ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಡಾ. ಎಚ್ಎನ್ ಅವರ ನಾಮಕರಣ ಮಾಡಲು ಸುರೇಶ್ ಕುಮಾರ್ ಮನವಿ
ಬೆಂಗಳೂರು, ಮಾರ್ಚ್ 15: ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ನಮ್ಮ ಮೆಟ್ರೋ ನಿಲ್ದಾಣಕ್ಕೆ ಡಾ. ಎಚ್ಎನ್ ನಿಲ್ದಾಣ ಎಂದು ನಾಮಕರಣ ಮಾಡಬೇಕು ಎಂದು ಸಚಿವ ಎಸ್. ಸುರೇಶ್ ಕುಮಾರ್ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಆಯಾ ಪ್ರದೇಶಗಳಲ್ಲಿ ತಮ್ಮ ಸೇವೆ ಮೂಲಕ ಪ್ರಸಿದ್ಧರಾಗಿರುವ ಉದ್ಧಾಮರ ಹೆಸರುಗಳನ್ನು ಇಟ್ಟು ವಿಶಿಷ್ಟವಾಗಿ ಗೌರವಿಸಲಾಗಿದೆ. ಅದೇ ರೀತಿ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣಕ್ಕೆ ಹಿರಿಯ ಶಿಕ್ಷಣ ಪ್ರೇಮಿ ಡಾ. ಎಚ್.ಎನ್, ನರಸಿಂಹಯ್ಯ ಅವರ ಹೆಸರನ್ನು ನಾಮಕರಣ ಮಾಡಬೇಕೆಂದು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಸುರೇಶ್ ಕುಮಾರ್ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಪ್ರಮುಖ ಭಾಗ ಬಸವನಗುಡಿಯ ನ್ಯಾಷನಲ್ ಕಾಲೇಜು ಎಂದಾಕ್ಷಣ ಎಲ್ಲರ ನೆನಪಿಗೆ ಬರುವ ಹೆಸರು ನಮ್ಮೆಲ್ಲರ ನೆಚ್ಚಿನ ಗೌರವಾನ್ವಿತ ಡಾ. ಎಚ್ ನರಸಿಂಹಯ್ಯ ಅವರದು. ಅವರು ಪ್ರಗತಿಪರ ಧೋರಣೆಗೆ ಹೆಸರಾಗಿ ಇಡೀ ತಮ್ಮ ಜೀವನವನ್ನು ಇಡೀ ಸಮಾಜಕ್ಕಾಗಿ ಅರ್ಪಿಸಿಕೊಂಡವರು. ಅವರನ್ನು ನೆನಪಿಸಿಕೊಳ್ಳದೆ ನ್ಯಾಷನಲ್ ಕಾಲೇಜು ಹೆಸರನ್ನು ಪ್ರಸ್ತಾಪಿಸಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಮೆಟ್ರೋ ನಿಲ್ದಾಣಗಳಿಗೆ ಇಂತಹ ಮಹಾಪುರುಷರನ್ನು ಸದಾ ಸ್ಮರಣೆಯಲ್ಲಿಟ್ಟುಕೊಂಡು ಅವರ ಸೇವೆಯನ್ನು ಗುರುತಿಸುವ ಒಂದು ಕ್ರಮವಾಗಿದೆ. ಉದಾಹರಣೆಗೆ ಡಾ. ಬಿ.ಆರ್ ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ನಾಡಪ್ರಭು ಕೆಂಪೇಗೌಡ, ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸರ್ ಎಂ ವಿಶ್ವೇಶ್ವರಯ್ಯ ಸೇರಿದಂತೆ ಅನೇಕ ಮಹನೀಯರ ಹೆಸರುಗಳನ್ನು ಮೆಟ್ರೋ ರೈಲು ನಿಲ್ದಾಣಗಳಿಗೆ ನಾಮಕರಣ ಮಾಡುವ ಮೂಲಕ ಅವರ ಸೇವೆಯನ್ನು ಗೌರವಿಸಲಾಗಿದೆ ಎಂದು ಹೇಳಿದ್ದಾರೆ.
ಸದಾ ಖಾದಿ ಧರಿಸುತ್ತಿದ್ದ ಡಾ. ಎಚ್ ನರಸಿಂಹಯ್ಯನವರು ಅಧ್ಯಾಪಕರಾಗಿ, ಆಡಳಿತಗಾರರಾಗಿ, ಸ್ನೇಹಮಯ ಮಾನವತಾವಾದಿಯಾಗಿದ್ದರಲ್ಲದೇ ರಾಷ್ಟ್ರೀಯವಾದಿಯೂ ಆಗಿದ್ದರು ಎಂದು ಅವರನ್ನು ನೆನೆದಿದ್ದಾರೆ.












Click it and Unblock the Notifications