ಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಪ್ರಣಾಳಿಕೆ
ಬೆಂಗಳೂರು, ನವೆಂಬರ್ 29 : 15 ಕ್ಷೇತ್ರದ ಉಪ ಚುನಾವಣೆಯಲ್ಲಿ ಕುತೂಹಲ ಕೆರಳಿಸಿರುವ ಕ್ಷೇತ್ರ ಹೊಸಕೋಟೆ. ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ಒಟ್ಟು 17 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಬಿಜೆಪಿಯಿಂದ ಎಂಟಿಬಿ ನಾಗರಾಜ್, ಕಾಂಗ್ರೆಸ್ನಿಂದ ಪದ್ಮಾವತಿ ಸುರೇಶ್ ಕಣದಲ್ಲಿದ್ದಾರೆ. ಬಿಜೆಪಿ ಟಿಕೆಟ್ ವಂಚಿತರಾದ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಸಹ ಅವರಿಗೆ ಬೆಂಬಲ ನೀಡಿದೆ. ಇದರಿಂದಾಗಿ ಕ್ಷೇತ್ರದ ಚುನಾವಣಾ ಚಿತ್ರವಣವೇ ಬದಲಾಗಿದೆ.
'ಸ್ವಾಭಿಮಾನ'ದ ಹೆಸರಿನಲ್ಲಿ ಶರತ್ ಬಚ್ಚೇಗೌಡ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 'ಕುಕ್ಕರ್' ಗುರುತನ್ನು ಅವರಿಗೆ ಚುನಾವಣಾ ಆಯೋಗ ನೀಡಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ತ್ರಿಕೋನ ಸ್ಪರ್ಧೆ ಇದ್ದು, ಚುನಾವಣಾ ಫಲಿತಾಂಶ ಕುತೂಹಲಕ್ಕೆ ಕಾರಣವಾಗಿದೆ.
ಹೊಸಕೋಟೆ ತಾಲೂಕಿನ ಅಭಿವೃದ್ಧಿಗಾಗಿ ಶರತ್ ಬಚ್ಚೇಗೌಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಒಟ್ಟು 16 ಅಂಶಗಳನ್ನ ಪ್ರಣಾಳಿಕೆ ಒಳಗೊಂಡಿದೆ. ಕ್ಷೇತ್ರದ ಜನರಿಗೆ ವಿವಿಧ ಭರವಸೆಗಳನ್ನು ಅವರು ನೀಡಿದ್ದಾರೆ. ಜನರು ಯಾರಿಗೆ ಬೆಂಬಲ ನೀಡಲಿದ್ದಾರೆ? ಎಂದು ಕಾದು ನೋಡಬೇಕಿದೆ. ಪ್ರಣಾಳಿಕೆಯಲ್ಲಿನ ಭರವಸೆಗಳು ಇಲ್ಲಿವೆ

ಕೆರೆಗಳನ್ನು ತುಂಬಿಸುವುದು
* ತಾಲೂಕಿನ ಕೆರೆಗಳಿಗೆ ವಿವಿಧ ಯೋಜನೆಯಡಿ ಲಭ್ಯವಿರುವ ನೀರನ್ನು ತುಂಬಿಸಲು ಸರ್ಕಾರಕ್ಕೆ ಒತ್ತಾಯ
* ರೈತ ಬಾಂಧವರ ಅನುಕೂಲಕ್ಕಾಗಿ ಹೂವು, ಹಣ್ಣು ಮತ್ತು ತರಕಾರಿ ಮಾರುಕಟ್ಟೆ ಸ್ಥಾಪನೆ. ಗ್ರಾಹಕರ ಅನುಕೂಲಕ್ಕಾಗಿ ಸಂತೆ ವ್ಯವಸ್ಥೆ
* ತಾಲೂಕಿನ ಗ್ರಾಮಗಳ ಪ್ರತಿಯೊಂದು ಕುಟುಂಬಕ್ಕೂ ನಿತ್ಯ ಕುಡಿಯುವ ನೀರಿನ ಸರಬರಾಜು ಮಾಡಲು ಶ್ರಮ
* ಗ್ರಾಮಗಳಿಗೆ ಸಾರಿಗೆ ಸೌಲಭ್ಯವನ್ನು ಕಲ್ಪಿಸಲು ಶ್ರಮಿಸಲಾಗುತ್ತದೆ.

ಹೊಸಕೋಟೆ ಪ್ರಣಾಳಿಕೆ
* ತಾಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎನ್ಇಇಟಿ ಮತ್ತು ಸಿಇಟಿ ಪರೀಕ್ಷೆಗಳಿಗೆ ಉಚಿತ ತರಬೇತಿ ಕೇಂದ್ರ ಸ್ಥಾಪನೆ
* ಯುವಕರು ಮತ್ತು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಾಂತ್ರಿಕ ಕಾಲೇಜು ಮತ್ತು ಕೌಶಲ್ಯ ಭವನ ಸ್ಥಾಪನೆ
* ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಲು ನೆರವು
* ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಕ್ರಮ

ಪಕ್ಷೇತರ ಅಭ್ಯರ್ಥಿ ಪ್ರಣಾಳಿಕೆ
* ಸ್ರ್ತೀ ಶಕ್ತಿ ಸಂಘಗಳಿಗೆ ಮಾರುಕಟ್ಟೆ ಭವನ ನಿರ್ಮಿಸಲಾಗುತ್ತದೆ
* ತಾಲೂಕಿನ ಕಲಾ ತಂಡಗಳ ಅನುಕೂಲಕ್ಕಾಗಿ ಸುಸಜ್ಜಿತ ರಂಗಮಂದಿರ ನಿರ್ಮಾಣ
* ಶಾಲಾ-ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ
* ಪ್ರತಿ ಗ್ರಾಮಗಳಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಗುರುತಿಸಿ ಬಡವರಿಗೆ ಉಚಿತ ನಿವೇಶನ ಹಂಚಲು ಮತ್ತು ಸ್ಮಶಾನಕ್ಕಾಗಿ ಜಮೀನು ಮೀಸಲಾಗಿಡಲು ಕ್ರಮ

ಉಪ ಚುನಾವಣೆ ಪ್ರಣಾಳಿಕೆ
* ಹೊಸಕೋಟೆ ಪಟ್ಟಣದಲ್ಲಿ ಚಿತಾಗಾರ ನಿರ್ಮಿಸಲು ಮತ್ತು ಶೀತಲ ಶವ ಪೆಟ್ಟಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ
* ರಾಷ್ಟ್ರೀಯ ಹೆದ್ದಾರಿ 4 (75) ಮತ್ತು ಬೆಂಗಳೂರು ಚೆನ್ನೈ ಹೈವೆಯ ವಿಶೇಷ ಭೂಸ್ವಾಧೀನಾಧಿಕಾರಿ ಕಚೇರಿಯನ್ನು ಹೊಸಕೋಟೆಗೆ ಸ್ಥಳಾಂತರಿಸಲು ಕ್ರಮ
* ರಾಷ್ಟ್ರೀಯ ಹೆದ್ದಾರಿ 4 (75) ರಲ್ಲಿ ಸ್ವಾಧೀನ ಪಡಿಸಿಕೊಂಡಿರುವ ಆಸ್ತಿಗಳಿಗೆ ಮಾರುಕಟ್ಟೆ ಬೆಲೆ ನಿಗದಿ ಮಾಡಿ ಪರಿಹಾರ ಕೊಡಿಸಲು ಜಿಲ್ಲಾಧಿಕಾರಿಗಳಿಗೆ ಒತ್ತಾಯ
* ಬಡ ಜನತ ಅನುಕೂಲಕ್ಕಾಗಿ ಉಚಿತ ಕಾನೂನು ನೆರವು ಸೇವಾಕೇಂದ್ರ ಸ್ಥಾಪನೆ












Click it and Unblock the Notifications