ಅನಂತ್ ಕುಮಾರ್ ಕಚೇರಿ ಬೇಡ ಎಂದ ಸಂಸದ ತೇಜಸ್ವಿ ಸೂರ್ಯ
Recommended Video
ಬೆಂಗಳೂರು, ಜೂನ್ 17: ತಮ್ಮ ರಾಜಕೀಯ ಮತ್ತು ಸಾಮಾಜಿಕ ಗುರು ಅನಂತ್ಕುಮಾರ್ ಅವರು ಬಳಸುತ್ತಿದ್ದ ಕಚೇರಿ ತಮಗೆ ಬೇಡವೆಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅಚ್ಚರಿ ರೀತಿಯಾಗಿ ಟಿಕೆಟ್ ಪಡೆದುಕೊಂಡು ಆರಿಸಿ ಬಂದಿರುವ ತೇಜಸ್ವಿ ಸೂರ್ಯ ಅವರಿಗೆ, ಇದೆ ಕ್ಷೇತ್ರದ ಮಾಜಿ ಸಂಸದ ಅನಂತ್ಕುಮಾರ್ ಅವರ ಕಚೇರಿಯನ್ನು ನೀಡಲಾಗಿತ್ತು, ಆದರೆ ಆ ಕಚೇರಿ ತಮಗೆ ಬೇಡ ಎಂದು ತೇಜಸ್ವಿ ಸೂರ್ಯ ಅವರು ಬಿಬಿಎಂಪಿಗೆ ಪತ್ರ ಬರೆದಿದ್ದಾರೆ.
ಜಯನಗರ ಸೌಥ್ ಎಂಡ್ ವೃತ್ತದಲ್ಲಿ ಅನಂತ್ಕುಮಾರ್ ಅವರ ಕಚೇರಿ ಇದೆ. ಅವರು ಕಾಲವಾಗುವವರೆಗೂ ಬಹು ವರ್ಷ ಇದೇ ಕಚೇರಿಯಲ್ಲಿದ್ದುಕೊಂಡೇ ಅನಂತ್ಕುಮಾರ್ ಅವರು ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಈಗ ಸಹಜವಾಗಿಯೇ ಕ್ಷೇತ್ರದ ಹೊಸ ಸಂಸದರಿಗೆ ಈ ಕಚೇರಿಯನ್ನು ನೀಡಲಾಗಿದೆ. ಆದರೆ ತೇಜಸ್ವಿ ಸೂರ್ಯ ಅವರಿಗೆ ಈ ಕಚೇರಿ ಬೇಡವಾಗಿದೆ.

ಬಿಬಿಎಂಪಿ ಆಯುಕ್ತರಿಗೆ ಪತ್ರ
ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿರುವ ತೇಜಸ್ವಿ ಸೂರ್ಯ, ತಮಗೆ ಶಾಲಿನಿ ಗ್ರೌಂಡ್ಸ್ ಎದುರು ಇರುವ ಕಟ್ಟಡದಲ್ಲಿ ಕಚೇರಿ ನೀಡಿ ಎಂದು ಮನವಿ ಮಾಡಿದ್ದಾರೆ. ಶಾಲಿನಿ ಗ್ರೌಂಡ್ಸ್ ಎದುರಿನ ಕಟ್ಟಡ ಕ್ಷೇತ್ರದ ಮಧ್ಯ ಭಾಗದಲ್ಲಿರುವುದರಿಂದ ಅಲ್ಲಿ ಕಚೇರಿ ಕೊಡಿ ಎಂದು ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.

ಕೇಳಿದ ಕಚೇರಿ ಕೊಡಲು ಆಗದು: ಬಿಬಿಎಂಪಿ
ಆದರೆ ಸಂಸದ ತೇಜಸ್ವಿ ಸೂರ್ಯ ಅವರಿಗೆ ಪ್ರತ್ಯುತ್ತರ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್, ಸಂಸದರಿಗೆ ಕಚೇರಿ ನೀಡುವುದು ಬಿಬಿಎಂಪಿಯ ಕಾರ್ಯ ಅಲ್ಲ ಅದು ರಾಜ್ಯ ಸರ್ಕಾರದ ಕಾರ್ಯ, ತೇಜಸ್ವಿ ಸೂರ್ಯ ಅವರು ಕೇಳಿರುವ ಕಟ್ಟಡದಲ್ಲಿ ಬಿಬಿಎಂಪಿ ಕಚೇರಿ ತೆರೆಯಲಿದೆ, ಅದೂ ಅಲ್ಲದೆ ಆ ಕಟ್ಟಡದ ಕುರಿತು ಪ್ರಕರಣ ಸಹ ನಡೆಯುತ್ತಿದೆ ಎಂದಿದ್ದಾರೆ.

ತೇಜಸ್ವಿನಿ ಬದಲಿಗೆ ಟಿಕೆಟ್ ಗಿಟ್ಟಿಸಿಕೊಂಡ ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ ಅವರಿಗೆ ಅಚ್ಚರಿಯ ರೀತಿಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ದೊರೆತಿತು. ಅನಂತ್ಕುಮಾರ್ ಅವರು ಕಾಲವಾದ ನಂತರ ಬೆಂಗಳೂರು ದಕ್ಷಿಣ ಕ್ಷೇತ್ರ ಟಿಕೆಟ್ ಅನ್ನು ಅನಂತ್ಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ಕೊಡಲಾಗುತ್ತದೆ ಎನ್ನಲಾಗಿತ್ತು, ಆದರೆ ಅಚ್ಚರಿಯ ರೀತಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಲಾಯಿತು.

ಲೋಕಸಭೆಯ ಅತ್ಯಂತ ಕಿರಿಯ ಸಂಸದ
ಇಂದಷ್ಟೆ ಪ್ರಮಾಣ ವಚನ ಸ್ವೀಕರಿಸಿರುವ ತೇಜಸ್ವಿ ಸೂರ್ಯ ಅವರು ಕರ್ನಾಟಕದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ. ಅವರು ಇಂದು ಪಂಚೆ, ಶಲ್ಯ ತೊಟ್ಟು ಸಂಸತ್ತಿಗೆ ಹೋಗಿ ಕನ್ನಡದಲ್ಲಿಯೇ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.












Click it and Unblock the Notifications