ಬೆಂಗಳೂರಲ್ಲಿ ಇನ್ನೂ ಸಮಸ್ಯೆಯ ಹೊಗೆ ಉಗುಳುತ್ತಿರುವ ಟು-ಸ್ಟ್ರೋಕ್ ಆಟೋ
ಬೆಂಗಳೂರು, ಆಗಸ್ಟ್ 13: ಟು-ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕುವ ಸಮಸ್ಯೆ ಇದುವರೆಗೂ ಬಗೆಹರಿದಿಲ್ಲ, ಹೊಸ ಆಟೋಗಳನ್ನು ಕೊಳ್ಳಲು ಸಬ್ಸಿಡಿ ನೀಡುತ್ತೇವೆ ಎಂದು ಘೋಷಿಸಿದರೂ ಆಟೋ ಚಾಲಕರು ಮುಂದೆ ಬರುತ್ತಿಲ್ಲ.
ಕಠಿಣ ಕ್ರಮಗಳನ್ನು ತೆಗೆದುಕೊಂಡು 2 ಸ್ಟ್ರೋಕ್ ಆಟೋ ಚಾಲನೆ ರದ್ದು ಮಾಡುವ ಅವಕಾಶವಿದೆ ಆದರೂ ಬೇರೆ ರೀತಿಯಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಸಾರಿಗೆ ಇಲಾಖೆ ಯೋಚಿಸಿದೆ. ಹಾಗಾಗಿ ಸಾರಿಗೆ ಆಯುಕ್ತರ ನೇತೃತ್ವದಲ್ಲಿ ಕೋರ್ ಕಮಿಟಿ ರಚಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಬೆಂಗಳೂರಲ್ಲಿ ಪ್ರತಿ ವರ್ಷವೂ ಐದಾರು ಲಕ್ಷ ಹೊಸ ವಾಹನಗಳು ರಸ್ತೆಗಿಳಿಯುತ್ತಿದೆ ಇದರಿಂದ ಸಾರಿಗೆ ಇಲಾಖೆ ಸೇರಿದಂತೆ ಪರಿಸರ ಮಾಲಿನ್ಯ ಇಲಾಖೆಯು ಆತಂಕ ವ್ಯಕ್ತಪಡಿಸಿದೆ. ಈಗಿರುವ ಟು ಸ್ಟ್ರೋಕ್ ಆಟೋಗಳು ಹೆಚ್ಚು ಹೊಗೆಯನ್ನು ಉಗುಳುವುದರಿಂದ ವಾಯುಮಾಲಿನ್ಯ ವಿಪರೀತವಾಗುತ್ತಿದೆ.

ಆಟೋ ಚಾಲಕರ ಸಂಘಟನೆಗಳೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದರೂ ಪ್ರಯೋಜನವಾಗಿಲ್ಲ, ಹಾಗಾಗಿ ಕೋರ್ ಕಮಿಟಿ ಸಭೆಯಲ್ಲಿ ಆಟೋ ಖರೀದಿಗೆ ಸುಲಭವಾಗಿ ಬ್ಯಾಂಕ್ ಸೌಲಭ್ಯ ಕಲ್ಪಿಸುವುದು, ಸಹಾಯಧನದ ಮೊತ್ತ ಹೆಚ್ಚಳ ಅಥವಾ ಸಾಲ ಸೌಲಭ್ಯಕ್ಕೆ ಹೆಚ್ಚಿನ ಸಹಾಯಧನ ನೀಡುವುದು ಇತ್ಯಾದಿ ವಿಚಾರಣೆಗಳ ಕುರಿತು ಚರ್ಚೆಗಳು ನಡೆಯುವ ಸಾಧ್ಯತೆ ಇದೆ.
ರಾಜ್ಯಸ ಸರ್ಕಾರದ 2017-18ನೇ ಸಾಲಿನ ಬಜೆಟ್ನಲ್ಲಿ 2018ರ ಏಪ್ರಿಲ್ 1ರಿಂದ ಎರಡು ಸ್ಟ್ರೋಕ್ ಆಟೋಗಳನ್ನು ರದ್ದುಗೊಳಿಸುವುದಾಗಿ ತಿಳಿಸಿತ್ತು. 10 ಸಾವಿರ ಎರಡು ಸ್ಟ್ರೋಕ್ ಆಟೋಗಳನ್ನು 4 ಸ್ಟ್ರೋಕ್ ಆಟೋಗಳಿಗೆ ಬದಲಿಸಿಕೊಳ್ಳಲು ತಲಾ 30 ಸಾವಿರದಂತೆ ಸಹಾಯಧನ ನೀಡಲು 30 ಕೋಟಿ ಅನುದಾನ ನೀಡಿತ್ತು. ಆದರೆ ಇದುವರೆಗೂ ಈ ಕಾರ್ಯ ಅಪೂರ್ಣವಾಗಿಯೇ ಉಳಿದಿದೆ.












Click it and Unblock the Notifications