ಗೌಡರನ್ನು ಬಾಯ್ತುಂಬ ಹೊಗಳಿ, ಶುಭಾಶಯ ಕೋರಿದ ಸಿದ್ದು!
ಬೆಂಗಳೂರು, ಮೇ 18: ಕಳೆದೊಂದು ವಾರಕ್ಕೂ ಮುನ್ನ ದೇವೇಗೌಡರನ್ನು ಪದೇ ಪದೇ ಲೇವಡಿ ಮಾಡುತ್ತಲೇ ಇದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಗೌಡರನ್ನು ಬಾಯ್ತುಂಬ ಹೊಗಳಿ ಟ್ವೀಟ್ ಮಾಡಿದ್ದಾರೆ!
ಇಂದು ತಮ್ಮ 86 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಗೌಡರಿಗೆ ಟ್ವಿಟ್ಟರ್ ಮೂಲಕ ಶುಭಾಶಯ ಕೋರಿದ ಸಿದ್ದರಾಮಯ್ಯ, 'ನಾಡಿನ ನೆಲ, ಜಲ, ಭಾಷೆ ಬಗೆಗಿನ ನಿಮ್ಮ ಬದ್ಧತೆ ನಮಗೆಲ್ಲರಿಗೂ ಸ್ಫೂರ್ತಿದಾಯಕ' ಎಂದು ದೊಡ್ಡ ಗೌಡರನ್ನು ಹಾಡಿ ಹೊಗಳಿದ್ದಾರೆ.
ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ವಿರೋಧಪಕ್ಷದ ನಾಯಕರಾಗಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕೀರ್ತಿ ನಿಮ್ಮದು. ನಾಡಿನ ನೆಲ,ಜಲ,ಭಾಷೆ ಬಗೆಗಿನ ನಿಮ್ಮ ಬದ್ಧತೆ ನಮಗೆಲ್ಲರಿಗೂ ಸ್ಪೂರ್ತಿದಾಯಕ. ನೂರು ಕಾಲ ಆಯುಷ್ಯ- ಆರೋಗ್ಯ ನಿಮ್ಮದಾಗಲಿ. pic.twitter.com/unSy5hhJH0
— Siddaramaiah (@siddaramaiah) May 18, 2018
"ಜೆಡಿ(ಎಸ್) ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ವಿರೋಧಪಕ್ಷದ ನಾಯಕರಾಗಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿರುವ ಕೀರ್ತಿ ನಿಮ್ಮದು. ನಾಡಿನ ನೆಲ, ಜಲ, ಭಾಷೆ ಬಗೆಗಿನ ನಿಮ್ಮ ಬದ್ಧತೆ ನಮಗೆಲ್ಲರಿಗೂ ಸ್ಫೂರ್ತಿದಾಯಕ. ನೂರು ಕಾಲ ಆಯುಷ್ಯ- ಆರೋಗ್ಯ ನಿಮ್ಮದಾಗಲಿ." ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ತಿರುಪತಿಯಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ದೇವೇಗೌಡ್ರು
ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಿದ್ದ ದೇವೇಗೌಡರು ಇಂದು ತಮ್ಮ ಜನ್ಮದಿನವನ್ನು ಆಂಧ್ರಪ್ರದೇಶದ ತಿರುಪತಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 15 ರಂದು ಹೊರಬಿದ್ದಿದ್ದು 78 ಸ್ಥಾನ ಗಳಿಸಿರುವ ಕಾಂಗ್ರೆಸ್ ಪಕ್ಷ ತಾನು 38 ಸ್ಥಾನ ಗೆದ್ದಿರುವ ಜೆಡಿಎಸ್ ಗೆ ಸರ್ಕಾರ ರಚಿಸಲು ಬೆಂಬಲ ನೀಡುವುದಾಗಿ ಘೋಷಿಸಿತ್ತು. ಹಾವು ಮುಂಗುಸಿಯಂತಿದ್ದ ಸಿದ್ದರಾಮಯ್ಯ ಮತ್ತು ದೇವೇಗೌಡರು ಈ ಮೂಲಕ ದೋಸ್ತಿ ಬೆಳೆಸಲು ನಿರ್ಧರಿಸಿದ್ದಾರೆ.