. ಆದರೆ ಮುಂದಿದೆ ನಮ್ಮೀ ಪೊಲೀಸರ ನಿಜವಾದ ಕೆಲಸ. ಈ ಪಾತಕಿಗಳಿಂದ ಸಂಪೂರ್ಣ ಮಾಹಿತಿ ಹೆಕ್ಕಿ, ಅವರ ಅಷ್ಟೂ ಆಟಾಟೋಪಗಳಿಗೆ ತಿಲಾಂಜಲಿಯಿಡಬೇಕಿದೆ.
ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ಸೂತ್ರಧಾರನೆನ್ನಲಾದ ಶಂಕಿತ ಉಗ್ರ ಬಿಲಾಲ್ ಮಲಿಕ್, ಪನ್ನಾ ಇಸ್ಮಾಯಿಲ್ ಮತ್ತು ಪೊಲೀಸ್ ಫಕ್ರುದ್ದೀನ್ ಎಂಬ ಪಾತಕಿಗಳನ್ನು ಇಂದೋ/ ನಾಳೆಯೋ ರಾಜ್ಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರುಖಾಮಾ ಪಚಾವೋ ತಿಳಿಸಿದ್ದಾರೆ.
ಈ ಮಧ್ಯೆ, ತಮಿಳುನಾಡಿನಲ್ಲಿ ನಡೆದ ಹಿಂದೂ ಮುಖಂಡರ ಹತ್ಯೆ ಪ್ರಕರಣದಲ್ಲಿಯೂ ಇದೇ ಉಗ್ರರು ಭಾಗಿಯಾಗಿದ್ದಾರೆ ಎಂಬ ಶಂಕೆಯ ಮೇಲೆ ತಮಿಳುನಾಡು ಪೊಲೀಸರಿಗೂ ತ್ರಿಮೂರ್ತಿಗಳು ಬೇಕಾಗಿದ್ದು, ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇಂಡಿಯನ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯ ಸಹ ಸಂಸ್ಥಾಪಕ ಯಾಸಿನ್ ಭಟ್ಕಳನನ್ನು ವಿಚಾರಣೆಗಾಗಿ ಇಂದು ಬೆಂಗಳೂರಿಗೆ ಕರೆತರಲಾಗುತ್ತಿದೆ ಎಂದು ತಿಳಿದು ಬಂದಿದೆ. 2010ರ ಏ.17ರಂದು ರಾಜಧಾನಿಯ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸಂಭವಿಸಿದ ಸ್ಫೋಟದ ಪ್ರಮುಖ ರೂವಾರಿ ಈ ಯಾಸಿನ್.
ಇಂತಿಪ್ಪ ಯಾಸಿನನನ್ನು ಅವನು ಹೀನ ಕೃತ್ಯವೆಸಗಿದ ದೇಶದ ನಾನಾ ಭಾಗಗಳಿಗೆ ಕರೆದೊಯ್ದು ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ತನಿಖೆಗೆಂದು ಕೇರಳಕ್ಕೆ ಕರೆದುಕೊಂಡು ಹೋಗಿದ್ದ ಎನ್ ಎಐ ಅಧಿಕಾರಿಗಳು ಮುಂದುವರಿದ ಭಾಗವಾಗಿ ಇದೀಗ ಬೆಂಗಳೂರಿಗೆ ಕರೆತರುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿಗೆ ಅವನನ್ನು ಕರೆತಂದ ಮೇಲೆ ಪಕ್ಕದ ತುಮಕೂರಿಗೂ ಕರೆದೊಯ್ಯಬೇಕಾಗುತ್ತದೆ. ಏಕೆಂದರೆ ತುಮಕೂರಿನ ಹೊರವಲಯದಲ್ಲಿ ಬಾಡಿಗೆ ಮನೆ ಮಾಡಿ ಅಲ್ಲಿಂದಲೇ ಬೆಂಗಳೂರಿನಲ್ಲಿರುವ ಚಿನ್ನಸ್ವಾಮಿ ಸ್ಟೇಡಿಯಂಗೆ ಗುನ್ನ ಇಟ್ಟಿದ್ದ.












Click it and Unblock the Notifications