ಜೀವಸೆಲೆಗಾಗಿ ಹಾಹಾಕಾರ; ಹಾಲು ಉತ್ಪಾದನೆ ಕುಸಿತ
ಬೆಂಗಳೂರು, ಮೇ 6- ರಾಜ್ಯದಲ್ಲಿ ಬಿಸಿಲಿನ ಬೇಗೆಗೆ ಜನ-ಜಾನುವಾರು ತತ್ತರಿಸುತ್ತಿದ್ದಾರೆ. ನೀರಿನ ಮೂಲವಾದ ಜಲ ಸಂಪನ್ಮೂಲವೂ ಇಳಿಕೆಯಾಗುತ್ತಿದೆ. ಇದರಿಂದ ಹಾಹಾಕಾರ ಎದ್ದಿದೆ.
ಕಾವೇರಿ, ಕೃಷ್ಣಾ ನದಿ ತೀರ ಪ್ರದೇಶ, ಮಲೆನಾಡು ಜಿಲ್ಲೆಗಳು ಉತ್ತರ, ಮುಂಬೈ ಕರ್ನಾಟಕ ಹಾಗೂ ಮದ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಲ್ಲದೆ ಪರಿತಪಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಧಾನಿ ಬೆಂಗಳೂರಿನಲ್ಲೂ ನೀರಿನ ಹಾಹಾಕಾರ ಉಂಟಾಗಿದೆ.
ಮೇ ತಿಂಗಳು ಪ್ರಾರಂಭವಾಗಿದ್ದರೂ ರಾಜ್ಯದಲ್ಲಿ ಈ ಬಾರಿ ಪ್ರಮುಖ ಭಾಗಗಳಲ್ಲಿ ಮಳೆಯಾಗಿಲ್ಲ. ಇದರ ಪರಿಣಾಮ ಜಲಮೂಲಗಳಾದ ನದಿಗಳು, ಕೆರೆಗಳು, ಹಳ್ಳ-ಕೊಳ್ಳಗಳು ಬತ್ತಿ ಹೋಗಿವೆ. ಜಾನುವಾರುಗಳು, ಪ್ರಾಣಿ-ಪಕ್ಷಿಗಳು ಕೂಡ ನೀರಿಲ್ಲದೆ ಗುಳೆ ಹೋಗುವಂತಾಗಿದೆ. ಈ ಮಧ್ಯೆ ವಿದ್ಯುತ್ ಕಣ್ಣಾಮುಚ್ಚಾಲೆ ಅಧಿಕೃತವಾಗಿ ಆಟವಾಗತೊಡಗಿದೆ.

ಮಲೆನಾಡಿನ ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಹಾಸನ, ಕರಾವಳಿ ತೀರ ಪ್ರದೇಶಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೇ ನೀರಿನ ಅಭಾವ ಎದ್ದಿದೆ ಎಂದರೆ ಪರಿಸ್ಥಿತಿ ಯಾವ ಮಕ್ಕೆ ಇಳಿದಿದೆ ಎಂಬುದನ್ನು ಊಹಿಸಿಕೊಳ್ಳಬಹುದು. (ಭಾರತದಲ್ಲಿ ಮಳೆ ಮೇಲೆ ಎಲ್ ನಿನೊ ಪ್ರಭಾವ ಹೀಗಿದೆ)
ಒಂದು ಕಾಲದ ಕರ್ನಾಟಕದ ಚಿರಾಪುಂಜಿ ಆಗುಂಬೆಯಲ್ಲೇ ದುಡ್ಡು ಕೊಟ್ಟು ನೀರನ್ನು ಖರೀದಿಸುವಂತಾಗಿದೆ. ಇನ್ನು, ಉಳಿದ ಭಾಗಗಳಲ್ಲಿ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಯೋಚಿಸಿ ನೋಡಿ. ವಿಶೇಷವಾಗಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಂತೂ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕುಸಿಯತೊಡಗಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ಬೀದರ್, ಗುಲ್ಬರ್ಗ, ಬಿಜಾಪುರ, ಯಾದಗಿರಿ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಗದಗ, ಬೆಳಗಾವಿ ಸೇರಿದಂತೆ ಎಲ್ಲೆಡೆ ಜಲ ದಾಹ ಉಂಟಾಗಿದೆ.
ಕುಸಿದ ಹಾಲಿನ ಪ್ರಮಾಣ: ಕೆರೆ, ಕಟ್ಟೆಗಳು ಖಾಲಿಯಾಗಿರುವುದು, ತಿನ್ನಲು ಮೇವು ಇಲ್ಲದ ಪರಿಣಾಮ ಜಾನುವಾರು ಹಾಲು ಉತ್ಪಾದನೆ ಪ್ರಮಾಣವು ಇಳಿಕೆಯಾಗಿದೆ. ಕಡುಬೇಸಿಗೆಯಲ್ಲಿ ರಾಜ್ಯದಲ್ಲಿ ಹಾಲಿನ ಪ್ರಮಾಣವು 3-5 ಲಕ್ಷ ಲೀಟರ್ ಇಳಿಕೆಯಾಗಿದೆ ಎಂದು ತಿಳಿದು ಬಂದಿದೆ. ಸಂಕಷ್ಟದಲ್ಲಿರುವ ರೈತರು, ಜಾನುವಾರುಗಳ ಸಮಸ್ಯೆಗೆ ಸ್ಪಂದಿಸಲು ಸರಕಾರ ಮುಂದಾಗಬೇಕು ಎಂಬುದು ಜನತೆಯ ಆಶಯವಾಗಿದೆ.












Click it and Unblock the Notifications