'ಸ್ವಚ್ಛ ಸರ್ವೇಕ್ಷಣೆ 2020' ಆರಂಭ; ಈ ಬಾರಿಯ ವಿಶೇಷತೆ ಏನು?
ಬೆಂಗಳೂರು, ಜನವರಿ 8: ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಜನ ಸಮೂಹಕ್ಕೆ ಅರಿವು ಮೂಡಿಸಿ, ಆ ಮೂಲಕ ನಗರವನ್ನು ಅಲ್ಲಿನ ನಾಗರಿಕರೇ ಸುಂದರವಾಗಿ ರೂಪಿಸಿಕೊಳ್ಳಲು ಪ್ರೇರೇಪಣೆಯಾಗಿ ಆರಂಭವಾಗಿರುವ 'ಸ್ವಚ್ಛ ಸರ್ವೇಕ್ಷಣೆ'ಯ 2020ರ ಆವೃತ್ತಿಗೆ ಚಾಲನೆ ಸಿಕ್ಕಿದೆ.
ಸ್ವಚ್ಚ ಸರ್ವೇಕ್ಷಣೆ 2020 (ನೈರ್ಮಲ್ಯ ಸಮೀಕ್ಷೆ) ಅಂಗವಾಗಿ ಬೆಂಗಳೂರೂ ಸಹ ಈ ಬಾರಿ ಸಮೀಕ್ಷೆಯಲ್ಲಿ ಭಾಗಿಯಾಗುತ್ತಿದ್ದು, ಅತಿ ಹೆಚ್ಚು ಬೆಂಗಳೂರಿಗರು ಈ ಸರ್ವೇಯಲ್ಲಿ ಭಾಗಿಯಾಗುವು ಮೂಲಕ, 2020 ರಲ್ಲಿ ಬೆಂಗಳೂರು ದೇಶದ ನಂಬರ್ 1 ಸ್ವಚ್ಛ ನಗರಿ ಆಗಬೇಕು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತನ್ನ ನಾಗರಿಕರಿಗೆ ಮನವಿ ಮಾಡಿದೆ.
'ಮೈ ಸಿಟಿ, ಮೈ ಹೀರೋಸ್' ಅವಾರ್ಡ್: ನೀವೇ ನಾಮನಿರ್ದೇಶನ ಮಾಡಿ...
ಜನವರಿ 31 ರೊಳಗೆ ನಗರಗಳು, ತಾವು ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗಿಯಾಗುತ್ತಿದ್ದೇವೆ ಎಂದು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಯ ವೆಬ್ಸೈಟಿನಲ್ಲಿ mohua.gov.in ಹೆಸರು ನೋಂದಾಯಿಸಬೇಕಿದೆ.
ಏನಿದು 'ಸ್ವಚ್ಛ ಸರ್ವೇಕ್ಷಣೆ'
'ಸ್ವಚ್ಛ ಭಾರತ್' ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾಗಿದೆ. ಇದಕ್ಕೆ ಪೂರಕವಾಗಿ 2016 ರಲ್ಲಿ ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಯೋಜನಾ ಸಚಿವಾಲಯ 'ಸ್ವಚ್ಛ ಸರ್ವೇಕ್ಷಣೆ' ಆರಂಭಿಸಿತು. ಸಚಿವಾಲಯ ನಿಗದಿಪಡಿಸಿದ ಮಾನದಂಡಗಳ ಪ್ರಕಾರ ಯಾವ ನಗರ ಅತಿ ಹೆಚ್ಚು ಸ್ವಚ್ಛತೆ ಹಾಗೂ ನೈರ್ಮಲ್ಯದ ಬಗ್ಗೆ ಕಾಳಜಿ ವಹಿಸಿದೆ ಎಂಬುದನ್ನು ಸರ್ವೆಯಲ್ಲಿ ಕಂಡುಕೊಂಡು ಅಂಕಗಳನ್ನು ನೀಡುತ್ತದೆ. ಅತಿ ಹೆಚ್ಚು ಅಂಕಗಳನ್ನು ಪಡೆದ ಟಾಪ್ 20 ನಗರಗಳಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುತ್ತದೆ.
ಸಿಎಂ ಯಡಿಯೂರಪ್ಪ ಮನವಿ
ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆಯಾದ ಸ್ವಚ್ಛ ಸರ್ವೇಕ್ಷಣೆಯನ್ನು ಕರ್ನಾಟಕದ ನಗರಗಳು ಯಶಸ್ವಿಗೊಳಿಸಬೇಕು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ನಗರವಾಸಿಗಳಲ್ಲಿ ಮನವಿ ಮಾಡಿದ್ದಾರೆ.ಟ್ವಿಟ್ಟರ್ನಲ್ಲಿ ಈ ಕುರಿತು ವಿಡಿಯೋ ಹಂಚಿಕೊಂಡಿರುವಅವರು, 'ನಗರವನ್ನು ಅಂದವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಸ್ವಚ್ಛ ಸರ್ವೇಕ್ಷಣೆಯಲ್ಲಿ ಭಾಗಿಯಾಗಿ ತಮ್ಮ ನಗರಗಳಿಗೆ ಅತಿ ಹೆಚ್ಚಿನ ಅಂಕಗಳನ್ನು ಪಡೆದು, ನಿಮ್ಮ ನಗರಕ್ಕೆ ಗೌರವ ಬರುವಂತೆ ಮಾಡಬೇಕು' ಎಂದು ಮನವಿ ಮಾಡಿದ್ದಾರೆ.
ಬೆಂಗಳೂರು ಚಿತ್ರಸಂತೆಯಲ್ಲಿ ಮಾರಾಟವಾದ ಕಲಾಕೃತಿಗಳು ಎಷ್ಟು ಗೊತ್ತಾ?
ಬಿಬಿಎಂಪಿ ಮೇಯರ್ ಮನವಿ
ಬಿಬಿಎಂಪಿ ಮೇಯರ್ ಎಂ ಗೌತಮ್ ಕುಮಾರ್ ಅವರು ಕೂಡ ಈ ಬಾರಿ ಬೆಂಗಳೂರಿಗೆ ಸ್ವಚ್ಛ ಸರ್ವೇಕ್ಷಣೆಯಲ್ಲಿ ಮೊದಲನೇ ಸ್ಥಾನ ಬರುವರಂತೆ ಬೆಂಗಳೂರಿಗರು ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಸ್ವಚ್ಛ ಸರ್ವೇಕ್ಷಣೆ ಯೋಜನೆಗಾಗಿ 'ಸಹಾಯ್' ಮೊಬೈಲ್ ಅಪ್ಲಿಕೇಶನ್ ಬಳಸಿಕೊಂಡೂ ಸಹ ನಾಗರಿಕರು ಸಲಹೆ ಸೂಚನೆಗಳನ್ನು ನೀಡಬಹುದು ಎಂದು ಹೇಳಿದ್ದಾರೆ.
2019 ರ ಸ್ವಚ್ಚ ಸರ್ವೇಕ್ಷಣೆ
2019 ರಲ್ಲೂ ಸ್ವಚ್ಛ ಸರ್ವೇಕ್ಷಣೆ ನಡೆದಿತ್ತು. ಆಗ ಇದರಲ್ಲಿ 600 ಕ್ಕೂ ಹೆಚ್ಚು ನಗರಗಳು ಪಾಲ್ಗೊಂಡಿದ್ದವು. ಅದರಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ 20 ನಗರಗಳನ್ನು ದೇಶದ ಸ್ವಚ್ಛ ನಗರಗಳು ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. ಮಧ್ಯಪ್ರದೇಶದ ಇಂದೋರ್ 2019 ರ ದೇಶದ ನಂಬರ್ 1 ಸ್ವಚ್ಛ ನಗರವಾಗಿತ್ತು. ಅಂಬಿಕಾಪುರ ಎರಡನೇ ಸ್ಥಾನ ಪಡೆದಿದ್ದರೇ, ಕರ್ನಾಟಕದ ಮೈಸೂರು ಮೂರನೇ ಸ್ಥಾನ ಪಡೆದಿತ್ತು. ಬೆಂಗಳೂರಿಗೆ 194 ನೇ ಸ್ಥಾನ ಪಡೆದು ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿದೆ ಎಂಬುದು ಬಹಿರಂಗವಾಗಿತ್ತು.