ಕ್ರಿಯಾಲೋಪ ಎತ್ತಿದ ಸಿದ್ದರಾಮಯ್ಯ: ಬಿಜೆಪಿಯಿಂದ ಗದ್ದಲ
Recommended Video
ಬೆಂಗಳೂರು, ಜುಲೈ 18: ಇಂದಿನ ವಿಧಾನಸಭೆ ಕಲಾಪ ಆರಂಭವಾಗಿ ಸ್ವಲ್ಪ ಸಮಯದಲ್ಲೇ ಸಿದ್ದರಾಮಯ್ಯ ಅವರು ಕಾರ್ಯಚ್ಯುತಿ (ಪಾಯಿಂಟ್ ಆಫ್ ಆರ್ಡರ್) ಅನ್ನು ಎತ್ತಿದರು.
ಮುಖ್ಯ ಮಂತ್ರಿ ಅವರ ಭಾಷಣದ ಮಧ್ಯೆ ಎದ್ದುನಿಂತ ಸಿದ್ದರಾಮಯ್ಯ ಅವರು, 'ವ್ಹಿಪ್ ನೀಡುವುದು ಶಾಸಕಾಂಗ ಪಕ್ಷದ ನಾಯಕರಾಗಿರುವ ನನ್ನ ಹಕ್ಕು, ಆದರೆ ಸುಪ್ರೀಂಕೋರ್ಟ್ ತೀರ್ಪು ನನ್ನ ಹಕ್ಕಿಗೆ ಚ್ಯುತಿ ತಂದಿದೆ. ಇಲ್ಲಿ ಕ್ರಿಯಾಲೋಪವಾಗಿದ್ದು, ನಿಮ್ಮ (ಸ್ಪೀಕರ್) ಅವರ ಸ್ಪಷ್ಟನೆ ಬೇಕಿದೆ ಎಂದು ಹೇಳಿದರು.
ಅತೃಪ್ತ ಶಾಸಕರು ಒಟ್ಟಿಗೆ ಬಂದು ರಾಜೀನಾಮೆ ಸಲ್ಲಿಸಿದ್ದಾರೆ, ಒಟ್ಟಿಗೆ ಒಂದೇ ವಾಹನದಲ್ಲಿ ತೆರಳಿದ್ದಾರೆ. ಸಂವಿಧಾನಬದ್ಧವಾಗಿ ನಿರ್ಮಿತವಾಗಿರುವ ಸರ್ಕಾರವನ್ನು ಉರುಳಿಸಲು ಮಾಡುತ್ತಿರುವ ಕುಟಿಲ ಪ್ರಯತ್ನ ಇದು ಎಂಬುದು ಅವರ ವರ್ತನೆಯಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಹೀಗಿದ್ದಾಗ ಶಾಸಕಾಂಗ ಪಕ್ಷದ ನಾಯಕನಾಗಿ ನಾನು ವ್ಹಿಪ್ ನೀಡಲೇ ಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.
ಇನ್ನೊಂದು ಪ್ರಮುಖ ವಿಷಯ ಎತ್ತಿದ ಸಿದ್ದರಾಮಯ್ಯ, ಸುಪ್ರೀಂಕೋರ್ಟ್ನಲ್ಲಿ ಅತೃಪ್ತ 10 ಶಾಸಕರು ಹಾಕಿದ್ದ ಅರ್ಜಿಯಲ್ಲಿ, ಸ್ಪೀಕರ್ ಹಾಗೂ ಮುಖ್ಯಮಂತ್ರಿ ಅವರನ್ನು ರೆಸ್ಪಾಂಡೆಂಟ್ ಮಾಡಿತ್ತು, ಆದರೆ ಶಾಸಕಾಂಗ ಪಕ್ಷದ ಅಧ್ಯಕ್ಷನಾಗಿದ್ದ ನನ್ನನ್ನಾಗಲಿ ಅಥವಾ ಪಕ್ಷವನ್ನಾಗಲಿ ರೆಸ್ಪಾಂಡೆಂಟ್ ಮಾಡಿರಲಿಲ್ಲ ಎಂದು ಅವರು ಸದನಕ್ಕೆ ತಿಳಿಸಿದ್ದರು.

ವ್ಹಿಪ್ ನೀಡುವುದು ನಮ್ಮ ಹಕ್ಕು: ಸಿದ್ದರಾಮಯ್ಯ
ಶೆಡ್ಯೂಲ್ 10 (ಪಕ್ಷಾಂತರ ಕಾಯ್ದೆ)ಯು ಸಂವಿಧಾನವು ಪಕ್ಷಗಳಿಗೆ ನೀಡಿದ ಹಕ್ಕಾಗಿದ್ದು, ಪ್ರಜಾಪ್ರಭುತ್ವವು ಕಲುಷಿತಗೊಳ್ಳದೆ ತಡೆಯಲು ಪಕ್ಷಾಂತರ ಕಾಯ್ದೆಯನ್ನು ಸೇರಿಸಲಾಗಿದೆ. ಪಕ್ಷಾಂತರ ಕಾಯ್ದೆಗೆ ಯಾವುದೇ ತಿದ್ದುಪಡಿಯನ್ನು ತಂದಿಲ್ಲ ಹಾಗೂ ಸುಪ್ರೀಂಕೋರ್ಟ್ ಸಹ ಪಕ್ಷಾಂತರ ನಿಷೇಧ ಕಾಯ್ದೆಯ ಬಗ್ಗೆ ಯಾವುದೇ ವ್ಯತಿರಿಕ್ತ ತೀರ್ಪು ನೀಡಿಲ್ಲ ಹಾಗಾಗಿ ವ್ಹಿಪ್ ನೀಡುವುದು ನನ್ನ ಹಕ್ಕಾಗಿದೆ ಎಂದು ಸಿದ್ದರಾಮಯ್ಯ ಸದನಕ್ಕೆ ಹೇಳಿದರು.

ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ವಿಸ್ತಾರವಾಗಿ ತಿಳಿಸಿದ ಸಿದ್ದರಾಮಯ್ಯ
ಸಿದ್ದರಾಮಯ್ಯ ಅವರು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದ ಬಗೆ, ಬಿಹಾರದ ಗಯಾರಾಮ್ ಅವರು ದಿನವೊಂದರಲ್ಲೇ ಮೂರು ಪಕ್ಷ ಬದಲಾವಣೆ ಮಾಡಿದ್ದು, ಆಗ ನಡೆದ ಇನ್ನಿತರೆ ಬೆಳವಣಿಗೆಗಳು, ಮಧು ದಂಡಾವತೆ ಅವರು ಪಕ್ಷಾಂತರ ನಿಷೇಧ ಕಾಯ್ದೆ ಯನ್ನು ಬೆಂಬಲಿಸದ ಬಗೆಯನ್ನು ವಿವರಿಸಿದರು.

ಸಿದ್ದರಾಮಯ್ಯ ಮಾತಿಗೆ ಮಾಧುಸ್ವಾಮಿ ಆಕ್ಷೇಪ
ಸಿದ್ದರಾಮಯ್ಯ ಅವರು ಕಾರ್ಯಚ್ಯುತಿಯನ್ನು ಬಹಳ ಸುದೀರ್ಘವಾಗಿ ಮಂಡಿಸುತ್ತಿದ್ದಾರೆ ಎಂದು ಬಿಜೆಪಿಯ ಮಾಧುಸ್ವಾಮಿ ಅವರು ಪದೇ-ಪದೇ ಅಡ್ಡಿಪಡಿಸಿದರು. ಕೊನೆಗೆ ತಮಗೆ ಸಿಕ್ಕ ಅವಕಾಶದಲ್ಲಿ ಸಿದ್ದರಾಮಯ್ಯ ಅವರು ಎತ್ತಿರುವ ವಿಷಯ ಸಂದರ್ಭೋಚತವಲ್ಲ, ಈಗ ವಿಶ್ವಾಸಮತ ಯಾಚನೆ ಬಗ್ಗೆ ಮಾತ್ರವೇ ಚರ್ಚೆ ಆಗಲಿ ಎಂದು ವಾದ ಮಂಡಿಸಿದರು.

ಸಿದ್ದರಾಮಯ್ಯ ಮಾತಿಗೆ ಬಿಜೆಪಿ ಸ್ವಾಗತ
ಸಿದ್ದರಾಮಯ್ಯ ಮಾತಿನ ತಪ್ಪಿ ಬಾಯಿ ತಪ್ಪಿ, ನಾನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಎಂಬುದರ ಬದಲಾಗಿ 'ನಾನು ವಿರೋಧ ಪಕ್ಷದ ನಾಯಕ' ಎಂದು ಹೇಳಿದರು. ಈ ಮಾತಿಗೆ ಬಿಜೆಪಿ ಶಾಸಕರು ಮೇಜು ತಟ್ಟಿ ಸ್ವಾಗತಿಸಿದರು. ಇದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯಿಸಿ 'ನಿಮಗೆ ಬಹಳ ಸಂತೋಷ ಆಗಿರಬೇಕು, ಸಿಎಂ ಹೇಳಿದಂತೆ ನೀವೆಲ್ಲಾ ಬಹಳ ಆತುರದಲ್ಲಿದ್ದೀರಿ' ಎಂದರು.












Click it and Unblock the Notifications