ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ?
ಬೆಂಗಳೂರು, ಆಗಸ್ಟ್ 09 : ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದೆ.
ಕರ್ನಾಟಕ ಹೈಕೋರ್ಟ್ ಗುರುವಾರ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿತು. ಕುಮಾರ್ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಅವರು ಪುತ್ರನ ನಾಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು.
ಬಿಹಾರ ಮೂಲದ ಟೆಕ್ಕಿ ಅಜಿತಾಬ್ ಕುಮಾರ್ ಡಿ.18, 2017ರಿಂದ ನಾಪತ್ತೆಯಾಗಿದ್ದಾರೆ. ಸಿಐಡಿ ಪೊಲೀಸರು ಸದ್ಯ, ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದಾರೆ. 30 ವರ್ಷದ ಅಜಿತಾಬ್ ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ಏನಿದು ಪ್ರಕರಣ? : ಅಜಿತಾಬ್ ಕುಮಾರ್ ತಮ್ಮ ಕಾರನ್ನು ಓಲೆಕ್ಸ್ನಲ್ಲಿ ಮಾರಾಟಕ್ಕೆ ಇಟ್ಟಿದ್ದರು. ಕರೆ ಬಂದಾಗ ಕಾರನ್ನು ತೋರಿಸಲು ಹೋಗುತ್ತಿದ್ದರು. ಡಿಸೆಂಬರ್ 18ರಂದು ಕಾರು ತೋರಿಸಲು ಹೋದ ಅವರ ಮರಳಿ ಬಂದಿಲ್ಲ.
ಅಜಿತಾಬ್ ಅವರನ್ನು ಯಾರೋ ಅಪಹರಣ ಮಾಡಿರಬಹುದು ಎಂದು ಅವರ ಕುಟುಂಬದವರು ವೈಟ್ಫೀಲ್ಟ್ ಠಾಣೆಗೆ ದೂರು ನೀಡಿದ್ದರು. ಬಳಿಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಿದೆ.
8 ತಿಂಗಳು ಕಳೆದರೂ ಅಜಿತಾಬ್ ಪತ್ತೆಯಾಗಿಲ್ಲ. ಅವರ ಸಹೋದರಿ ಇತರ ಟೆಕ್ಕಿಗಳ ಜೊತೆ ಕೆಲವು ದಿನಗಳ ಹಿಂದೆ ಟೌನ್ಹಾಲ್ ಮುಂದೆ ಪ್ರತಿಭಟನೆ ನಡೆಸಿದ್ದರು. ಅಜಿತಾಬ್ ತಂದೆ ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.












Click it and Unblock the Notifications