ಜೆಡಿಎಸ್ ಸಚಿವರು ಮೈತ್ರಿ ಧರ್ಮ ಪಾಲಿಸುತ್ತಿಲ್ಲ: ತನ್ವೀರ್ ಸೇಠ್ ಆಕ್ರೋಶ
ಬೆಂಗಳೂರು, ಅಕ್ಟೋಬರ್ 16: ಮೈಸೂರು ದಸರಾ ಆಚರಣೆ ವೇಳೆ ಕಾಂಗ್ರೆಸ್ ಸಚಿವರು ಹಾಗೂ ಶಾಸಕರನ್ನು ಸಂಪೂರ್ಣ ಕಡೆಗಣಿಸಿರುವ ಜೆಡಿಎಸ್ ಸಚಿವರು ಮೈತ್ರಿ ಸರ್ಕಾರದ ರಾಜ್ಯ ಧರ್ಮ ಮಾಲಿಸುತ್ತಿಲ್ಲ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ಆಚರಣೆ ಎಂಬುದು ನಾಡ ಹಬ್ಬ, ಇದರಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಎಂಬ ಬೇಧಭಾವ ಇರಬಾರದು, ಆದರೆ ಜೆಡಿಎಸ್ ನ ಸಚಿವರು ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ನ ಸಚಿವರನ್ನು ಕೂಡ ಕಡೆಗಣಿಸುತ್ತಿದ್ದಾರೆ.
ಇಂತಹ ಚಿಲ್ಲರೆ ರಾಜಕಾರಣದಿಂದ ರಾಜ್ಯಧರ್ಮ ಪರಿಪಾಲನೆಯಾಗುವುದಿಲ್ಲ ಹಾಗೂ ಮೈತ್ರಿ ಧರ್ಮ ಪರಿಪಾಲನೆಗೆ ಧಕ್ಕೆ ಉಂಟಾಗುತ್ತದೆ. ಇದರ ಪರಿಣಾಮ ಏನಾಗುತ್ತದೆ ಎಂದು ಯಾರೂ ಊಹಿಸಿಲ್ಲ ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ನಮ್ಮನ್ನು ಯಾರೂ ದಸರಾ ಆಚರಣೆಗೆ ಆಹ್ವಾನ ಮಾಡಿಲ್ಲ ಆದರೂ ನಾವು ದಸರಾ ಆಚರಣೆಗೆ ಅಡಚಣೆ ಮಾಡಿಲ್ಲ, ಸಮ್ಮಿಶ್ರ ಸರ್ಕಾರದ ಸಿದ್ಧಾಂತಗಳು ಇದರಲ್ಲಿ ಎಲ್ಲೂ ಕಾಣುತ್ತಿಲ್ಲ ಎಂದರು. ಟಿಪ್ಪು ಜಯಂತಿ ಆಚರಣೆ ಕುರಿತು ಮಾತನಾಡಿದ ಅವರು ಟಿಪ್ಪು ಜಯಂತಿ ಆಚರಣೆ ವಿಷಯದಲ್ಲಿ ಬಿಜೆಪಿ ರಾಜಕಾರಣ ಮಾಡುವುದು ಸರಿಯಲ್ಲ, ಜಾತಿ ವ್ಯವಸ್ಥ ಮೇಲೆ ಇವತ್ತು ಯಾರೂ ನಿಂತಿಲ್ಲ, ಅದನ್ನು ಮೀರಿ ದೇಶದ ಅಭಿವೃದ್ಧಿಗೆ ನಾವೆಲ್ಲರೂ ಕೆಲಸ ಮಾಡಬೇಕಿದೆ ಎಂದು ಹೇಳಿದರು.












Click it and Unblock the Notifications