ಐಪಿಎಸ್ ಅಧಿಕಾರಿಗಳ ಮೇಲೆ ಮತ್ತೆ ಸರ್ಕಾರದ ಕಣ್ಣು: 6 ಮಂದಿ ವರ್ಗಾವಣೆ
ಬೆಂಗಳೂರು, ಆಗಸ್ಟ್ 2: ನೂತನ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ರಾಜ್ಯದಲ್ಲಿ ಆರಂಭವಾದ ವರ್ಗಾವಣೆಯ ಪರ್ವ ಮುಂದುವರಿದಿದೆ.
ವಿವಿಧ ಅಕಾಡೆಮಿಗಳ ರದ್ದು, ನಿಗಮ-ಮಂಡಳಿಗಳು ಸೇರಿದಂತೆ ಅನೇಕ ಇಲಾಖೆಗಳಲ್ಲಿನ ಅಧಿಕಾರಿಗಳು, ಅಧ್ಯಕ್ಷರ ವಜಾ ಮತ್ತು ವರ್ಗಾವಣೆಯ ಆದೇಶಗಳು ಸರ್ಕಾರದಿಂದ ಒಂದರ ಹಿಂದೊಂದರಂತೆ ಬರುತ್ತಿವೆ. ಶುಕ್ರವಾರವೂ ಅಧಿಕಾರಿಗಳ ವರ್ಗಾವಣೆ ನಡೆದಿದ್ದು, ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಒಟ್ಟು ಆರು ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಐಜಿಪಿಯಾಗಿದ್ದ ಹೇಮಂತ್ ನಿಂಬಾಳ್ಕರ್ ಅವರನ್ನು ಆಡಳಿತ ವಿಭಾಗದ ಐಜಿಪಿಯನ್ನಾಗಿ ವರ್ಗಾಯಿಸಲಾಗಿದೆ. ಅಗ್ನಿಶಾಮಕದಳದ ಡಿಐಜಿಪಿ ಬಿ.ಆರ್. ರವಿಕಾಂತೇಗೌಡ ಅವರನ್ನು ಬೆಂಗಳೂರು ಪಶ್ಚಿಮ ವಿಭಾಗದ ಜಂಟಿ ಆಯುಕ್ತರನ್ನಾಗಿ ನೇಮಿಸಲಾಗಿದೆ.

ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್ ಅವರನ್ನು ಅಗ್ನಿಶಾಮಕ ದಳದ ಐಜಿಪಿಯನ್ನಾಗಿ ವರ್ಗಾಯಿಸಲಾಗಿದೆ. ಡಿ. ದೇವರಾಜು ಅವರನ್ನು ಸಿಐಡಿಯ ಎಸ್ಪಿಯನ್ನಾಗಿ, ಅಶ್ವಿನಿ ಅವರನ್ನು ಗುಪ್ತಚರದಳದ ಡಿಸಿಪಿಯಾಗಿ ಮತ್ತು ಆರ್. ಚೇತನ್ ಅವರನ್ನು ಕರಾವಳಿ ಕಾವಲು ಪಡೆಯ ಎಸ್ಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಗುರುವಾರವಷ್ಟೇ 11 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಬೆಂಗಳೂರು ಪೊಲೀಸ್ ಆಯುಕ್ತರಾಗಿರುವ ಅಲೋಕ್ ಕುಮಾರ್ ಅವರನ್ನು ಕೆಎಸ್ಆರ್ಪಿಯ ಎಡಿಜಿಪಿಯನ್ನಾಗಿ ವರ್ಗಾಯಿಸಲಾಗಿದ್ದು, ಅವರ ಸ್ಥಾನಕ್ಕೆ ಭಾಸ್ಕರ ರಾವ್ ಅವರನ್ನು ನೇಮಿಸಲಾಗಿದೆ.












Click it and Unblock the Notifications