ಸಿದ್ದರಾಮಯ್ಯ ಪುತ್ರ ಯತೀಂದ್ರರ 'ಮ್ಯಾಟ್ರಿಕ್ಸ್' ಹಿನ್ನಲೆ ಏನು?
ಬೆಂಗಳೂರು, ಏಪ್ರಿಲ್ 15: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಜನಪಕ್ಷಪಾತದ ವಿರುದ್ಧ ವಿರೋಧ ಪಕ್ಷಗಳು ಕಾನೂನು ಸಮರ ಸಾರಲು ಸಜ್ಜಾಗಿವೆ. ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅವ ಮ್ಯಾಟ್ರಿಕ್ಸ್ ಇಮೇಜಿಂಗ್ ಸಲ್ಯೂಷನ್ಸ್ ಲಿಮಿಟೆಡ್ ವಿವಾದ ಇನ್ನೂ ಬೂದಿ ಮುಚ್ಚಿದ ಕೆಂಡದಂತೆ ಇದೆ.
ಡಾ. ಯತೀಂದ್ರ ಅವರು ನಿರ್ದೇಶಕರಾಗಿರುವ ಮ್ಯಾಟ್ರಿಕ್ಸ್ ಸಂಸ್ಥೆಗೆ ಸರ್ಕಾರಿ ಟೆಂಡರ್ ಗಳು ಸುಲಭವಾಗಿ ಲಭ್ಯವಾಗಿದ್ದು ಹೇಗೆ? ಸಿಎಂ, ಪುತ್ರ ವ್ಯಾಮೋಹಿ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದ್ದು ಏಕೆ? ಮ್ಯಾಟ್ರಿಕ್ಸ್ ಸಂಸ್ಥೆ ಹಿನ್ನಲೆ ಏನು? ಈ ಬಗ್ಗೆ ಇಲ್ಲಿ ಓದಿರಿ...[ಸಿದ್ದರಾಮಯ್ಯ ಮಗನಿಗೆ ಸಿಕ್ಕಿದ್ದು ಇದೊಂದೇ ಪ್ರಾಜೆಕ್ಟಾ?]
ಮ್ಯಾಟ್ರಿಕ್ಸ್ ಸಂಸ್ಥೆ ಹಿನ್ನಲೆ: ರಮೇಶ್ ಗೌಡ ಹಾಗೂ ಸತೀಶ್ ಪ್ರಸಾದ್ ಎಂಬುವವರು 2009ರಲ್ಲಿ ಮ್ಯಾಟ್ರಿಕ್ಸ್ ಇಮೆಜಿಂಗ್ ಸಲ್ಯೂಷನ್ ಸ್ಥಾಪಿಸಿದರು. 2014ರಲ್ಲಿ ಡಾ. ಯತೀಂದ್ರ ಅವರನ್ನು ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು. ಸೆಪ್ಟೆಂಬರ್ 19, 2015ರಂದು ಬಿಎಂಆರ್ ಸಿಐನಿಂದ ಕ್ಲಿನಿಕಲ್ ಲ್ಯಾಬೊರೇಟರಿ ಸ್ಥಾಪನೆಗಾಗಿ ಬಿಡ್ಡಿಂಗ್ ಆಹ್ವಾನಿಸಲಾಗಿತ್ತು. ಈ ಬಿಡ್ಡಿಂಗ್ ಸುಲಭವಾಗಿ ಮ್ಯಾಟ್ರಿಕ್ಸ್ ಸಂಸ್ಥೆ ಪಾಲಾಯಿತು.

ಡಾ ಯತೀಂದ್ರ ಅವರು ಮಾತನಾಡಿ
ಡಾ ಯತೀಂದ್ರ ಅವರು ಮಾತನಾಡಿ, ಇಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಸ್ವಜನಪಕ್ಷಪಾತವು ಇಲ್ಲ. ಹಾಗೇನಾದರೂ ತಪ್ಪು ಕಂಡು ಬಂದಲ್ಲಿ ನಾನು ನಿರ್ದೇಶಕ ಹುದ್ದೆಯಿಂದ ಕೆಳಗಿಳಿಯುತ್ತೇನೆ ಎಂದಿದ್ದಾರೆ. ಯತೀಂದ್ರ ಅವರು ಹುದ್ದೆ ತೊರೆಯುವ ಅಗತ್ಯವಿಲ್ಲ ಎಂದು ಮ್ಯಾಟ್ರಿಕ್ಸ್ ಸಂಸ್ಥೆ ಹೇಳಿದೆ.

ಈ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನಿಸಿವೆ
ಈ ಬಗ್ಗೆ ವಿರೋಧ ಪಕ್ಷಗಳು ಪ್ರಶ್ನಿಸಿವೆ. ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಅವರು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆದಿದೆ ಎನ್ನುವುದಾದರೆ, ತನಿಖೆಗೆ ಆದೇಶಿಸಲು ಹಿಂದು ಮುಂದು ನೋಡುತ್ತಿರುವುದೇಕೆ? ಎಂದಿದ್ದಾರೆ.

ಟೆಂಡರ್ ಕರೆದ ಮೇಲೆ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಏನಾಯ್ತು?
ಟೆಂಡರ್ ಕರೆದ ಮೇಲೆ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ನಾಲ್ಕು ಕಂಪನಿಗಳು ಪಾಲ್ಗೊಂಡಿದ್ದವು, ಮ್ಯಾಟ್ರಿಕ್ಸ್ ಹಾಗೂ ಎಚ್ಎಲ್ ಎಲ್ ಕಂಪನಿ ಅಂತಿಮ ಬಿಡ್ಡಿಂಗ್ ನಲ್ಲಿತ್ತು. ಎಚ್ಎಲ್ಎಲ್ ಸಂಸ್ಥೆ ಸರಿಯಾದ ಸಮಯಕ್ಕೆ ಡಿಮ್ಯಾಂಡ್ ಡ್ರಾಫ್ಟ್ ನೀಡದ ಕಾರಣ ಬಿಡ್ಡಿಂಗ್ ನಿಂದ ಹೊರ ಬೀಳಬೇಕಾಯಿತು.

ಟೆಂಡರ್ ಗೂ ಮುನ್ನವೆ ಆಕ್ಷೇಪವಿತ್ತು
ಸರ್ಕಾರಿ ಹಿರಿಯ ವೈದ್ಯಾಧಿಕಾರಿಗಳು ಟೆಂಡರ್ ಪ್ರಕ್ರಿಯೆ ಹಾಗೂ ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಸರ್ಕಾರಿ ಸವಲತ್ತು ನೀಡಿ ಖಾಸಗಿ ಸಂಸ್ಥೆಗಳಿಗೆ ಲಾಭ ಒದಗಿಸಲು ತಂತ್ರ ರೂಪಿಸಲಾಗಿದೆ ಎಂದು ಆರೋಪಿಸಲಾಗಿತ್ತು.
ಮೈಸೂರು ಮೆಡಿಕಲ್ ಕಾಲೇಜ್ ವತಿಯಿಂದ ಬಂದಿದ್ದ ಆಕ್ಷೇಪವನ್ನು ತಳ್ಳಿ ಹಾಕಲಾಗಿತ್ತು. 2009ರಲ್ಲಿ ಮೈಸೂರು ಮೆಡಿಕಲ್ ಕಾಲೇಜ್ ನಲ್ಲಿ ಖಾಸಗಿ ಲ್ಯಾಬ್ ಸ್ಥಾಪನೆಗೆ ಅವಕಾಶ ಒದಸಿದ್ದನ್ನು ಪ್ರಸ್ತಾಪಿಸಲಾಗಿತ್ತು.












Click it and Unblock the Notifications