ಕೋವಿಡ್-19: ಧೂಮಪಾನಿಗಳಿಗೆ ಹೆಚ್ಚು ಅಪಾಯ-ಡಾ. ವಿಶಾಲ್ ರಾವ್
ಬೆಂಗಳೂರು, ಮಾರ್ಚ್ 29: ಕೊರೋನಾ ಸಾಂಕ್ರಾಮಿಕ ಸೋಂಕಿನ ಶಂಕಿತ ವ್ಯಕ್ತಿಗಳು ಧೂಮಪಾನಿಗಳಾಗಿದ್ದರೆ ಅವರುಗಳ ಮೇಲೆ ಸೋಂಕು ಕ್ಷಿಪ್ರವಾಗಿ ಇನ್ನಷ್ಟು ಪರಿಣಾಮ ಬೀರುತ್ತಿರುವುದಕ್ಕೆ ಸಮಗ್ರ ಪುರಾವೆ ದೊರೆತಿದೆ ಎಂದು ಕೊವಿಡ್19ಗೆ ಚುಚ್ಚುಮದ್ದು ಕಂಡು ಹಿಡಿಯುತ್ತಿರುವ ಬೆಂಗಳೂರಿನ ತಜ್ಞ ವೈದ್ಯ ಡಾ. ವಿಶಾಲ್ ರಾವ್ ಅಭಿಪ್ರಾಯ ಪಟ್ಟಿದ್ದಾರೆ.
ಧೂಮಪಾನಿಗಳಿಗೆ ಶ್ವಾಸಕೋಶ ಮತ್ತು ಹೃದಯ ಸೋಂಕಿನ ಅಪಾಯದ ತೀವ್ರತೆಗಳು ಹೆಚ್ಚಿವೆ, ಇದರಿಂದ ಅವರುಗಳು ಉಸಿರಾಟದ ತೊಂದರೆಗಳಿಗೂ ಸಿಲುಕಲಿದ್ದಾರೆ. ಸೋಂಕಿನಿಂದ ಅವರು ಕ್ಷಯರೋಗದಂತಹ ರೋಗಗಳಿಗೂ ತುತ್ತಾಗುತ್ತಿದ್ದಾರೆ. ಇದರರ್ಥ ಧೂಮಪಾನ ಮಾಡದ ವ್ಯಕ್ತಿಗಳಿಗೆ ಹೋಲಿಸಿದರೆ ಧೂಮಪಾನಿಗಳು ಕೋವಿಡ್-19ಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿವೆ.
ಧೂಮಪಾನಿಗಳಿಗೆ ಮೊದಲೇ ಶ್ವಾಸಕೋಶಗಳು ಹಾನಿಗೊಳಗಾಗಿರುವುದರಿಂದ ಅವರಿಗೆ ಕೊರೋನಾ ಸೋಂಕು ತಗುಲಿದರೆ ಅದು ಅವರ ಮೇಲೆ ಇನ್ನಷ್ಟು ಗಂಭೀರ ಪರಿಣಾಮಗಳನ್ನು ಬೀರುತ್ತದೆ. ಉದಾಹರಣೆಗೆ ಶ್ವಾಸಕೋಶಗಳು ನೈಸರ್ಗಿಕವಾಗಿ ದ್ರವ ರೂಪದ ಲೋಳೆ (ಮ್ಯುಕಸ್) ಉತ್ಪತ್ತಿ ಮಾಡುತ್ತವೆ. ಆದರೆ ಧೂಮಪಾನ ಮಾಡುವಂತವರಲ್ಲಿ ದಪ್ಪನೆಯ ಮ್ಯುಕಸ್ ಗಟ್ಟಿಯಾಗಿರಲಿದ್ದು, ಅದು ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಲಾಗದು. ಈ ಮ್ಯುಕಸ್ ಶ್ವಾಸಕೋಶದೊಳಗೆ ಕಟ್ಟಿಕೊಂಡು, ಅದು ಸೋಂಕಿಗೆ ಕಾರಣವಾಗುತ್ತದೆ. ಅಲ್ಲದೆ ಅದು ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ, ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಕುಂದಿಸುತ್ತದೆ.

ಡಾ.ಯು.ಎಸ್. ವಿಶಾಲ್ ರಾವ್ ಮಾತನಾಡಿ
ಕರ್ನಾಟಕ ಸರ್ಕಾರದ ತಂಬಾಕು ನಿಯಂತ್ರಣ ಕುರಿತಾದ ಉನ್ನತ ಸಮಿತಿ ಸದಸ್ಯ ಡಾ.ಯು.ಎಸ್. ವಿಶಾಲ್ ರಾವ್, "ಧೂಮಪಾನ ಮಾಡುವಂತವರು ಸಹಜವಾಗಿಯೇ ಉಸಿರಾಟದ ತೊಂದರೆಗೆ ಅಥವಾ ಸೋಂಕುಗಳ ಅಪಾಯವನ್ನು ಹೊಂದಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಮತ್ತು ಇದರಿಂದಾಗಿ ಧೂಮಪಾನಿಗಳು ಕೋವಿಡ್-19ಗೆ ತುತ್ತಾಗುವ ಅಪಾಯ ಹೆಚ್ಚಿದೆ" ಎಂದು ಹೇಳಿದ್ದಾರೆ.
ಅಲ್ಲದೆ ಪರೋಕ್ಷ ಧೂಮಪಾನವೂ ಕೂಡ ಶ್ವಾಸಕೋಶ ಮತ್ತು ರೋಗನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದು ಹೃದಯ ಮತ್ತು ಉಸಿರಾಟದ ಸೋಂಕಿಗೂ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಧೂಮಪಾನಿಗಳು ಧೂಮಪಾನ ಮಾಡದಂತವರ ಬಳಿ ಸೇರದಿರುವುದು ಅತಿ ಮುಖ್ಯ. ಲಾಕ್ ಡೌನ್ ನಿಂದಾಗಿ ಮನೆಗಳಲ್ಲೇ ಉಳಿಯುವ ಜನರು ತಮ್ಮ ಕುಟುಂಬದ ಸದಸ್ಯರ ಮುಂದೆ ಧೂಮಪಾನ ಮಾಡುವ ಸಾಧ್ಯತೆಗಳಿದ್ದು, ಇದರಿಂದ ಅವರು ಇಡೀ ಕುಟುಂಬದವರನ್ನು ಕೋವಿಡ್ ಎದುರು ಅಪಾಯಕ್ಕೆ ಸಿಲುಕಿಸುತ್ತಾರೆ ಎಂದು ಹೇಳಿದ್ದಾರೆ.

ನಿಮ್ಹಾನ್ಸ್ ನ ವೈದ್ಯರಾದ ಡಾ. ಪ್ರತಿಮಾ
ಈ ವಿಷಯದ ಕುರಿತು ಮಾತನಾಡಿರುವ ನಿಮ್ಹಾನ್ಸ್ ನ ವೈದ್ಯರಾದ ಡಾ|| ಪ್ರತಿಮಾ ಮೂರ್ತಿ, ಕೋವಿಡ್-19ಗೆ ಧೂಮಪಾನಿಗಳು ಅಪಾಯಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ ಎಂಬುದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತಿವೆ. ಧೂಮಪಾನ ಶ್ವಾಸಕೋಶದ ಕಾರ್ಯವನ್ನು ದುರ್ಬಲಗೊಳಿಸಿ, ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ಧೂಮಪಾನಿಗಳಿಗೆ ಕೋವಿಡ್ ಸೋಂಕು ತಗುಲಿದರೆ ಅವರಲ್ಲಿ ಆರೋಗ್ಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿದ್ದು, ಅಂತವರು ಮರಣ ಹೊಂದುವ ಸಾಧ್ಯತೆಗಳು ಹೆಚ್ಚಿರುತ್ತದೆ.
ಧೂಮಪಾನಿಗಳಿಗೆ ಕೋವಿಡ್ ಸೋಂಕು ತಗುಲದೇ ಇದ್ದರೂ ಸಹ ಧೂಮಪಾನವನ್ನು ವರ್ಜಿಸಲು ಇದು ಸೂಕ್ತವಾದ ಸಮಯ. ಇದರಿಂದ ಅವರ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಕೆಲವೇ ತಿಂಗಳುಗಳಲ್ಲಿ ಅವರ ಶ್ವಾಸಕೋಶದ ಕಾರ್ಯನಿರ್ವಹಣೆ ಸುಧಾರಿಸುತ್ತದೆ. ಕೋವಿಡ್ ನಿಂದ ಅಪಾಯ ತಪ್ಪುವುದಲ್ಲದೆ, ಶ್ವಾಸಕೋಶ, ಹೃದಯ ಮತ್ತು ದೇಹದ ಇತರೆ ಅಂಗಗಳಿಗೂ ಅನುಕೂಲವಾಗುತ್ತದೆ. ಈ ಸಮಯವನ್ನು ಬಳಸಿಕೊಂಡು ಧೂಮಪಾನವನ್ನು ತ್ಯಜಿಸುವುದು ಸೂಕ್ತ.

ಮಾಯಾ ಅನ್ನಿ ಇಲಿಯಾಸ್ ಮಾತನಾಡಿ
ಮೂಮೆಂಟ್ ಫಾರ್ ಆಲ್ಟ್ರನೇಟೀವ್ಸ್ ಅಂಡ್ ಯೂತ್ ಅವೇರ್ ನೆಸ್(ಮಾಯಾ) ತಂಬಾಕು ಮುಕ್ತ ನಗರಿಯ ಯೋಜನೆಯ ಮುಖ್ಯಸ್ಥೆ ಮಾಯಾ ಅನ್ನಿ ಇಲಿಯಾಸ್ "ಸಾಮಾನ್ಯವಾಗಿ ಧೂಮಪಾನ ಮಾಡುವ ವ್ಯಕ್ತಿಗಳು ಸಿಗರೇಟುಗಳನ್ನು ಹಂಚಿಕೊಳ್ಳುವ ಪ್ರವೃತ್ತಿ ಇರುತ್ತದೆ, ಇದರಿಂದ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ. ಬಿಡಿ ಬಿಡಿಯಾಗಿ ಅಂದರೆ ಒಂದೊಂದೇ ಸಿಗರೇಟು ಮಾರಾಟ ನಿಷೇಧಿಸಿದ್ದರೂ ಸಹ ಮಾರಾಟಗಾರರು ನಿಯಮ ಉಲ್ಲಂಘಿಸಿ ಮಾರಾಟ ಮಾಡುತ್ತಿರುವುದೂ ಕೂಡ ಕಾನೂನು ಉಲ್ಲಂಘನೆಯಾಗಿದೆ. ಜಾರಿ ಅಧಿಕಾರಿಗಳು ಕೂಡಲೇ ಬಿಡಿ ಬಿಡಿಯಾಗಿ ಸಿಗರೇಟು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ'' ಎಂದರು.

ಇದು ಧೂಮಪಾನ ತ್ಯಜಿಸಲು ಸಕಾಲ
''ಇದು ಧೂಮಪಾನ ತ್ಯಜಿಸಲು ಸಕಾಲ, ಧೂಮಪಾನ ಮಾಡುತ್ತಿರುವವರು ಈ 21 ದಿನಗಳ ಕೊರೋನಾ ಸವಾಲನ್ನು ಬಳಸಿಕೊಂಡು ವ್ಯಸನ ಮುಕ್ತರಾಗುವುದು ಒಳ್ಳೆಯದು'' ಎಂದು ತಜ್ಞರು ತಿಳಿಸಿದ್ದಾರೆ.
ಧೂಮಪಾನ ತ್ಯಜಿಸಲು ಯಾವುದೇ ಸಹಾಯ ಬೇಕಿದ್ದರೆ ಆರೋಗ್ಯ ರಕ್ಷಣಾ ಸೇವೆ ಒದಗಿಸುವವರಿಗೆ ಅಥವಾ ತಂಬಾಕು ಕ್ವಿಟ್-ಲೈನ್ (1800112356)ಗೆ ಕರೆ ಮಾಡಬಹುದು ಅಥವಾ ''mCessation tobacco service on 011-22901701" ಮಿಸ್ಡ್ ಕಾಲ್ ನೀಡಬಹುದು.












Click it and Unblock the Notifications