800 ಮರ ಕತ್ತರಿಸಿದರೆ 81 ಸಾವಿರ ಗಿಡ ನೆಡುತ್ತೇವೆ : ಜಾರ್ಜ್
ಬೆಂಗಳೂರು, ಅಕ್ಟೋಬರ್ 26: ಬೆಂಗಳೂರಿನಲ್ಲಿ ನಿರ್ಮಿಸಲಿರುವ ಉಕ್ಕಿನ ಸೇತುವೆ ಸಾರ್ವಜನಿಕರ ಉಪಯೋಗಕ್ಕಾಗೇ ನಿರ್ಮಾಣ ಆಗುತ್ತಿರುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಪುನರುಚ್ಚರಿಸಿದ್ದಾರೆ. ಬುಧವಾರ ವಿಕಾಸಸೌಧದಲ್ಲಿ ಕೆ.ಜೆ.ಜಾರ್ಜ್ ಅವರು ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಈ ಕಾಮಗಾರಿಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಸುಮಾರು 81,000 ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.
ಉಕ್ಕಿನ ಸೇತುವೆಯಿಂದ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಜೊತೆಗೆ, ಹೆಬ್ಬಾಳ ಮತ್ತು ಸಮೀಪದ ಇತರ ಬಡಾವಣೆಗಳ ಸಾರ್ವಜನಿಕರಿಗೂ ಉಪಯೋಗವಾಗಲಿದೆ ಎಂದು ಸಚಿವರು ಹೇಳಿದರು.

ನಮ್ಮ ಸರ್ಕಾರ ಕಡಿಮೆ ಖರ್ಚಿನಲ್ಲಿ ಅಂದರೆ 1,791 ಕೋಟಿ ರೂ. ವೆಚ್ಚದಲ್ಲಿ ಉಕ್ಕಿನ ಸೇತುವೆ ನಿರ್ಮಿಸುತ್ತಿದೆ ಎಂದ ಕೆ.ಜೆ.ಜಾರ್ಜ್ ಅವರು, ಇದಕ್ಕಾಗಿ ಕೇವಲ ಮೂರು ಎಕರೆ ಸರ್ಕಾರಿ ಹಾಗೂ ಒಂದು ಎಕರೆ ಖಾಸಗಿ ಭೂಮಿಯನ್ನಷ್ಟೇ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಈ ಉಕ್ಕಿನ ಸೇತುವೆ ನಿರ್ಮಾಣ ಮಾಡುವುದರಿಂದ ತ್ವರಿತವಾಗಿ ಕಾಮಗಾರಿ ಕೈಗೊಳ್ಳಬಹುದು. ಕಾಂಕ್ರಿಟ್ ನಿಂದ ನಿರ್ಮಿಸಿದ ಕಂಬಗಳು ಮತ್ತು ಮೇಲ್ಮಟ್ಟದ ರಸ್ತೆಯ ರಚನೆ ಸುಮಾರು 70 ರಿಂದ 100 ಟನ್ ತೂಕವುಳ್ಳದ್ದಾಗಿದ್ದರೆ, ಉಕ್ಕಿನಿಂದ ನಿರ್ಮಿಸಿದ ಕಂಬಗಳು ಮತ್ತು ರಸ್ತೆಯ ರಚನೆಗಳು 15 ರಿಂದ 20 ಟನ್ ಗಳಿಗೆ ಸೀಮಿತವಾಗಿರುತ್ತವೆ ಎಂದು ಸಚಿವರು ತಿಳಿಸಿದರು.
ಉಕ್ಕಿಗೆ ಮೃದುತ್ವವಿರುವುದರಿಂದ ಪ್ರಕೃತಿ ವಿಕೋಪಕ್ಕೆ (ಭೂಕಂಪ) ಹೆಚ್ಚಿನ ಪ್ರತಿರೋಧ ಶಕ್ತಿಯುಳ್ಳದ್ದಾಗಿರುತ್ತದೆ, ನಿರ್ಮಾಣ ಹಂತದ ಮಾಲಿನ್ಯವೂ ಅಂತ್ಯಂತ ಕಡಿಮೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಕೃಷ್ಣಭೈರೇಗೌಡ, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications