ಗೃಹ ಸಚಿವರ ಕಾರು ತಡೆದು ಹಲವು ಪ್ರಶ್ನೆ ಕೇಳಿದ ಪೊಲೀಸರು!
ಬೆಂಗಳೂರು, ಏಪ್ರಿಲ್ 10 : ಕೊರೊನಾ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಅನಗತ್ಯವಾಗಿ ಸಂಚಾರ ನಡೆಸುವ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ರಾಜ್ಯದ ಗೃಹ ಸಚಿವರನ್ನೇ ಪೊಲೀಸರು ತಡೆದಿದ್ದಾರೆ.
ಹೌದು, ಕರ್ನಾಟಕದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ನಮ್ಮ ರಾಜ್ಯದಲ್ಲಿಯೇ ತಡೆದ ಪೊಲೀಸರು ನೀವು ಯಾರು?, ಎಲ್ಲಿಗೆ ಹೊರಟಿದ್ದೀರಿ? ಎಂದು ಪ್ರಶ್ನೆ ಮಾಡಿದ್ದಾರೆ. ಹಿರಿಯ ಅಧಿಕಾರಿಗಳ ಆಗಮನದ ಬಳಿಕ ವಾಸ್ತವದ ಅರಿವಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸರು ಕಾರ್ಯ ವೈಖರಿ ತಿಳಿಯಲು ಬಸವರಾಜ ಬೊಮ್ಮಾಯಿ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದರು. ಆಗ ಕರ್ನಾಟಕದೊಳಗೆ ಬಂದಿದ್ದ ತಮಿಳುನಾಡು ಪೊಲೀಸರು ಗೃಹ ಸಚಿವರನ್ನು ಅಡ್ಡಗಟ್ಟಿ, ನೀವು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.
ಕರ್ನಾಟಕ-ತಮಿಳುನಾಡು ಗಡಿಭಾಗ ಸೇರುವ ಅತ್ತಿಬೆಲೆ ಚೆಕ್ಪೋಸ್ಟ್ನಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಆಗಮಿಸುವ ಪ್ರತಿ ವಾಹನವನ್ನೂ ತಪಾಸಣೆ ಮಾಡಲಾಗುತ್ತಿದೆ. ಗೃಹ ಸಚಿವರ ಕಾರು ಇಲ್ಲಿ ಬಂದಾಗ ಪೊಲೀಸರು ತಡೆದಿದ್ದಾರೆ.

ಗೊಂದಲ ಆಗಿದ್ದು ಏಕೆ?
ನಗರ ಪ್ರದಕ್ಷಿಣೆ ಕೈಗೊಂಡಿದ್ದ ಗೃಹ ಸಚಿವರು ಸಾಮಾನ್ಯ ಟೀ ಶರ್ಟ್ ಧರಿಸಿದ್ದರು. ಖಾಸಗಿ ಕಾರಿನಲ್ಲಿ ಆಗಮಿಸಿದ್ದರು. ಆದ್ದರಿಂದ, ಪೊಲೀಸರಿಗೆ ಅವರನ್ನು ಗುರುತಿಸಲು ಸಾಧ್ಯವಾಗಿಲ್ಲ. ಅಲ್ಲದೇ ತಮಿಳುನಾಡು ಪೊಲೀಸರು ಕರ್ನಾಟಕದ ಚೆಕ್ ಪೋಸ್ಟ್ ಒಳಗೆ ಬಂದಿದ್ದರು. ಆದ್ದರಿಂದ, ಅವರಿಗೆ ಗೃಹ ಸಚಿವರ ಪರಿಚಯವೇ ಇರಲಿಲ್ಲ.

ಹಿರಿಯ ಅಧಿಕಾರಿಗಳಿದ್ದರು
ಗೃಹ ಸಚಿವರ ಜೊತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್, ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಇದ್ದರು. ಗೃಹ ಸಚಿವರನ್ನು ಪೊಲೀಸರು ತಡೆಯುತ್ತಿದ್ದಂತೆ ಅವರು ಆಗಮಿಸಿ ಗೊಂದಲ ಬಗೆಹರಿಸಿದರು.

ಡಿವೈಎಸ್ಪಿಗೆ ಸೂಚನೆ
ಗೃಹ ಸಚಿವರು ಪೊಲೀಸರು ಯಾರು? ಎಂದು ವಿವರ ಪಡೆದಾಗ ಅವರು ತಮಿಳುನಾಡಿನವರು ಎಂಬುದು ತಿಳಿದಿದೆ. ರಾಜ್ಯಕ್ಕೆ ಸೇರಿದ ಅತ್ತಿಬೆಲೆ ಗಡಿಯ ಒಳಗೆ ಪ್ರವೇಶ ಮಾಡಿ ಅವರು ಬ್ಯಾರಿಕೇಡ್ ಹಾಕಿದ್ದರು. ಹೊಸೂರು ಡಿವೈಎಸ್ಪಿ ಅವರನ್ನು ಕರೆದ ಗೃಹ ಸಚಿವರು ತಮ್ಮ ಸಿಬ್ಬಂದಿಯನ್ನು ಗಡಿಯಿಂದ ತೆರವುಗೊಳಿಸಿ ಎಂದು ಸೂಚನೆ ಕೊಟ್ಟರು.

ಬ್ಯಾರಿಕೇಡ್ ಹಾಕಿದ್ದರು
ಘಟನೆ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಸ್ಪಷ್ಟನೆ ನೀಡಿದ್ದಾರೆ. "ಚೆಕ್ಪೋಸ್ಟ್ನಲ್ಲಿ ನಮ್ಮ ಸಿಬ್ಬಂದಿಯೇ ಇದ್ದರು. ಅಷ್ಟೊಂದು ವಾಹನಗಳ ಸಂಚಾರ ಇಲ್ಲದ ಕಾರಣ ತಮಿಳುನಾಡು ಪೊಲೀಸರು ನಮ್ಮ ಗಡಿಯಲ್ಲಿ ಬ್ಯಾರಿಕೇಡ್ ಹಾಕಿದ್ದರು. ಈಗ ಅವುಗಳನ್ನು ತೆರವುಗೊಳಿಸಲಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications