ಆಪರೇಷನ್ ಕಮಲ ಆಗ ಆಗಿತ್ತು, ಈಗ ಬಿಜೆಪಿಗೆ ಹಗಲು ಕನಸು: ಸಿದ್ದರಾಮಯ್ಯ
Recommended Video

ಬೆಂಗಳೂರು, ಡಿಸೆಂಬರ್ 6: ಬೆಳಗಾವಿ ಅಧಿವೇಶನ ಮತ್ತು ಐದು ರಾಜ್ಯಗಳ ಚುನಾವಣಾ ಫಲಿತಾಂಶ ಸಮೀಪಿಸುತ್ತಿರುವಂತೆಯೇ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗುವ ಚರ್ಚೆ ಮತ್ತೆ ಕಾವು ಪಡೆದುಕೊಂಡಿದೆ.
ಬೆಳಗಾವಿ ಅಧಿವೇಶನ ಮುಗಿಯುವುದರ ಒಳಗೆ ಸರ್ಕಾರ ಉರುಳಿ ಬೀಳಲಿದೆ ಎಂದು ಬಿಜೆಪಿ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅತ್ತ ಕಾಂಗ್ರೆಸ್- ಜೆಡಿಎಸ್ ಪಾಳಯದಲ್ಲಿ ಆಪರೇಷನಲ್ ಕಮಲದ ಭೀತಿ ಮೂಡಿದೆ.
ಸಚಿವ ಸ್ಥಾನದ ಆಕಾಂಕ್ಷಿಯಾಗಿರುವ ಅತೃಪ್ತ ಶಾಸಕರನ್ನು ಬಿಜೆಪಿ ನಾಯಕರು ಭೇಟಿ ಮಾಡುತ್ತಿರುವುದು ಆಪರೇಷನಲ್ ಕಮಲದ ಸಾಧ್ಯತೆಗಳ ಬಗ್ಗೆ ಅನುಮಾನ ಮೂಡಿಸಿದೆ.
ಈ ಮಧ್ಯೆಯೇ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ಸಮಿತಿ ಸಭೆಯಲ್ಲಿ ಡಿ. 22ಕ್ಕೆ ಸಂಪುಟ ವಿಸ್ತರಣೆಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅವರು ಸರ್ಕಾರ ಪತನವಾಗುವ ಮತ್ತು ಆಪರೇಷನ್ ಕಮಲದ ಸುದ್ದಿಗಳ ಬಗ್ಗೆ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
|
ಭೂಕಂಪ ಆಗುವುದು ಯಾವ ದೇಶದಲ್ಲಿ?
ಯಾರದ್ದೋ ಕಿವಿಮಾತು ಕೇಳಿಕೊಂಡು ರಾಜ್ಯದಲ್ಲಿ ಸರ್ಕಾರ ಪತನವಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದಾರೆ. ಈ ಬಗ್ಗೆ ಅವರಿಗೆ ಗೊತ್ತಿದ್ದರೆ ಅದೆಲ್ಲ ಯಡಿಯೂರಪ್ಪನವರಿಗೆ ಚೆನ್ನಾಗಿಯೇ ಗೊತ್ತು ಎಂದು ಯಾಕೆ ಹೇಳಿದ್ದಾರೆ? ಭೂಕಂಪ ಆಗಲಿದೆ ಎಂದು ಅವರು ಹೇಳಿದ್ದಾರೆ, ಯಾವ ದೇಶದಲ್ಲಿಯಂತೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
|
ಯಾರೂ ಬಿಜೆಪಿಗೆ ಹೋಗುವುದಿಲ್ಲ
ಮಾಜಿ ಸಚಿವ ಸತೀಶ್ ಜಾರಕಿಹೋಳಿಯವರು ಸೇರಿದಂತೆ ಯಾವೊಬ್ಬ ಕಾಂಗ್ರೆಸ್ ಶಾಸಕರೂ ಬಿಜೆಪಿಗೆ ಹೋಗುವುದಿಲ್ಲ. ನಾನು ಅವರೊಂದಿಗೆ ಸಂಪರ್ಕದಲ್ಲಿದ್ದೇನೆ, ಅವರಿಗೆ ನಮ್ಮಲ್ಲಿ ಪಕ್ಷ ತೊರೆಯುವಂತಹ ಯಾವ ಸಮಸ್ಯೆಗಳು ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
|
ಬಿಜೆಪಿ ಹಗಲು ಕನಸು
ಮೈತ್ರಿಕೂಟದ ಎಲ್ಲಾ ಶಾಸಕರು ನಮ್ಮೊಂದಿಗಿದ್ದಾರೆ, ಯಾವೊಬ್ಬ ಕಾಂಗ್ರೆಸ್ ಇಲ್ಲವೆ ಜೆಡಿಎಸ್ ಶಾಸಕರು ಪಕ್ಷ ತೊರೆಯುವುದಿಲ್ಲ. ಇವೆಲ್ಲ ಬಿಜೆಪಿ ನಾಯಕರ ಹಗಲು ಕನಸು. ಹಿಂದೆ ಅವರು ಆಪರೇಷನ್ ಕಮಲ ಮಾಡಿ ಯಶಸ್ವಿಯಾಗಿದ್ದರು, ಈಗಲೂ ಅದೇ ಭ್ರಮೆಯಲ್ಲಿದ್ದಾರೆ. ಆದರೆ ಈ ಬಾರಿ ಹಾಗಾಗಲು ನಾವು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
|
ಡಿ. 22ರಂದು ಸಂಪುಟ ವಿಸ್ತರಣೆ
ಇಂದು ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಈ ತಿಂಗಳ 22ರಂದು ಸಂಪುಟ ವಿಸ್ತರಣೆ ಮಾಡುವ ತೀರ್ಮಾನ ಕೈಗೊಳ್ಳಲಾಯಿತು. ಅದಕ್ಕಿಂತ ಮೊದಲು ರಾಹುಲ್ ಗಾಂಧಿಯವರೊಂದಿಗೆ ಚರ್ಚಿಸಿ ಖಾತೆ ಹಂಚಿಕೆ ನಿರ್ಧರಿಸಲಾಗುವುದು. ಅದೇ ದಿನ ನಿಗಮ ಮಂಡಳಿಗಳಿಗೂ ಅಧ್ಯಕ್ಷರನ್ನು ನೇಮಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.












Click it and Unblock the Notifications