ಬೆಂಗಳೂರಿನಿಂದ ಝೂಮ್ ಕಾರು ಕದ್ದಿದ್ದು ಆಂಧ್ರದ ಟೆಕ್ಕಿ!
ಬೆಂಗಳೂರು, ಜುಲೈ 13 : ಬೆಂಗಳೂರಿನಿಂದ ಕಳುವಾಗಿದ್ದ ಹುಂಡೈ ಐ 20 ಝೂಮ್ ಕಾರು ಪೊಲೀಸರಿಗೆ ಸಿಕ್ಕಿದೆ. ಆದರೆ, ಕಾರನ್ನು ಕಳವು ಮಾಡಿದ್ದ ಟೆಕ್ಕಿಗಾಗಿ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಿದ್ದಾರೆ.
ಜೂನ್ 18ರಂದು ನಕಲಿ ವಿಳಾಸ ನೀಡಿ ಝೂಮ್ ಕಾರು ಬಾಡಿಗೆಗೆ ಪಡೆದು ಟೆಕ್ಕಿ ಮಹೇಶ್ ನೂತನ್ ಕುಮಾರ್ ಪರಾರಿಯಾಗಿದ್ದ. ಕಾರು ಬಾಡಿಗೆಗೆ ಪಡೆಯುವಾಗ ಸಾಯಿ ಕುಮಾರ್ ಎಂಬ ನಕಲಿ ದಾಖಲೆಗಳನ್ನು ಆತ ನೀಡಿದ್ದ.
ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಝೂಮ್ ಕಾರ್ ಸಂಸ್ಥೆಯ ಮ್ಯಾನೇಜರ್ ಎಂ.ಜಯಂತ್ ಜಾಧವ್ ದೂರು ನೀಡಿದ್ದರು. ಪ್ರಕರಣದ ತನಿಖೆಗೆ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಈಗ ಪೊಲೀಸರ ತಂಡ ಕಾರನ್ನು ಪತ್ತೆ ಹಚ್ಚಿದೆ. ಆದರೆ, ಮಹೇಶ್ ನೂತನ್ ಇನ್ನೂ ಸಿಕ್ಕಿಲ್ಲ.

ಆಂಧ್ರಪ್ರದೇಶದ ನಿವಾಸಿ : ಮಹೇಶ್ ನೂತನ್ ಕುಮಾರ್ ಆಂಧ್ರಪ್ರದೇಶದ ಕಾಕಿನಾಡದ ನಿವಾಸಿ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಐಷಾರಾಮಿ ಜೀವನಕ್ಕಾಗಿ ಕಾರು ಕದಿಯುವುದನ್ನು ಅಭ್ಯಾಸ ಮಾಡಿಕೊಂಡಿದ್ದ.
ಜೂನ್ 18ರಂದು ಸಹ ಒಂದು ದಿನಕ್ಕಾಗಿ ಕಾರನ್ನು ಬಾಡಿಗೆಗೆ ಪಡೆದಿದ್ದ. ಶ್ರೀನಿವಾಸ ನಗರದ ನಕಲಿ ವಿಳಾಸ ನೀಡಿ ಕಾರಿನೊಂದಿಗೆ ಪರಾರಿಯಾಗಿದ್ದ. ಆಂಧ್ರಪ್ರದೇಶಕ್ಕೆ ಹೋದಾಗ ಜಿಪಿಎಸ್ ಕಿತ್ತುಹಾಕಿದ್ದ. ವಿಶೇಷ ಪೊಲೀಸ್ ತಂಡ ಕಾರನ್ನು ಆಂಧ್ರದಲ್ಲಿ ಪತ್ತೆ ಹಚ್ಚಿದೆ. ಮಹೇಶ್ಗಾಗಿ ಹುಡುಕಾಟ ಮುಂದುವರೆದಿದೆ.
ಮಹೇಶ್ ನೂತನ್ ಕುಮಾರ್ ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶದಲ್ಲಿಯೂ ಕಾರು ಕಳವು ಮಾಡಿದ್ದಾನೆ.
ಆಂಧ್ರಪ್ರದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಪೊಲೀಸರು ಆತನಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.












Click it and Unblock the Notifications