ಮೂಢನಂಬಿಕೆ: ಮತ್ತೆ ಧರಣಿಗೆ ಪ್ರಗತಿಪರರ ಸಿದ್ಧತೆ
ಬೆಂಗಳೂರು, ನ. 14: ಕಳೆದ ವರ್ಷವೇ ಕರಡು ಪ್ರತಿ ತಯಾರಿಸಿದ್ದ ಮೂಢನಂಬಿಕೆ ನಿಯಂತ್ರಣ ಕಾಯ್ದೆ ಜಾರಿಗೆ ವಿರೋಧ ಪಕ್ಷ ಬಿಜೆಪಿ ಸೇರಿದಂತೆ ಇನ್ನಿತರ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಎಂಬ ಆರೋಪ ಹೊರಿಸಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಕಾಯ್ದೆ ಜಾರಿ ನನೆಗುದಿಗೆ ಬಿದ್ದಿತ್ತು.
ಆದರೆ, ಈ ವರ್ಷ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಲು ಆಗ್ರಹಿಸಿ ಪ್ರಗತಿಪರ ಮಠಾಧೀಶರ ವೇದಿಕೆಯ ಸದಸ್ಯರು ಸ್ವಾತಂತ್ರ್ಯ ಉದ್ಯಾನವನದಲ್ಲಿ ನವೆಂಬರ್ 17 ರಿಂದ 19ರ ವರೆಗೆ ಮೂರು ದಿನಗಳ ಉಪವಾಸ ಸತ್ಯಾಗ್ರಹ ಆಯೋಜಿಸಿದ್ದಾರೆ. [ಸದ್ಯಕ್ಕೆ ಮೂಢನಂಬಿಕೆ ನಿಷೇಧ ಕೈಬಿಟ್ಟ ಸಿಎಂ]
ಬಾಗೇಪಲ್ಲಿಯ ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ನೇತೃತ್ವದಲ್ಲಿ ರಾಜ್ಯದ ನೂರಕ್ಕೂ ಹೆಚ್ಚು ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಲವು ವಿಚಾರವಾದಿ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ. ತಮ್ಮ ಪ್ರತಿಭಟನೆಗೆ 'ಪ್ರಗತಿಪರ ನಡೆ' ಎಂದು ಅವರು ಕರೆದುಕೊಂಡಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ನಿಡುಮಾಮಿಡಿ ಸ್ವಾಮೀಜಿ, ಕಾಯ್ದೆ ಕುರಿತು ಸರ್ಕಾರ ಎರಡು ಮಾದರಿಯ ಕರಡು ಪ್ರತಿಗಳನ್ನು ಹೊಂದಿದೆ. ಅದನ್ನು ಶಾಸಕಾಂಗ ಸಮಿತಿ ಸರಿಯಾಗಿ ಪರಿಶೀಲಿಸಿ, ಜಾರಿಗೆ ತರಬೇಕು. ನಾನು ಕರಡು ಪ್ರತಿಗಳನ್ನು ಓದಿದ್ದೇನೆ. ಅದು ಯಾವುದೇ ಧರ್ಮದ ವಿರುದ್ಧವೂ ಇಲ್ಲ. ಎಲ್ಲ ರೀತಿಯ ಶೋಷಣೆ ಹಾಗೂ ಭೇದಾತ್ಮಕ ಪದ್ಧತಿಗಳ ವಿರುದ್ಧವಾಗಿದೆ. ಇದಕ್ಕೆ ಸಾಂವಿಧಾನಿಕ ಜನಾದೇಶ ಸಿಗಬೇಕು ಎಂದು ಆಗ್ರಹಿಸಿದರು.
ಪ್ರಸ್ತಾವನೆ ಇಲ್ಲ: ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಮೂಢನಂಬಿಕೆ ನಿಯಂತ್ರಣ ಕರಡು ಮಸೂದೆ ಬರುವ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗುವ ಸಂಭವನೀಯತೆ ಇಲ್ಲ. ಈ ಕುರಿತು ಸಾಧಕ-ಬಾಧಕಗಳ ಚರ್ಚೆ ನಡೆಯಬೇಕಿದೆ. ಈ ಕಾಯ್ದೆ ಜಾರಿಗೆ ಪ್ರಬಲ ವಿರೋಧ ವ್ಯಕ್ತವಾಗಿದೆ ಎಂದು ತಿಳಿಸಿದರು. [ಮೂಢನಂಬಿಕೆ ಪ್ರತಿಬಂಧಕ ಮಸೂದೆ ಮಂಡನೆ ಶತಸಿದ್ಧ]
ಅಲ್ಲದೆ, ವಿಧಾನ ಪರಿಷತ್ನಲ್ಲಿ ಕಾಂಗ್ರೆಸ್ಗೆ ಬಹುಮತ ಇಲ್ಲ. ಆದ್ದರಿಂದ ಅಲ್ಲಿ ಕಾನೂನು ಪಾಸಾಗುವ ಸಂಭವನೀಯತೆ ಇಲ್ಲ. ಜೆಡಿಎಸ್ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವೂ ಇಲ್ಲ ಎಂದು ಸ್ಪಷ್ಟಪಡಿಸಿದರು.