ರಾಜ್ಯದಲ್ಲಿ ಮುಂಗಾರು ಚುರುಕು, ಬೆಂಗಳೂರಲ್ಲೂ ಮಳೆ
ಬೆಂಗಳೂರು, ಆಗಸ್ಟ್ 8: ಶ್ರಾವಣ ಸಮೀಪಿಸುತ್ತಿದ್ದಂತೆ ರಾಜ್ಯಾದ್ಯಂತ ವಾರಗಳ ಬಳಿಕ ಮುಂಗಾರು ಚುರುಕಾಗಿದ್ದು, ಬೆಂಗಳೂರಲ್ಲೂ ಬುಧವಾರ ಬೆಳಗಿನ ಜಾವದಿಂದಲೇ ಮಳೆ ಆರಂಭವಾಗಿದೆ.
ಮೆಜೆಸ್ಟಿಕ್, ಜಯನಗರ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಕೆಂಗೇರಿ, ಯಲಹಂಕ, ಹೆಬ್ಬಾಳ, ವಿಧಾನಸೌಧ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಮುಂಗಾರು ಆರಂಭ ಮುನ್ನವೇ ಬೆಂಗಳೂರಲ್ಲಿ ಪ್ರತಿನಿತ್ಯವೂ ಉತ್ತಮ ಮಳೆಯಾಗುತ್ತಿತ್ತು.
ಆದರೆ ಮಲೆನಾಡು ಕರಾವಳಿ ಭಾಗಗಳಲ್ಲಿ ಮಳೆ ಆರಂಭವಾದ ಬಳಿಕ ಬೆಂಗಳೂರಲ್ಲಿ ಮಳೆ ಕಣ್ಮರೆಯಾಗಿತ್ತು. ಹಲವು ಬಾರಿ ಒಂದೆರೆಡು ಉತ್ತಮ ಮಳೆಯಾಗಿತ್ತು. ಆದರೆ ಕಳೆದ ಒಂದು ತಿಂಗಳಿನಿಂದಲೂ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು, ಉಷ್ಣಾಂಶದ ಪ್ರಮಾಣದಲ್ಲಿ ಏರಿಕೆಯಾಗಿರಲಿಲ್ಲ. ಬದಲಾಗಿ ಚಳಿಗಾಲದಲ್ಲಿರುವ ರೀತಿ ಚಳಿ ಆವರಿಸಿಕೊಂಡಿತ್ತು.
ಇದೀಗ ಬುಧವಾರದಿಂದ ಮಳೆ ಆರಂಭವಾಗಿದ್ದು, ಚಳಿಯೂ ಹೆಚ್ಚಾಗಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 25.4 ಡಿಗ್ರಿ ಸೆಲ್ಸಿಯಸ್, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್, ಕೆಐಎಎಲ್ನಲ್ಲಿ ಗರಿಷ್ಠ 25.8ಡಿಗ್ರಿ ಸೆಲ್ಸಿಯಸ್, ಗರಿಷ್ಠ 19.6 ಡಿಗ್ರಿ ಸೆಲ್ಸಿಯಸ್, ಎಚ್ಎಎಲ್ನಲ್ಲಿ ಗರಿಷ್ಠ26.0 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಇನ್ನು ಮುಂದಿನ 48 ಗಂಟೆಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.