ಸತ್ಯಾಂಶ ತಿಳಿಯಲು ತನಿಖೆ ನಡೆಸಲಿ : ರೂಪಾ ತಿರುಗೇಟು
ಬೆಂಗಳೂರು, ಜುಲೈ 13 : "ಪರಪ್ಪನ ಅಗ್ರಹಾರದಲ್ಲಿ ನಡೆಯುತ್ತಿರುವ ದೌರ್ಜನ್ಯ, ಭ್ರಷ್ಟಾಚಾರ, ವೈದ್ಯಾಧಿಕಾರಿಗಳ ಮೇಲೆ ನಡೆಯುತ್ತಿರುವ ಹಲ್ಲೆಗಳ ಆರೋಪ ಸತ್ಯವಾಗಿದೆ. ಅಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ತನಿಖೆಯಾಗಲಿ" ಎಂದು ಡಿಐಜಿ (ಕಾರಾಗೃಹ) ರೂಪಾ ಡಿ ಮೌದ್ಗಿಲ್ ಅವರು ಸವಾಲು ಹಾಕಿದ್ದಾರೆ.
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಮತ್ತು ನಕಲಿ ಸ್ಟಾಂಪ್ ಹಗರಣದಲ್ಲಿ ಭಾಗಿಯಾಗಿರುವ ಕರೀ ಲಾಲಾ ತೆಲಗಿ ಅವರಿಗೆ ಜೈಲಿನಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗಿದೆ, ಅಲ್ಲದೆ ಶಶಿಕಲಾ ಅವರಿಂದ 2 ಕೋಟಿ ರುಪಾಯಿ ಲಂಚ ಪಡೆಯಲಾಗಿದೆ ಎಂದು ರೂಪಾ ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಎಲ್ಲ ಆರೋಪಗಳನ್ನು ನಿರಾಕರಿಸಿರುವ ಡಿಜಿಪಿ ಎಚ್ಎನ್ ಸತ್ಯನಾರಾಯಣ ರಾವ್ ಅವರು, ರೂಪಾ ವಿರುದ್ಧ ತಿರುಗಿಬಿದ್ದಿದ್ದು, ನಾನು ಯಾವುದೇ ವಿಶೇಷ ಸವಲತ್ತುಗಳನ್ನು ಶಶಿಕಲಾಗೆ ನೀಡಿಲ್ಲ ಮತ್ತು ಇದಕ್ಕಾಗಿ ಲಂಚ ಪಡೆದಿಲ್ಲ. ಇಂಥ ವಿಷಯ ತಿಳಿದುಬಂದಿದ್ದರೆ ನನ್ನ ಜೊತೆ ಮೌಖಿಕವಾಗಿ ಚರ್ಚೆ ಮಾಡಬಹುದಿತ್ತು. ಪತ್ರವನ್ನು ಮಾಧ್ಯಮಕ್ಕೆ ಬಹಿರಂಗ ಮಾಡುವ ಅಗತ್ಯವೇನಿತ್ತು ಎಂದು ಸತ್ಯನಾರಾಯಣ ಅವರು ಕೆಂಡ ಕಾರಿದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ರೂಪಾ ಮೌದ್ಗಿಲ್ ಅವರು, ನಾನು ಈ ವಿಷಯ ಕುರಿತು ಅವರೊಂದಿಗೆ ಮೌಖಿಕವಾಗಿಯೂ ಚರ್ಚಿಸಿದ್ದೇನೆ. ಈಗ ಬರೀ ಮಾತಿನಲ್ಲಿ ಚರ್ಚಿಸಿದರೆ ಪ್ರಯೋಜನವಿಲ್ಲವೆಂದು ಲಿಖಿತ ರೂಪದಲ್ಲಿ ತಿಳಿಸಿದ್ದೇನೆ, ಸರಕಾರದ ಗಮನಕ್ಕೂ ತಂದಿದ್ದೇನೆ. ನನ್ನ ಆರೋಪದಲ್ಲಿ ಸತ್ಯಾಂಶವಿದೆ ಎಂದು ಅನ್ನಿಸಿದರೆ ಸರಕಾರವೇ ತನಿಖೆ ನಡೆಸಿ ಹಗರಣ ಬಯಲಿಗೆಳೆಯಲಿ ಎಂದು ತಿರುಗೇಟು ನೀಡಿದರು.
ಜೈಲಿನಲ್ಲಿ ಬೇಕರಿ ತರಬೇತಿ ನೀಡುವುದಾಗಲಿ ಮತ್ತೊಂದು ಉಪಯುಕ್ತ ಕೆಲಸ ನಡೆಯುವಾಗ ನಾನೇ ಮಾಧ್ಯಮಗಳ ಗಮನಕ್ಕೆ ತಂದಿದ್ದೇನೆ. ಆದರೆ, ಭ್ರಷ್ಟಾಚಾರಗಳು ನಡೆಯುತ್ತಿರುವಾಗ ಸುಮ್ಮನೆ ಕೂಡಲು ಸಾಧ್ಯವಿಲ್ಲ. ಕಣ್ಣಮುಂದೆಯೇ ಎಲ್ಲ ನಡೆಯುತ್ತಿರುವಾಗ ಕಣ್ಣು ಮುಚ್ಚಿ ಕೂಡಲು ಸಾಧ್ಯವಿಲ್ಲ. ಅದು ನನ್ನ ಕರ್ತವ್ಯಲೋಪವಾಗುತ್ತದೆ. ಹೀಗಾಗಿ ನಾನು ವರದಿ ಕಳಿಸಲೇಬೇಕಾಯಿತು ಎಂದು ರೂಪಾ ನುಡಿದರು.
ಶಶಿಕಲಾ ಅವರಿಗೆ ವಿಶೇಷ ಅಡುಗೆ ಕೋಣೆ ನೀಡಲಾಗಿದೆ ಮತ್ತು ಅದಕ್ಕಾಗಿ ಲಂಚ ಪಡೆಯಲಾಗಿದೆ ಎಂಬ ಆರೋಪ ಕುರಿತಂತೆ ಸತ್ಯಾಂಶವೇನಿದೆ ಎಂದು ತಿಳಿಯಲು ಸರಕಾರ ತನಿಖೆ ನಡೆಸಲೇಬೇಕು ಎಂದು ರೂಪಾ ಅವರು ವಾದಿಸಿದರು.












Click it and Unblock the Notifications