ಭೂಗತ ಪಾತಕಿಗಳ ಚಟುವಟಿಕೆ ನಿಗ್ರಹಕ್ಕೆ ವಿಶೇಷ ಪಡೆ
ಬೆಂಗಳೂರು, ಜು. 14 : ಕರ್ನಾಟಕದಲ್ಲಿ ಭೂಗತ ಪಾತಕಿಗಳ ಚಟುವಟಿಕೆಗಳನ್ನು ತಡೆಯಲು ವಿಶೇಷ ತನಿಖಾ ದಳವನ್ನು ರಚನೆ ಮಾಡಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಜೊತೆ ಸಹ ಈ ಕುರಿತು ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಕರಾವಳಿ ಭಾಗದ ಶಾಸಕರು, ಸಚಿವರು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಯಿತು. ಕರಾವಳಿ ಭಾಗದ ಉದ್ಯಮಿಗಳಿಗೆ ಜನಪ್ರತಿನಿಧಿಗಳಿಗೆ ಭೂಗತ ಪಾತಕಿಗಳಿಂದ ಬೆದರಿಕೆ ಕರೆ ಬರುತ್ತಿರುವ ಹಿನ್ನಲೆಯಲ್ಲಿ ಚರ್ಚೆ ನಡೆಸಲು ಈ ಸಭೆ ಕರೆಯಲಾಗಿತ್ತು.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಕೆ.ಜೆ.ಜಾರ್ಜ್, ರಾಜ್ಯದಲ್ಲಿ ಭೂಗತ ಪಾತಕಿಗಳ ಚಟುವಟಿಕೆಗಳನ್ನು ನಿಯಂತ್ರಿಸಲು ವಿಶೇಷ ತನಿಖಾ ದಳವನ್ನು ರಚಿಸಲಾಗುವುದು ಎಂದು ಹೇಳಿದರು. ಕೇಂದ್ರ ಸರ್ಕಾರದ ಜೊತೆ ಸಹ ಈ ಕುರಿತು ಮಾತುಕತೆ ನಡೆಸಿ, ಸಹಾಯ ನೀಡುವಂತೆ ಮನವಿ ಮಾಡಲಾಗುವುದು ಎಂದರು. [ಗೃಹ ಸಚಿವ ಜಾರ್ಜ್ ಅವರಿಗೆ ಬೆದರಿಕೆ ಕರೆ ಬರುತ್ತಿದೆ]
ಸಭೆಯಲ್ಲಿ ಕರಾವಳಿ ಭಾಗಗಳಲ್ಲಿ ಗುಪ್ತಚರ ಇಲಾಖೆ ಬಲ ಪಡಿಸುವುದು, ಸ್ಥಳೀಯವಾಗಿ ಭೂಗತ ಪಾತಕಿಗಳಿಗೆ ಯಾರು ಮಾಹಿತಿ ನೀಡುತಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುವುದು ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಾಗಿದೆ. ಯಾವುದೇ ಕಾರಣಕ್ಕೂ ಭೂಗತ ಪಾತಕಿಗಳ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಜಾರ್ಜ್ ಹೇಳಿದರು.
ಭೂಗತ ಪಾತಕಿಗಳಾದ ರವಿಪೂಜಾರಿ, ಕಲಿ ಯೋಗೇಶ್, ಬನ್ನಂಜೆ ರಾಜಾ, ವಿಕ್ಕಿ ಶೆಟ್ಟಿಯಿಂದ ಶಾಸಕರು, ಸಚಿವರು, ಉದ್ಯಮಿಗಳಿಗೆ ಬೆದರಿಕೆ ಕರೆ ಬರುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿತ್ತು. ಸ್ವತ: ಗೃಹ ಸಚಿವ ಜಾರ್ಜ್ ಕೂಡ ತಮಗೂ ಬೆದರಿಕೆ ಕರೆ ಬರುತ್ತಿರುವುದಾಗಿ ಸದನದಲ್ಲಿ ಹೇಳಿಕೆ ನೀಡಿದ್ದರು.












Click it and Unblock the Notifications