ಸತ್ತಿದ್ದ ಟೆಕ್ಕಿ ನಾಗನಂದನ್ ಬೆಂಗಳೂರಿನಲ್ಲಿ ಪ್ರತ್ಯಕ್ಷ!

ನಾಗನಂದನ್ ಡಿ.3ರಂದು ಕೋರಮಂಗಲ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗತನಾಗಿದ್ದಾನೆ. ಸಾಗರ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಆತನನ್ನು ಬುಧವಾರ ತಮ್ಮ ವಶಕ್ಕೆ ಪಡೆದಿದ್ದಾರೆ. ಇದರಿಂದ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ದೊರಕಿದ್ದು, ನಾಗ ನಂದನ್ ಸತ್ತಿಲ್ಲ ಎಂಬುದು ಖಾತ್ರಿಯಾಗಿದೆ. ವಿಚಾರಣೆ ಬಳಿಕ ಪ್ರಕರಣದ ವಿವಿರಗಳು ಲಭ್ಯವಾಗಲಿವೆ. (ನಾಗ ನಂದನ್ ಶವ ಪತ್ತೆ)
ಘಟನೆ ಹಿನ್ನಲೆ : ಅಕ್ಟೋಬರ್ 29ರಂದು ತಂದೆ-ತಾಯಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಾಗ ನಂದನ್ ಸಾಗರಕ್ಕೆ ಆಗಮಿಸಿದ್ದರು. ವರದಶ್ರೀ ಲಾಡ್ಜ್ ನಲ್ಲಿ ತಂದೆ ಕಸ್ತೂರಿ ರಂಗನ್ (72) ಅವರನ್ನು ಕೊಂದು, ತಾಯಿ ರಮಾ ಅವರ ಕತ್ತು ಕೊಯ್ದು ನಾಗ ನಂದನ್ ಸ್ಥಳದಿಂದ ನಾಪತ್ತೆಯಾಗಿದ್ದರು. (ಜೋಗದಲ್ಲಿ ಟೆಕ್ಕಿ ಕುಟುಂಬದ ಆತ್ಮಹತ್ಯೆ ಯತ್ನ)
ಕಸ್ತೂರಿ ರಂಗನ್ ಸ್ಥಳದಲ್ಲಿ ಸಾವನ್ನಪ್ಪಿದ್ದರೆ, ಲಾಡ್ಜ್ ಸಿಬ್ಬಂದಿ ರಮಾ ಅವರನ್ನು ಆಸ್ಪತ್ರೆಗೆ ಸೇರಿಸಿ ಅವರ ಜೀವ ಉಳಿಸಿದ್ದರು. ಆದರೆ, ನಾಗನಂದನ್ ನಾಪತ್ತೆಯಾಗಿದ್ದರು. ನ.4ರಂದು ಜೋಗ ಜಲಪಾತದಲ್ಲಿ ಒಂದು ಶವ ಸಿಕ್ಕಿತ್ತು. ನಾಗನಂದನ್ ತಾಯಿ ರಮಾ ಮತ್ತು ಅವರ ಪತ್ನಿ ದಿವ್ಯಾ ಇದು ನಾಗನಂದನ್ ಶವವೆಂದು ಗುರುತಿಸಿದ್ದರು. ಪೊಲೀಸರು ಶವವನ್ನು ಅವರಿಗೆ ಒಪ್ಪಿಸಿದ್ದರು.
ನಾಗನಂದನ್ ಶವವಾಗಿ ಪತ್ತೆಯಾದ ನಂತರ ಸಾಗರ ಪೊಲೀಸರು ಪ್ರಕರಣ ಅಂತ್ಯವಾಯಿತು ಎಂದು ನಿರಾಳರಾಗಿದ್ದರು. ಆದರೆ, ನಾಗನಂದನ್ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದು ಪೊಲೀಸರಿಗೆ ಅಚ್ಚರಿ ಉಂಟುಮಾಡಿದೆ. ಕೋರಮಂಗಲ ಪೊಲೀಸರಿಂದ ನಾಗನಂದನ್ ಅವರನ್ನು ಪಡೆದಿರುವ ಸಾಗರ ಪೊಲೀಸರು ಮತ್ತೊಮ್ಮೆ ವಿಚಾರಣೆ ಆರಂಭಿಸಿದ್ದಾರೆ.
ಸಾಲದ ಹೊರೆಯಿಂದ ಸಾವು : ಬೆಂಗಳೂರಿನ ಕೋರಮಂಗಲದ ನಿವಾಸಿಗಳಾದ ನಾಗ ನಂದನ್ ತಮ್ಮ ತಂದೆ ಕಸ್ತೂರಿ ರಂಗನ್ (72), ತಾಯಿ ರಮಾ ಜೊತೆ ಆತ್ಮಹತ್ಯೆ ಮಾಡಿಕೊಳ್ಳಲು ಸಾಗರಕ್ಕೆ ಆಗಮಿಸಿದ್ದರು, ಸಾಲದ ಹೊರೆಯಿಂದ ಕಂಗೆಟ್ಟ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿತ್ತು. ಸದ್ಯ ಕಸ್ತೂರಿ ರಂಗನ್ ಮೃತಪಟ್ಟಿದ್ದು, ರಮಾ ಹಾಗೂ ನಾಗನಂದನ್ ಬದುಕುಳಿದಿದ್ದಾರೆ.












Click it and Unblock the Notifications