ಯಡಿಯೂರಪ್ಪ ನಿವಾಸದ ಮುಂದೆ ಹೊಸಕೋಟೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ
ಬೆಂಗಳೂರು, ಸೆಪ್ಟೆಂಬರ್ 24: ಸಿಎಂ ಯಡಿಯೂರಪ್ಪ ನಿವಾಸದ ಮುಂದೆ ಹೊಸಕೋಟೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಯಡಿಯೂರಪ್ಪ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
ಶರತ್ ಬಚ್ಚೇಗೌಡ ಅವರಿಗೆ ಹೊಸಕೋಟೆ ಉಪಚುನಾವಣೆಯ ಬಿಜೆಪಿ ಟಿಕೆಟ್ ನೀಡಬೇಕು ಎಂದು ಒತ್ತಾಯಿಸಿ ನೂರಾರು ಕಾರ್ಯಕರ್ತರು ಬೆಳಿಗ್ಗೆಯೇ ಯಡಿಯೂರಪ್ಪ ಅವರ ಡಾಲರ್ಸ್ ಕಾಲೊನಿ ನಿವಾಸದ ಮುಂದೆ ಜಮಾಯಿಸಿದ್ದು, ಯಡಿಯೂರಪ್ಪ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಹೊಸಕೋಟೆ ಕ್ಷೇತ್ರ ಪರಿಚಯ: ಎಂಟಿಬಿಗೆ ಪ್ರತಿಷ್ಠೆ, ಕಾಂಗ್ರೆಸ್ಗೆ ಪ್ರತೀಕಾರದ ಹಂಬಲ
ಹೊಸಕೋಟೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಅನ್ನು ಎಂಟಿಬಿ ನಾಗರಾಜು ಪುತ್ರನಿಗೆ ನೀಡಲಾಗುತ್ತಿದೆ ಎನ್ನಲಾಗಿದೆ. ಹಾಗಾಗಿ ಶರತ್ ಬಚ್ಚೇಗೌಡ ಬೆಂಬಲಿಗರು ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆಗೆ ಯತ್ನಿಸಿದ್ದಾರೆ. ಕಾರ್ಯಕರ್ತರನ್ನು ತಡೆಯಲು ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.
ಇದೇ ಸಮಯದಲ್ಲಿ ಯಡಿಯೂರಪ್ಪ ನಿವಾಸದ ಒಳಗೆ ಎಂಟಿಬಿ ನಾಗರಾಜು ಸಹ ಇದ್ದು, ಟಿಕೆಟ್ಗಾಗಿ ಲಾಭಿ ಮಾಡುತ್ತಿದ್ದಾರೆ. ಹೊರಗೆ ಶರತ್ ಬಚ್ಚೇಗೌಡ ಬೆಂಬಲಿಗರು ತಮ್ಮ ನಾಯಕನಿಗೇ ಟಿಕೆಟ್ ನೀಡಬೇಕೆಂದು ಒತ್ತಾಯ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಉಪಚುನಾವಣೆ: ಹೊಸಕೋಟೆಯಲ್ಲಿ ಎಂಟಿಬಿಗೆ ಗೆಲುವು ಸುಲಭದ ತುತ್ತೇನಲ್ಲ!
ಈ ಸಂದರ್ಭದಲ್ಲಿ ಮಾತನಾಡಿದ ಹೊಸಕೋಟೆ ಬಿಜೆಪಿ ಪ್ರಮುಖರೋರ್ವರು, ಹೊಸಕೋಟೆಯಲ್ಲಿ ಸುಮಾರು ಎರಡು ದಶಕದಿಂದ ಬಚ್ಚೇಗೌಡರು ಮತ್ತು ಅವರು ಕುಟುಂಬದವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಟಿಕೆಟ್ ನೀಡದೆ ಹಣದ ಬಲಕ್ಕೆ ಮಾರುಹೋಗಿ ಎಂಟಿಬಿಗೆ ಟಿಕೆಟ್ ನೀಡಿದರೆ ಶರತ್ ಬಚ್ಚೇಗೌಡ ಪಕ್ಷೇತರವಾಗಿ ಸ್ಪರ್ಧಿಸುತ್ತಾರೆ ಎಂದರು.
ಹೊಸಕೋಟೆಯಲ್ಲಿ ಘರ್ಜಿಸಿದ ಕಾಂಗ್ರೆಸ್ ಶಾಸಕ: ರಾಜ್ಯ ರಾಜಕೀಯ ಅಯೋಮಯ
ಎಂಟಿಬಿ ನಾಗರಾಜು ವಿರುದ್ಧ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಆತ ಮೋಸದ ವ್ಯಕ್ತಿ, ಹಣ ಬಲ ಬಿಟ್ಟರೆ ಆತನ ಬಳಿ ಬೇರೆ ಇಲ್ಲ. ಆತನಿಗೆ ಬಿಜೆಪಿ ಟಿಕೆಟ್ ಕೊಟ್ಟರೆ, ಎಂಟಿಬಿ ನಾಗರಾಜು ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಬಂದು ನಿಲ್ಲುತ್ತಾರೆ ಎಂದು ಹೇಳಿದರು.