ಇಂದಿರಾ ಕ್ಯಾಂಟೀನ್ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ
ಬೆಂಗಳೂರು, ಮೇ 14: ಕಿಡಿಗೇಡಿಗಳು ಇಂದಿರಾ ಕ್ಯಾಂಟೀನ್ಮೇಲೆ ಕಲ್ಲು ಎಸೆದು ಪರಾರಿಯಾದ ಘಟನೆ ಬೆಂಗಳೂರಿನ ಚಂದ್ರಾಲೇಔಟ್ನಲ್ಲಿರುವ ಇಂದಿರಾ ಕ್ಯಾಂಟೀನ್ನಲ್ಲಿ ನಡೆದಿದೆ.
ಭಾನುವಾರ ಸಂಜೆ ಐದು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಲ್ಲು ಎಸೆತದಿಂದ ಇಂದಿರಾ ಕ್ಯಾಂಟೀನ್ನ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಇಂದಿರಾ ಕ್ಯಾಂಟೀನ್ ಅನ್ನು ಪ್ರತಿ ದಿನ ಮಧ್ಯಾಹ್ನ ಮೂರು ಗಂಟೆಗೆ ಮುಚ್ಚಲಾಗುತ್ತದೆ. ಅದಾದ ನಂತರ ಅಲ್ಲಿ ಯಾರೂ ಇರುವುದಿಲ್ಲ.
ಮತದಾನದ ದಿನ ಇಂದಿರಾ ಕ್ಯಾಂಟೀನ್ನಲ್ಲಿ ಊಟ-ತಿಂಡಿ ಇಲ್ಲ!
ಅದನ್ನೇ ನೋಡಿಕೊಂಡಿದ್ದ ಕಿಡಿಗೇಡಿಗಳು ಕಲ್ಲು ಎಸೆದು ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಕ್ಯಾಂಟೀನ್ಗೆ ಬಂದಿದ್ದ ಯುವಕನೊಬ್ಬ ಬಂದ್ ಆಗಿದ್ದ ಕಿಟಕಿ ಬಾಗಿಲುಗಳಿಗೆ ಕಲ್ಲು ತೂರಿದ್ದಾನೆ. ಇದರಿಂದ ಗಾಜುಗಳು ಪುಡಿಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ ಬಂದವರು ಕಲ್ಲು ತೂರಿ ಹೋಗಿರುವುದು ಇಂದಿರಾ ಕ್ಯಾಂಟೀನ್ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಇಂದಿರಾ ಕ್ಯಾಂಟೀನ್ ಸಿಬ್ಬಂದಿ ದೂರು ನೀಡಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.