ಶ್ರೀರಾಮಪುರ ಪೊಲೀಸರಿಂದ ಓರ್ವನ ಬಂಧನ, 15 ಕೆ.ಜಿ ಗಾಂಜಾ ವಶ
ಬೆಂಗಳೂರು, ಸೆ. 16: ಶ್ರೀರಾಮಪುರ ಪೊಲೀಸ್ ಠಾಣಾ ಸರಹದ್ದಿನ 5ನೇ ಮೈನ್ ಕಡೆಯಿಂದ, ಓಕಳಿಪುರ ಮಾರ್ಗವಾಗಿ ಇಬ್ಬರು ಆಸಾಮಿಗಳು ಒಂದು ದ್ವಿಚಕ್ರವಾಹನದಲ್ಲಿ ಗಾಂಜಾ ಮಾದಕ ವಸ್ತುವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ.
ಖಚಿತ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಗಿರೀಶ್ ನಾಯ್ಕ್, ಪಿಎಸ್ಐ ಮತ್ತು ಸಿಬ್ಬಂದಿಯವರುಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಗಾಂಜಾ ಎಂಬ ಮಾದಕ ವಸ್ತುವನ್ನು ತಮ್ಮ ವಶದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತನನ್ನು ಶ್ರೀರಾಮಪುರದ ನಿವಾಸಿ ಸತ್ಯ(23) ಎಂದು ಗುರುತಿಸಲಾಗಿದ್ದು, ಆರೋಪಿಯಿಂದ 15 ಕೆ.ಜಿ. ತೂಕದ ಗಾಂಜಾ ಹಾಗೂ ಕಳ್ಳತನ ಮಾಡಿ ಕೃತ್ಯಕ್ಕೆ ಬಳಸಿದ 1-ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಶ್ರೀರಾಮಪುರ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ವಿಶಾಖಪಟ್ಟಣಂನಿಂದ ವ್ಯಕ್ತಿಯೊಬ್ಬ ತನಗೆ ತಂದು ಕೊಡುತ್ತಿದ್ದು, ಮಾರಾಟ ಮಾಡಿ ಕೊಟ್ಟರೆ ಅದರಿಂದ ಬರುವ ಹಣದಲ್ಲಿ ತನಗೆ ಕಮೀಷನರ್ ನೀಡುವುದಾಗಿ ತಿಳಿಸಿರುತ್ತಾನೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆ ಕಾರ್ಯ ಮುಂದುವರೆದಿದ್ದು, ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.
ಈ ಪ್ರಕರಣದಲ್ಲಿ ವೆಂಕಟೇಶ್ ನಾಯ್ಡು, ಮಲ್ಲೇಶ್ವರಂ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸುನೀಲ್ ವೈ ನಾಯಕ್, ಪೊಲೀಸ್ ಇನ್ಸ್ ಪೆಕ್ಟರ್, ಶ್ರೀರಾಮಪುರ ಪೊಲೀಸ್ ಠಾಣೆ, ಪಿಎಸ್ಐ ಗಿರೀಶ್ ನಾಯಕ್ ಹಾಗೂ ಸಿಬ್ಬಂದಿಯವರುಗಳು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.












Click it and Unblock the Notifications