ಜಲ್ಲಿ ತುಂಬಿದ ಟಿಪ್ಪರ್ ಲಾರಿ ಮುಗುಚಿ ಬಿದ್ದು ಆರು ಮಂದಿ ಸಾವು: ಎರಡು ಕಾರು ಜಖಂ
ಬೆಂಗಳೂರು, ಜ. 10: ನಗರದ ಕುಂಬಳಗೋಡು ಸಮೀಪ ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಮಗುಚಿ ಕಾರಿನ ಮೇಲೆ ಬಿದ್ದ ಪರಿಣಾಮ ಆರು ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಬೆಂಗಳೂರು ಮೈಸೂರು ರಸ್ತೆಯ ಕುಂಬಳಗೋಡು ಸಮೀಪದ ಕಣಿಮಿಣಿಕೆ ಬಳಿ ಈ ಅವಘಡ ಸಂಭವಿಸಿದೆ. ಇದರಿಂದ ಎರಡು ಕಾರಿನಲ್ಲಿದ್ದ ಐವರು ಮೃತಪಟ್ಟಿದ್ದು, ಬೈಕ್ ಸವಾರ ಕೂಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಸ್ವಿಫ್ಟ್ ಕಾರಿನಲ್ಲಿದ್ದ ನಿಖಿತಾ ರಾಣಿ (29), ವೀಣಮ್ಮ ( 42), ಇಂದ್ರಕುಮಾರ್ (14), ಕೀರ್ತಿ ಕುಮಾರ್ (40) ಮೃತಪಟ್ಟಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಟೊಯೊಟಾ ಸಿಬ್ಬಂದಿ ಶಿವಪ್ರಕಾಶ್ ಹಾಗೂ ಬೈಕ್ ಸವಾರ ಜಿತಿನ್ ಬಿ. ಜಾರ್ಜ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಎರಡು ಕಾರು ಒಂದು ಬೈಕ್ ಜಖಂ ಆಗಿದೆ.

ಮೈಸೂರು ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಜಲ್ಲಿ ತುಂಬಿದ್ದ ಟಿಪ್ಪರ್ ಲಾರಿ ಅತಿ ವೇಗದಿಂದ ಬಂದಿದೆ. ಈ ವೇಳೆ ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿ ಪಲ್ಟಿ ಹೊಡೆದಿದ್ದು, ಜಲ್ಲಿ ಎರಡು ಕಾರಿನ ಮೇಲೆ ಬಿದ್ದಿದೆ. ಈ ವೇಳೆ ಸ್ವಿಫ್ಟ್ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಪಕ್ಕದಲ್ಲಿದ್ದ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಲಾರಿ ಬಿದ್ದ ಪರಿಣಾಮ ಬೈಕ್ ಸವಾರ ಕೂಡ ಸಾವನ್ನಪಿದ್ದಾನೆ. ಘಟನಾ ಸ್ಥಳಕ್ಕೆ ಕುಂಬಳಗೋಡು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹತ್ತು ಕಿ.ಮೀ. ಟ್ರಾಫಿಕ್ ಜಾಮ್: ಈ ಅವಘಡದಿಂದ ಬೆಂಗಳೂರು- ಮೈಸೂರು ರಸ್ತೆಯಲ್ಲಿ ಸುಮಾರು ಹತ್ತು ಕಿ.ಮೀ. ನಷ್ಟು ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಟಿಪ್ಪರ್ ಲಾರಿಯನ್ನು ಸ್ಥಳಾಂತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications