ಸಲೂನ್ ಮತ್ತು ದಂತ ಕ್ಲಿನಿಕ್ಗೆ ಅನುಮತಿ ಕೋರಿ ಸುರೇಶ್ ಕುಮಾರ್ ಮನವಿ
ಬೆಂಗಳೂರು, ಏಪ್ರಿಲ್ 30: ಕೊರೊನಾ ವೈರಸ್ ಭೀತಿಯಿಂದ ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಕೇವಲ ಅಗತ್ಯ ವಸ್ತುಗಳ ಪೂರೈಕೆ ಬಿಟ್ಟು ಉಳಿದ ಎಲ್ಲ ಉದ್ಯಮ, ಅಂಗಡಿ, ಕೈಗಾರಿಕೆ ಎಲ್ಲವೂ ಬಂದ್ ಆಗಿದೆ.
Recommended Video
ಸಮಾಜಕ್ಕೆ ತೀರಾ ಅನಿವಾರ್ಯವಾದ ಸಲೂನ್ ಅಂಗಡಿ ಮುಚ್ಚಿರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬಂದಿದೆ. ಸಲೂನ್ ಅಂಗಡಿ ತೆರೆಯಲು ಅನುಮತಿ ನೀಡಿ ಎಂದು ಒತ್ತಾಯ ಹೆಚ್ಚಾಗಿದೆ.

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರು ಮುಖ್ಯಮಂತ್ರಿ ಬಳಿ ಮನವಿ ಮಾಡಿದ್ದಾರೆ. ಈ ಬಗ್ಗೆ ಪತ್ರ ಬರೆದಿರುವ ಸಚಿವ ''ಸಮಾಜಕ್ಕೆ ತೀರಾ ಅನಿವಾರ್ಯವಾದ ಎರಡು ಪ್ರಮುಖ ವೃತ್ತಿಗಳಾದ ಕ್ಷೌರಿಕರು ಮತ್ತು ದಂತ ಚಿಕಿತ್ಸಕ ವೃತ್ತಿಗಳಿಗೆ ಸಂಬಂಧಿಸಿದಂತೆ ಚಟುವಟಿಕೆ ಆರಂಭಿಸಲು ಅನುಮತಿ ನೀಡುವ ಕುರಿತು ಆಲೋಚಿಸಬೇಕಿದೆ' ಎಂದು ವಿನಂತಿಸಿಕೊಂಡಿದ್ದಾರೆ.
''ಈ ಎರಡು ವೃತ್ತಿಗಳಲ್ಲಿ ಕಾರ್ಯನಿರತವಾಗಿರುವವರು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸಾಧ್ಯತೆಗಳು ತೀರಾ ಕಡಿಮೆ ಇರುವ ಹಿನ್ನಲೆಯಲ್ಲಿ ಪರಸ್ಪರ ಸೋಂಕು ಹರಡುವ ಸಾಧ್ಯತೆಗಳು ಇಲ್ಲದಿಲ್ಲ. ಅದಾಗ್ಯೂ ಸೋಂಕು ಹರಡದಂತೆ ನೋಡಿಕೊಳ್ಳುವ ಮೂಲಕ ಈ ವೃತ್ತಿಗಳ ಪುನರಾಂಭಕ್ಕೆ ಏನೆಲ್ಲಾ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಯಾವ ಮಾರ್ಗದರ್ಶಿ ಸೂತ್ರಗಳನ್ನು ಅನುಸರಿಸಬೇಕೆಂದಬುದರ ಕುರಿತು ಸುತ್ತೋಲೆ ಹೊರಡಿಸಲು ಸಂಬಂಧಿಸಿದ ಇಲಾಖೆಗೆ ಅಗತ್ಯ ಸೂಚನೆ ನೀಡಬೇಕೆಂದು ಹಾಗೂ ಈ ಮೂಲಕ ಈ ವೃತ್ತಿಗಳನ್ನು ಅವಲಂಬಿಸಿರುವವರು ಸುಗಮ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಕೋರುತ್ತೇನೆ'' ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಮೇ 3ರ ನಂತರ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನೀಡುವ ಸಲಹೆ ಬಳಿಕ ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.











Click it and Unblock the Notifications